ಇಲಾಖೆಗಳಲ್ಲಿ 1,49,959 ಕಡತಗಳು ವಿಲೇವಾರಿಯಾಗದೆ ಬಾಕಿ

Update: 2023-08-04 03:31 GMT

ಬೆಂಗಳೂರು, ಆ.3: ಅಧಿಕಾರಿ ನೌಕರರ ವರ್ಗಾವಣೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಪನ್ಮೂಲ ಕ್ರೋಡೀಕರಣ ಮತ್ತು ಪಕ್ಷ ಹಾಗೂ ಶಾಸಕರ ಒಳಬೇಗುದಿಯಲ್ಲಿ ಕಾಂಗ್ರೆಸ್ ಸರಕಾರವು ಬೇಯುತ್ತಿರುವ ಹೊತ್ತಿನಲ್ಲಿಯೇ ಸರಕಾರದ ಇಲಾಖೆಗಳಲ್ಲಿ 2023ರ ಜುಲೈ 26ರ ಅಂತ್ಯಕ್ಕೆ ಒಟ್ಟಾರೆ 1,49,959 ಕಡತಗಳು ವಿಲೇವಾರಿಯಾಗದೆ ಬಾಕಿ ಇರುವುದು ಇದೀಗ ಬಹಿರಂಗವಾಗಿದೆ.

ಕಾಂಗ್ರೆಸ್ ಸರಕಾರವು ತನ್ನ 2 ತಿಂಗಳನ್ನು ಪೂರ್ಣಗೊಳಿಸಿದ್ದರೂ ಸಹ ಕಡತಗಳ ವಿಲೇವಾರಿಯಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಸರಕಾರದ ಎಲ್ಲಾ ಇಲಾಖೆಗಳಲ್ಲಿ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಕಡತಗಳಿಗೆ ಧೂಳು ಮೆತ್ತಿಕೊಂಡಿದೆ. ವರ್ಗಾವಣೆ ಸಂಬಂಧಿತ ಕಡತಗಳಷ್ಟೇ ಚಿರತೆ ವೇಗದಲ್ಲಿ ವಿಲೇವಾರಿಯಾಗುತ್ತಿವೆಯೇ ವಿನಃ ಇತರ ವಿಷಯಗಳ ಕುರಿತಾದ ಕಡತಗಳು ತೆವಳುತ್ತಿವೆ ಎಂದು ತಿಳಿದು ಬಂದಿದೆ.

ಕಡತಗಳ ವಿಲೇವಾರಿಗೆ ಸಂಬಂಧಿಸಿದಂತೆ ಸರಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ 2023ರ ಆಗಸ್ಟ್ 1ರ ಸಭೆಗೆ ವಿವಿಧ ಇಲಾಖೆಗಳು ಕಡತಗಳ ವಿಲೇವಾರಿ ಕುರಿತಾದ ಅಂಕಿ ಅಂಶಗಳನ್ನು ಮಂಡಿಸಿವೆ. ಈ ಅಂಕಿ ಅಂಶಗಳು ‘ಠಿಛ್ಛಿಜ್ಝಿಛಿ.ಜ್ಞಿ’ಗೆ ಲಭ್ಯವಾಗಿವೆ.

ವಿಶೇಷವೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಾಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ 11,017 ಕಡತಗಳು ವಿಲೇವಾರಿಯಾಗದೆ ಧೂಳು ಮೆತ್ತಿಕೊಂಡಿರುವುದು ಗೊತ್ತಾಗಿದೆ.

ಎಫ್‌ಎಂಎಸ್ ಮತ್ತು ಇ-ಆಫೀಸ್‌ನಲ್ಲಿ ಪ್ರಾರಂಭದಲ್ಲಿ ತೆರೆದಿದ್ದ ಕಡತಗಳೂ ಸೇರಿದಂತೆ ಜೂನ್ 1ರಿಂದ ಜುಲೈ 26ರವರೆಗೆ ಒಟ್ಟಾರೆ 1,49,959 ಸಂಖ್ಯೆಯಲ್ಲಿ ಕಡತಗಳು ವಿಲೇವಾರಿಗೆ ಬಾಕಿ ಇವೆ. ಕಡತಗಳ ವಿಲೇವಾರಿಯಲ್ಲಿ ಮೂಲಭೂತ ಸೌಲಭ್ಯ ಅಭಿವೃದ್ಧಿ, ಸಣ್ಣ ನೀರಾವರಿ, ಸಿಬ್ಬಂದಿ ಆಡಳಿತ ಸುಧಾರಣೆ, ಆಹಾರ ನಾಗರಿಕ ಸರಬರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಹಕಾರ ಇಲಾಖೆಯು ಶೇ.50ಕ್ಕಿಂತ ಕಡಿಮೆ ವಿಲೇವಾರಿ ಮಾಡಿ ಡಿ ವರ್ಗದಲ್ಲಿವೆ. ಇದರಲ್ಲಿ ಹೊಸದಾಗಿ ತೆರೆದಿದ್ದ 33,657 ಕಡತಗಳೂ ಇವೆ. ಅದೇ ರೀತಿ ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಒಟ್ಟು 26ಕ್ಕೂ ಹೆಚ್ಚು ಇಲಾಖೆಗಳು ಕಡತ ವಿಲೇವಾರಿಯಲ್ಲಿ (ಶೇ.50ರಿಂದ 75) ಸಿ ವರ್ಗದಲ್ಲಿರುವುದು ಗೊತ್ತಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಎಫ್‌ಎಂಎಸ್ ಮತ್ತು ಇ ಆಫೀಸ್‌ನಲ್ಲಿ 3,973, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲಿ 3,035, ಸಣ್ಣ ನೀರಾವರಿಯಲ್ಲಿ 1,706, ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಯಲ್ಲಿ 1,452, ಸಹಕಾರ ಇಲಾಖೆಯಲ್ಲಿ 1,797 ಕಡತಗಳು ವಿಲೇವಾರಿಗೆ ಬಾಕಿ ಇವೆ.

ಸಿ ವರ್ಗದಲ್ಲಿರುವ ಉನ್ನತ ಶಿಕ್ಷಣ ಇಲಾಖೆಯಲ್ಲಿ 4,069, ನಗರಾಭಿವೃದ್ಧಿಯಲ್ಲಿ 15,069, ಜಲಸಂಪನ್ಮೂಲದಲ್ಲಿ 6,483, ಅರಣ್ಯ ಪರಿಸರ ಜೀವಿಶಾಸ್ತ್ರದಲ್ಲಿ 7,608, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯಲ್ಲಿ 11,017, ವಾಣಿಜ್ಯ ಮತ್ತು ಕೈಗಾರಿಕೆಯಲ್ಲಿ 6,714, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ನಲ್ಲಿ 5,708, ವಸತಿಯಲ್ಲಿ 1,388, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ 1,561, ಕೌಶಲ್ಯಾಭಿವೃದ್ಧಿಯಲ್ಲಿ 1,789, ಇಂಧನ ಇಲಾಖೆಯಲ್ಲಿ 2,356 ಕಡತಗಳು ವಿಲೇವಾರಿಗೆ ಬಾಕಿ ಇರುವುದು ತಿಳಿದು ಬಂದಿದೆ.

ಬಿ ವರ್ಗದಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ 10,411, ಲೋಕೋಪಯೋಗಿಯಲ್ಲಿ 6,444, ತೋಟಗಾರಿಕೆ ಮತ್ತು ರೇಷ್ಮೆಯಲ್ಲಿ 2,472, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 5,176, ಒಳಾಡಳಿತ ಇಲಾಖೆಯಲ್ಲಿ 7,209, ಕಾರ್ಮಿಕ ಇಲಾಖೆಯಲ್ಲಿ 1,101, ಸಮಾಜ ಕಲ್ಯಾಣ ಇಲಾಖೆಯಲ್ಲಿ 1,492 ಕಡತಗಳು ವಿಲೇವಾರಿಗೆ ಬಾಕಿ ಇರುವುದು ಗೊತ್ತಾಗಿದೆ.

ಕಡತಗಳು ಕಳೆದ 5,244 ದಿನಗಳಿಂದಲೂ ಹಾಗೇ ಉಳಿದುಕೊಂಡಿದ್ದು ವಿಲೇವಾರಿಯಾಗದೆ ಬಾಕಿ ಇರುವುದು ಇದೀಗ ಬಹಿರಂಗವಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಈ ಮಾಹಿತಿಯನ್ನು ಒದಗಿಸಲಾಗಿದೆ.

ಸಚಿವಾಲಯದ ಇಲಾಖೆಗಳಲ್ಲಿ ಕಡತ ವಿಲೇವಾರಿ ವಿಳಂಬವಾಗುತ್ತಿರುವ ಕುರಿತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿನ ಕೆಡಿಪಿ ಸಭೆಗಳಲ್ಲಿ ಚರ್ಚೆಯಾಗುತ್ತಿದ್ದರೂ ಸಮಾಜ ಕಲ್ಯಾಣ ಇಲಾಖೆಯೊಂದರಲ್ಲೇ 5,244 ದಿನಗಳಿಂದ 832ಕ್ಕೂ ಹೆಚ್ಚು ಕಡತಗಳು ವಿಲೇವಾರಿಗೆ ಬಾಕಿ ಇರುವುದು ಮುನ್ನೆಲೆಗೆ ಬಂದಿದೆ.

ಸಮಾಜ ಕಲ್ಯಾಣ ಇಲಾಖೆಯ ಸಚಿವರ ಬಳಿಯೇ ಆರಂಭದಲ್ಲಿದ್ದ 119 ಕಡತಗಳೂ ಸೇರಿದಂತೆ 2023ರ ಆಗಸ್ಟ್ 2ರಿಂದ 3ರ ಅಂತ್ಯಕ್ಕೆ ಬಾಕಿ ಇರುವ ಕಡತಗಳು ಒಟ್ಟಾರೆಯಾಗಿ 5,116 ದಿನಗಳಿಂದಲೂ ಬಾಕಿ ಇವೆ.

ಎಸ್‌ಟಿ ಇಲಾಖೆಯ ಸಚಿವರ ಬಳಿ 17, ಇಲಾಖೆಯ ಉಪ ಕಾರ್ಯದರ್ಶಿ (1) ಬಳಿ 302 7 ಕಡತಗಳು 617 ದಿನದಿಂದಲೂ ಬಾಕಿ ಇವೆ. ಅದೇ ರೀತಿ ಉಪ ಕಾರ್ಯದರ್ಶಿ (2) ಬಳಿ 145 ಕಡತಗಳು 480 ದಿನ, ಉಪ ಕಾರ್ಯದರ್ಶಿ (3) ಬಳಿ 117 ಕಡತಗಳು 857 ದಿನಗಳಿಂದ, ಅಧೀನ ಕಾರ್ಯದರ್ಶಿ (1) ಬಳಿ 169 ಕಡತಗಳು 407 ದಿನ, ಅಧೀನ ಕಾರ್ಯದರ್ಶಿ (2) ಬಳಿ 169 ಕಡತಗಳು 215 ದಿನ, ಅಧೀನ ಕಾರ್ಯದರ್ಶಿ (3) ಬಳಿ 8 ಕಡತಗಳು 54 ದಿನದಿಂದಲೂ ಬಾಕಿ ಇರುವುದು ಇಲಾಖೆಯು ವೆಬ್‌ಸೈಟ್‌ನಲ್ಲಿ ಒದಗಿಸಿರುವ ಮಾಹಿತಿಯಿಂದ ತಿಳಿದು ಬಂದಿದೆ.

2023ರ ಎಪ್ರಿಲ್ 25ರಿಂದ 26ರವರೆಗೆ ಒಟ್ಟು 557 ಕಡತಗಳ ಪೈಕಿ 231 ಕಡತಗಳನ್ನು ಇಲಾಖೆಯು ಸ್ವೀಕರಿಸಿತ್ತು. ಇದರಲ್ಲಿ 36 ಕಡತಗಳನ್ನಷ್ಟೇ ಮುಕ್ತಾಯಗೊಳಿಸಿದೆ. 234 ಕಡತಗಳನ್ನು ಮುಂದಿನ ಹಂತಕ್ಕೆ ರವಾನಿಸಿದೆ. ಒಟ್ಟು 383 ಕಡತಗಳು ವಿಲೇವಾರಿಗೆ ಬಾಕಿ ಇದ್ದವು. ಕಡತಗಳ ರಾಶಿ ಬೆಟ್ಟದಷ್ಟಿದ್ದರೂ ಅವುಗಳನ್ನು ವಿಲೇವಾರಿ ಮಾಡದೇ ವಿಳಂಬಕ್ಕೆ ಕಾರಣವಾಗಿದ್ದ ಹಿಂದಿನ ಬಿಜೆಪಿ ಸರಕಾರವು ಪ್ರತಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್‌ನ ಕೆಂಗಣ್ಣಿಗೆ ಗುರಿಯಾಗಿತ್ತು.

ಈ ಕುರಿತು ‘the-file.in’ ವರದಿ ಪ್ರಕಟಿಸಿತ್ತು.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಪದಗ್ರಹಣ ಮಾಡಿ ತಮ್ಮ ಅವಧಿ ಪೂರ್ಣಗೊಳಿಸುವ ಹಂತಕ್ಕೆ ಬಂದಿದ್ದರೂ ಮುಖ್ಯಮಂತ್ರಿ ಮತ್ತು ವಿವಿಧ ಸಚಿವರೂ ಸೇರಿದಂತೆ ಕರ್ನಾಟಕ ಸರಕಾರದ ಸಚಿವಾಲಯ ಮತ್ತು ಇಲಾಖೆಗಳಲ್ಲಿ 2023ರ ಮಾರ್ಚ್ 16ರವರೆಗೆ ಒಟ್ಟು 1,48,782 ಕಡತಗಳು ವಿಲೇವಾರಿಗೆ ಬಾಕಿ ಇದ್ದವು.

ಎಫ್‌ಎಂಎಸ್‌ನಲ್ಲಿದ್ದ 43,376 ಕಡತಗಳ ಪೈಕಿ ಮುಕ್ತಾಯಗೊಂಡ ಕಡತಗಳ ಸಂಖ್ಯೆ 2,060 ಸಂಖ್ಯೆಯಲ್ಲಿದ್ದರೆ ಈ ಆಫೀಸ್‌ನಲ್ಲಿದ್ದ 1,02,425 ಕಡತಗಳ ಪೈಕಿ 25,639 ಸೇರಿ ಒಟ್ಟಾರೆ 27,699 ಕಡತಗಳು ಮುಕ್ತಾಯಗೊಂಡಿದ್ದವು. ಉಳಿದಂತೆ ವಿಲೇವಾರಿಗೆ ಎಫ್‌ಎಂಎಸ್‌ನಲ್ಲಿ 44,576, ಇ ಅಫೀಸ್‌ನಲ್ಲಿ 1,04,206 ಸೇರಿ ಒಟ್ಟಾರೆ 1,48,782 ಕಡತಗಳು ಬಾಕಿ ಇದ್ದವು.

2021ರ ಅಕ್ಟೋಬರ್ 25ರ ಅಂತ್ಯಕ್ಕೆ ಒಟ್ಟು 31,308 ಕಡತಗಳು ವಿಲೇವಾರಿಗೆ ಬಾಕಿ ಉಳಿದಿದ್ದವು. ಇದೇ ಅವಧಿಯಲ್ಲಿ 18 ಇಲಾಖೆಗಳ ಮುಖ್ಯಸ್ಥರ ಹಂತದಲ್ಲೇ 31,308 ಕಡತಗಳು ವಿಲೇವಾರಿಯಾಗಿರಲಿಲ್ಲ. ಬಸವರಾಜ ಬೊಮ್ಮಾಯಿ ಅವರು ನಿಭಾಯಿಸುವ ಹಣಕಾಸು ಇಲಾಖೆಯಲ್ಲಿಯೇ 2021ರ ಅಕ್ಟೋಬರ್ 27ರ ಅಂತ್ಯಕ್ಕೆ 3,351 ಕಡತಗಳು ಬಾಕಿ ಉಳಿದಿದ್ದವು.

ಕಡತಗಳ ವಿಲೇವಾರಿಗೆ ಅಧೀನ ಕಾರ್ಯದರ್ಶಿ ಅಥವಾ ಉಪಕಾರ್ಯದರ್ಶಿಗಳನ್ನು ಕಡತ ವಿಲೇವಾರಿ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲು ಮುಂದಾಗಿದೆ. ನೋಡೆಲ್ ಅಧಿಕಾರಿಗಳು ಕಾನೂನು ಇಲಾಖೆ ಸಂಯೋಜನೆ ಮಾಡಿ ಎರಡು ತಿಂಗಳೊಳಗೆ ಕಡತ ವಿಲೇವಾರಿ ಮಾಡಿಸಬೇಕು ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿದ್ದನ್ನು ಸ್ಮರಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News