ಉಡುಪಿ | ಕೋರ್ಟ್ ಕಾರ್ಯಕಲಾಪಗಳಿಗೆ ಅಡ್ಡಿ: ಹಲವರ ವಿರುದ್ಧ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ಉಡುಪಿ: ಗುಂಪು ಸೇರಿಕೊಂಡ ಜನರು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಕಾರ್ಯಕಲಾಪ ನಡೆಸಲು ಅಡ್ಡಿಪಡಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆವರಣದ ಮುಂದೆ 10 ರಿಂದ 20 ಜನರು ಗುಂಪು ಸೇರಿಕೊಂಡಿದ್ದು, ಅವರನ್ನು ಹಿರಿಯ ಶಿರೇಸ್ತದಾರ ಮಾಯಾ ಆರ್. ವಿಚಾರಿಸಿದಾಗ, ಎಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಾರೆಂಟ್ ವಿಚಾರವಾಗಿ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದ ನ್ಯಾಯಾಧೀಶರನ್ನು ಭೇಟಿ ಆಗಬೇಕಾಗಿರುವುದಾಗಿ ತಿಳಿಸಿದ್ದರು.
ಅದಕ್ಕೆ ಮಾಯಾ, ನ್ಯಾಯಾಧೀಶರ ಅನುಮತಿಯನ್ನು ಪಡೆಯದೇ ಯಾರೂ ಭೇಟಿ ಆಗಲು ಸಾಧ್ಯವಿಲ್ಲ ಹಾಗೂ ನ್ಯಾಯಾಲಯದ ಆದೇಶವನ್ನು ಎಲ್ಲರೂ ಸಹಾ ಪಾಲಿಸಬೇಕು ಎಂದು ತಿಳಿಸಿದ್ದರು. ಆದರೂ ಅವರೆಲ್ಲ ಅಕ್ರಮ ಗುಂಪು ಸೇರಿಕೊಂಡು ನ್ಯಾಯಾಲಯದ ಆವರಣದ ಮುಂದೆ ಗಲಾಟೆ-ಸೃಷ್ಟಿಸಿ ಗೊಂದಲ ಉಂಟುಮಾಡಿ ನ್ಯಾಯಾಲಯದ ಕಾರ್ಯಕಲಾಪಗಳಿಗೆ ಅನಗತ್ಯ ಅಡ್ಡಿಪಡಿಸಿರುವುದಲ್ಲದೇ ಸ್ಥಳದಲ್ಲಿ ಭಯದ ವಾತವಾರಣ ಸೃಷ್ಟಿಮಾಡಿರುವುದಾಗಿ ದೂರಲಾಗಿದೆ.