ವಿಜಯನಗರ | ತುರ್ತು ಸೇವೆ ನೀಡಿ ಜೀವ ಸಂರಕ್ಷಣೆ ಮಾಡುವುದು ಅಗ್ನಿಶಾಮಕ ದಳದ ಕರ್ತವ್ಯ : ವಾಲಿಪ್ರಮೋದ್

ವಿಜಯನಗರ(ಹೊಸಪೇಟೆ) : ಅಗ್ನಿ ಅವಘಡಗಳು ಆಕಸ್ಮಿಕ ದುರಂತಗಳಾಗಿದ್ದು, ಧೈರ್ಯವೇ ಸರ್ವತ್ರ ಸಾಧನವಾಗಿದೆ. ತುರ್ತು ಸೇವೆ ನೀಡಿ ಜೀವ ಸಂರಕ್ಷಣೆಗೆ ಆದ್ಯತೆ ನೀಡುವುದು ಅಗ್ನಿಶಾಮಕ ದಳದ ಕರ್ತವ್ಯವಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಾಲಿಪ್ರಮೋದ್ ಹೇಳಿದರು.
ನಗರದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಡಿಎವಿ ಪಬ್ಲಿಕ್ ಶಾಲೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಬೆಂಕಿ ಅವಘಡಗಳಲ್ಲಿ ಧೈರ್ಯ, ತಾಳ್ಮೆಯಿಂದ ಸೇವೆ ನೀಡಲು ಮುಂದಾಗಬೇಕು. ಅಗ್ನಿ ದುರಂತಗಳು ನಡೆದಾಗ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಅರಿತಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಹರಿಪ್ರಸಾದ್ ಆನೆಗೊಂದಿ, ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಕಾಮರ್ಸ್ ನಿರ್ದೇಶಕ ಟಿ.ಎಂ.ಚಂದ್ರಶೇಖರ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಘದ ಜಿಲ್ಲಾ ಕಾರ್ಯದರ್ಶಿ ಪಿ.ಮಂಜುನಾಥಪ್ಪ, ಡಿಎವಿ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಎಸ್.ಅಶುತೋಷ್, ಸಂಸ್ಥೆಯ ಕಾರ್ಯದರ್ಶಿ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.