ಬಾಂಗ್ಲಾ ಬಿಕ್ಕಟ್ಟಿನಿಂದ ಭಾರತದಲ್ಲಿ ಜವಳಿ ಉತ್ಪಾದನೆಗೆ ಹಿನ್ನಡೆ : ಸಚಿವ ಶಿವಾನಂದ ಪಾಟೀಲ್

Update: 2024-08-07 14:36 GMT

PC : x/@iShivanandpatil

ಬೆಂಗಳೂರು : ಬಾಂಗ್ಲಾದೇಶದಲ್ಲಿ ಸದ್ಯ ಉಂಟಾಗಿರುವ ಅರಾಜಕತೆ ಪರಿಣಾಮದಿಂದಾಗಿ ಭಾರತದಲ್ಲಿ ಜವಳಿ ಉತ್ಪಾದನೆಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.

ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕಾವೇರಿ ಹ್ಯಾಂಡ್ ಲೂಮ್ಸ್, ನೇಕಾರರ ಸೇವಾ ಕೇಂದ್ರ ಹಾಗೂ ಎಫ್‍ಐಸಿಸಿಐಎಫ್‍ಎಲ್‍ಒ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 10ನೆ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ಕೈಮಗ್ಗ ನೇಕಾರರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಅವರು ಮಾತನಾಡಿದರು.

ಬಾಂಗ್ಲಾದೇಶದಲ್ಲಿ ಶೇ.30ರಷ್ಟು ಜವಳಿ ಉತ್ಪಾದನೆಯಾಗುತ್ತಿತ್ತು. ಆ ದೇಶದಲ್ಲಿ ಸದ್ಯಕ್ಕೆ ಅರಾಜಕತೆ ಸೃಷ್ಟಿಯಾಗಿರುವುದರಿಂದ ಜವಳಿ ಉತ್ಪಾದನೆಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ. ಜತೆಗೆ, ಇದರಿಂದ ಭಾರತದ ಜವಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದ್ದು, ಅದರ ಲಾಭ ಪಡೆಯಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ 25 ಮಿನಿ ಜವಳಿ ಪಾರ್ಕ್ ಸ್ಥಾಪನೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಇನ್ನೂ, 80 ಕೋಟಿ ರೂ. ಅನುದಾನ ನೇಕಾರಿಕೆಗೆ ಕೊಡುತ್ತಿದ್ದೇವೆ. ನೇಕಾರರ ಗೌರವಧನ 2ರಿಂದ 5 ಸಾವಿರಕ್ಕೆ ಹೆಚ್ಚಿಸಿದ್ದೇವೆ. ನೇಕಾರರಿಗೆ ಸ್ಮಾರ್ಟ್ ಕಾರ್ಡ್ ನೀಡುತ್ತಿದ್ದೇವೆ. ನೇಕಾರರ ಮಕ್ಕಳ ಉನ್ನತ ಶಿಕ್ಷಣಕ್ಕೆ ಹಣ ನೀಡಲಾಗುತ್ತಿದೆ. ಪ್ರಮುಖವಗಿ ಉಚಿತ ವಿದ್ಯುತ್ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಸರಕಾರ ಕೈಮಗ್ಗದ ಅಭಿವೃದ್ಧಿಗೆ ಸೂಕ್ತ ಪ್ರೊತ್ಸಾಹ ನೀಡಬೇಕು. ವಿವಿಧ ಇಲಾಖೆಗಳ ಸಿಬ್ಬಂದಿಯ ಸಮವಸ್ತ್ರ ಕೈಮಗ್ಗದ ಉಡುಪು ಬಳಸುವುದರಿಂದ ಹೆಚ್ಚಿನ ನೆರವು ಸಿಗುವಂತಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News