ಕೊಲ್ಲೂರು: ಮನೆಯೊಳಗೆ ನುಗ್ಗಿ ವ್ಯಕ್ತಿಯೊಬ್ಬರ ಮೇಲೆ ಎರಗಿದ ಚಿರತೆ

ಕೊಲ್ಲೂರು ಸಮೀಪ ಗುರುವಾರ ರಾತ್ರಿ ಚಿರತೆಯೊಂದು ಮನೆಯೊಳಗೆ ನುಗ್ಗಿ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿದೆ.

Update: 2023-06-30 06:55 GMT

ಕುಂದಾಪುರ, ಜೂ.30: ಚಿರತೆಯೊಂದು ಮನೆಯೊಳಗೆ ನುಗ್ಗಿ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿದ ಘಟನೆ ಕಳೆದ ರಾತ್ರಿ ಕೊಲ್ಲೂರು ಸಮೀಪ ನಡೆದಿದೆ.

ಕೊಲ್ಲೂರು ಸಮೀಪದ ನಾಗೋಡಿ ಎಂಬಲ್ಲಿ ಈ ಘಟನೆ ನಡೆದಿದ್ದು ಗಣೇಶ್(48) ಎಂಬವರು ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಗೋಡಿ ಚೆಕ್ ಪೋಸ್ಟ್ ಸಮೀಪದ ಮರಾಠಿ ಗ್ರಾಮದ ಕಂಚಿಕೇರಿ ಎಂಬಲ್ಲಿ ಮನೆಯಲ್ಲಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ಮನೆ ಎದುರಿಗಿದ್ದ ನಾಯಿಯನ್ನು ಸೆರೆಹಿಡಿಯಲು ಬಂದಾಗ ನಾಯಿ ಗಾಬರಿಗೊಂಡು ಕಿಟಕಿ ಮೂಲಕ ಮನೆಯೊಳಕ್ಕೆ ಪ್ರವೇಶಿಸಿದೆ. ನಾಯಿಯನ್ನು ಬೆನ್ನತ್ತಿ ಚಿರತೆಯೂ ಮನೆಯೊಳಗೆ ನುಗ್ಗಿದ್ದು, ಈ ವೇಳೆ ಗಣೇಶ್ ಅವರ ಮೇಲೆ ದಾಳಿ ನಡೆಸಿದೆ. ಇದರಿಂದ ಗಣೇಶ್ ಅವರ ಕೈಗೆ ತೀವ್ರ ಗಾಯಗಳಾಗಿವೆ. ಕೂಡಲೇ ಅವರು 108 ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದು ಆಂಬುಲೆನ್ಸ್ ಆಲೂರು 108 ವಾಹನದ ಇಎಂಟಿ ರಾಘವೇಂದ್ರ, ಪೈಲಟ್ ಅಶೋಕ್ ಸ್ಥಳಕ್ಕೆ ಭೇಟಿಯಿತ್ತು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಸಲುವಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೊದಲಿಗೆ ಹುಲಿ ದಾಳಿ ಎಂದು ಸುದ್ದಿಯಾಗಿದ್ದು ಇದು ಚಿರತೆ ದಾಳಿ ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News