ಮಗನನ್ನು ಚುನಾವಣೆಯಲ್ಲಿ ಗೆಲ್ಲಿಸಲು ಸಿದ್ದರಾಮಯ್ಯ ಯಾರನ್ನು ಬೇಕಾದರೂ ತುಳಿಯುತ್ತಾರೆ: ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ

Update: 2023-12-31 12:09 GMT

Photo: X/@mepratap

ಮೈಸೂರು: “ ಸಿದ್ದರಾಮಯ್ಯ ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ಹಾಗೂ ಮಗನನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲು ಯಾರನ್ನು ಬೇಕಾದರೂ ತುಳಿಯುತ್ತಾರೆ. ಇದನ್ನು ಸಿದ್ದರಾಮಯ್ಯ ಅವರಿಂದ ನೋಡಿ ಕಲಿಯಬೇಕು" ಎಂದು ಸಂಸದ ಪ್ರತಾಪ್‌ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು" ಸಿದ್ದರಾಮಯ್ಯ ರಂತಹ ತಂದೆ ಎಲ್ಲ ಮಕ್ಕಳಿಗೆ ಸಿಗಲ್ಲ. ನೀವೊಬ್ಬ ʼಬ್ರಿಲಿಯೆಂಟ್ ಫಾದರ್ʼ. ನಿಜಕ್ಕೂ‌ ನಿಮ್ಮನ್ನು ಮೆಚ್ಚಿದ್ದೇನೆ. ನಿಮಗೆ ಸಾಷ್ಟಾಂಗ ನಮಸ್ಕಾರಗಳು" ಎಂದು ಹೇಳಿದರು.

ಸಿದ್ದರಾಮಯ್ಯ ಬುದ್ದಿವಂತ ರಾಜಕಾರಣಿ

ಬೆಳಗಾವಿಯಲ್ಲಿ ಹಿಂದುಳಿದ ಮಹಿಳೆಯನ್ನ ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದಾರೆ. ಆ ವಿಚಾರವನ್ನು ನೀವು ನನ್ನ ವಿಷಯ ಇಟ್ಟುಕೊಂಡು ವಿಷಯಾಂತರ ಮಾಡುತ್ತೀರಿ. ನೀವು, ನಿಮ್ಮ ಸಚಿವ ಸಂಪುಟದ ಸದಸ್ಯರು, ಡಿಸಿಎಂ‌ ಎಲ್ಲರೂ ಸಂಸತ್‌ ಭವನದ ಪಾಸ್ ಇಟ್ಟುಕೊಂಡು ಮಾತನಾಡುತ್ತೀರಿ. ಆರೂವರೆ ಕೋಟಿ ಚೆಕ್ ಬೌನ್ಸ್ ಮಾಡಿದ್ದು ಮಧು ಬಂಗಾರಪ್ಪ, ಆರು ತಿಂಗಳು ಜೈಲು ಶಿಕ್ಷೆಗೆ ಒಳಗಾಗಿರುವುದು ಮಧು ಬಂಗಾರಪ್ಪ. ಆದರೆ ಬಂಧನ ಆಗಿದ್ದು ಪ್ರತಾಪ್ ಸಿಂಹನ ತಮ್ಮ. ಮಾಧ್ಯಮ ಮೂಲಕ ವಿಚಾರವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಫ್ ಐಆರ್ ನಲ್ಲಿ ನನ್ನ ತಮ್ಮನ ಹೆಸರೇ ಇಲ್ಲ

ಡಿ.16 ರಂದು ಬೇಲೂರಿನ ಮರಗಳ್ಳತನ ವಿಚಾರದಲ್ಲಿ ನನ್ನ ತಮ್ಮನನ್ನು ಎಳೆದು ತಂದಿದ್ದೀರಿ. ಪ್ರಕರಣದಲ್ಲಿ‌ ಜಯಮ್ಮ, ರಾಜೇಶ್ ಶೆಟ್ಟಿ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಸಹಾಯ ಮಾಡಿದ್ದ ರವಿ ಎಂಬವರು ಪರಾರಿಯಾಗಿದ್ದಾರೆ. ಈವರಗೆ ಮೂವರನ್ನೂ ಹಿಡಿಯಲು ಆಗಿಲ್ಲ. ಎಲ್ಲಾ ಮರಗಳನ್ನು ಹಾಸನದ ಅರಣ್ಯ ಭವನದಲ್ಲಿದೆ. ನಾನು ಹನುಮ ಜಯಂತಿ‌ ಕಾರ್ಯಕ್ರಮದಲ್ಲಿ ಒಂದು‌ ಹೇಳಿಕೆ ನೀಡಿದ್ದೆ. ಅದಾದ ಎರಡೇ ಗಂಟೆಯಲ್ಲಿ ಪ್ರತಾಪಸಿಂಹನ ತಮ್ಮ ಮರಗಳ್ಳತನ ಮಾಡಿದ್ದಾನೆಂದು ಕಾಂಗ್ರೆಸ್ ನವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಆದರೆ ಎಫ್ ಐಆರ್ ನಲ್ಲಿ ನನ್ನ ತಮ್ಮನ ಹೆಸರೇ ಇಲ್ಲ. ಆದರೂ ಆತನನ್ನ ಬಂಧಿಸುವ ಮೂಲಕ ಪ್ರತಾಪಸಿಂಹನನ್ನು ಮುಗಿಸುವ ಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕೇವಲ ನಿಮ್ಮ ರಾಜಕೀಯ ಭವಿಷ್ಯಕ್ಕಾಗಿ ನನ್ನನ್ನು ಎಲ್ಲಾ‌ರೀತಿ ತುಳಿಯುವ ಪ್ರಯತ್ನ ಮಾಡಿದ್ದೀರಿ. ನನ್ನ ಚಾರಿತ್ರ್ಯವಧೆ ಆಗುತ್ತಿದೆ. ನನ್ನ ಕುಟುಂಬದವರಿಗೆ ತೊಂದರೆ ಆಗುತ್ತಿದೆ ಎಂದರು.

ನಿನ್ನೆ ಮೂರು ಗಂಟೆಗೆ ನನ್ನ ತಮ್ಮನನ್ನು ಬಂಧನ ಮಾಡಿದ್ದೀರಿ.? ಆದರೆ ಈವರಗೆ ಯಾಕೆ‌ ನ್ಯಾಯಾಲಯಕ್ಕೆ ಹಾಜರು ಮಾಡಿಲ್ಲ ಎಂದು ಪ್ರಶ್ನಿಸಿದರು. ಇಷ್ಟೊತ್ತು ಯಾಕೆ ಇಟ್ಟು ಕೊಂಡಿದ್ದೀರಿ.? ನಮ್ಮ ವಯೋವೃದ್ಧ ತಾಯಿ, ತಂಗಿಯನ್ನೂ ಬಂಧನ ಮಾಡಿ. ನಿಮ್ಮ‌ಕುಟುಂಬ ರಾಜಕಾರಣವೇ ಮುಂದುವರಿಯಲಿ. ತಾಯಿ ಚಾಮುಂಡಿ, ಕಾವೇರಿ ತಾಯಿ ಬಿಡಲ್ಲ. ಮೈಸೂರು- ಕೊಡಗು ಜನರು ನನ್ನ ಕೈ ಬಿಡಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News