ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕೃತಕ ನೆರೆ
ಉಡುಪಿ, ಸೆ.24: ಉಡುಪಿ ಜಿಲ್ಲೆಯಾದ್ಯಂತ ಇಂದು ಬೆಳಗ್ಗೆಯಿಂದ ಉತ್ತಮ ಮಳೆಯಾಗಿದ್ದು, ಇದರಿಂದ ಕುಂದಾಪುರದ ಹಲವು ಭಾಗಗಳ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೃತಕ ನೆರೆ ಸೃಷ್ಠಿಯಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ಕುಂದಾಪುರ, ಬೈಂದೂರು, ಉಡುಪಿ, ಕಾಪು, ಮಣಿಪಾಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೋಮವಾರ ಸಂಜೆ ಆರಂಭ ವಾಗಿ ರಾತ್ರಿಯಿಡೀ ಮಳೆ ಬಿರುಸುಗೊಂಡಿದ್ದು ಮಂಗಳವಾರ ಬೆಳಿಗ್ಗೆನಿಂದ ಮಧ್ಯಾಹ್ನದವರೆಗೂ ಮುಂದುವರೆದಿದೆ. ಬೆಳಗ್ಗೆ ಯಿಂದ ವ್ಯಾಪಕ ಮಳೆಯಾಗಿದೆ.
ಕುಂದಾಪುರ ಹಾಗೂ ಬೈಂದೂರಿನಲ್ಲಿ ಬೆಳಿಗ್ಗೆನಿಂದಲೇ ಮೋಡ ಕವಿದ ವಾತಾವರಣ ಸಹಿತ ವ್ಯಾಪಕ ಮಳೆಯಾಗಿದ್ದು ಉಭಯ ತಾಲೂಕಿನಲ್ಲಿ ಒಂದೆರಡು ವಾರಗಳ ನಂತರ ಈ ರೀತಿಯ ಮಳೆ ಸುರಿದಿದೆ. ಇದರಿಂದ ಕೋಟೇಶ್ವರ, ತೆಕ್ಕಟ್ಟೆ, ಕೋಟ, ಕುಂದಾಪುರ ಸರ್ವೀಸ್ ರೋಡಿನ ಟಿಟಿ ರಸ್ತೆಯ ಎರಡೂ ಭಾಗದಲ್ಲಿ ಮಳೆ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿದ್ದು ಇದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಕಳೆದ 24ಗಂಟೆ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 54ಮಿ.ಮೀ. ಮಳೆಯಾಗಿದ್ದು, ಕಾರ್ಕಳ- 45.1ಮಿ.ಮೀ., ಕುಂದಾಪುರ- 65.4ಮಿ.ಮೀ., ಉಡುಪಿ- 28.8ಮಿ.ಮೀ., ಬೈಂದೂರು- 71.4ಮಿ.ಮೀ., ಬ್ರಹ್ಮಾವರ- 40.2ಮಿ.ಮೀ., ಕಾಪು- 51.9ಮಿ.ಮೀ., ಹೆಬ್ರಿ- 59.6ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.