ಅಧಿಕ ಬಡ್ಡಿ, ಸಾಲ ವಸೂಲಿ ಹೆಸರಲ್ಲಿ ಕಿರುಕುಳ ಆರೋಪ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವಿರುದ್ಧ ರಾಜ್ಯಾದ್ಯಂತ ದೂರು

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಿರುಸಾಲ ನೀಡುವ ಚಟುವಟಿಕೆಗಳನ್ನು ನಡೆಸುತ್ತಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ನೌಕರರ ವಿರುದ್ಧ ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ದೂರುಗಳು ಸಲ್ಲಿಕೆಯಾಗಿವೆ. ಈ ದೂರುಗಳನ್ನಾಧರಿಸಿ ಸ್ಥಳೀಯ ಪೊಲೀಸರು ಎಫ್ಐಆರ್ ಕೂಡ ದಾಖಲಿಸಿದ್ದಾರೆ.
ಆರ್ಬಿಐ ನಿಯಮಗಳನ್ನು ಉಲ್ಲಂಘಿಸಿ ವಾರದ ಬಡ್ಡಿ ವಿಧಿಸುತ್ತಿರುವುದು, ಅರ್ಜಿದಾರರ ಸ್ವ-ಸಹಾಯ ಸಂಘದ ಬ್ಯಾಂಕ್ ಪಾಸ್ಬುಕ್, ಪಿಆರ್ಕೆ ಬಾಂಡ್ ಕೊಡದೇ ಸಂಘವು ಬಡ್ಡಿ ದಂಧೆ ನಡೆಸುತ್ತಿದೆ. ಈ ಸಂಘದ ಅಧ್ಯಕ್ಷ ಡಾ.ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘವು ಅತೀ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದೆ ಎಂದು ಮಳವಳ್ಳಿ ಕಾಂಗ್ರೆಸ್ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಬಹಿರಂಗವಾಗಿ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಈ ಸಂಘವು ಮೈಕ್ರೋ ಫೈನಾನ್ಸ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಹೇಳಿಕೆ ನೀಡಿದ್ದರು. ಈ ಮಧ್ಯೆ ಮೈಕ್ರೋ ಫೈನಾನ್ಸ್ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ನಿವಾರಣೆ ಹಾಗೂ ಮೈಕ್ರೋ ಫೈನಾನ್ಸ್ಗಳ ಹಾವಳಿಗೆ ಕಡಿವಾಣ ಹಾಕುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆಯೂ ನಡೆದಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವಿರುದ್ಧ ನೌಕರರ ಹೆಸರು ಸಮೇತ ಕಳೆದ ಒಂದು ವರ್ಷದಿಂದಲೂ ಸಲ್ಲಿಕೆಯಾಗಿರುವ ದೂರುಗಳು ಮುನ್ನೆಲೆಗೆ ಬಂದಿವೆ.
ಈ ಸಂಘವು ಆರ್ಬಿಐ ನಿಯಮ ಪಾಲಿಸಿಲ್ಲ, ನಿಯಮ ಮೀರಿ ವಿಪರೀತ ಬಡ್ಡಿ ವಿಧಿಸಿರುವುದು, ಮಾನಸಿಕ ಸೇರಿದಂತೆ ವಿವಿಧ ರೀತಿಯ ಕಿರುಕುಳ, ಮಾನಹಾನಿ ಮಾಡುವುದು, ಮನೆಗೆ ನುಗ್ಗಿ ತೊಂದರೆ ನೀಡುತ್ತಿರುವುದು, ಮೀಟರ್ ಬಡ್ಡಿ, ಬೆದರಿಕೆ ಹಾಕುವುದು, ಮರು ಪಾವತಿಸಿದ ಹಣಕ್ಕೆ ಮಾಹಿತಿ ನೀಡದೇ ಇರುವುದು, ಮಾನಸಿಕ ಹಿಂಸೆ ನೀಡುವುದು, ಉಳಿತಾಯ ಹಣದ ಬಗ್ಗೆ ಲೆಕ್ಕ ನೀಡದಿರುವುದು, ಸಾಲ ನೀಡಿಕೆ ಮತ್ತು ಮರು ಪಾವತಿ ಕುರಿತು ಸಮರ್ಪಕ ದಾಖಲಾತಿಗಳನ್ನು ನೀಡುತ್ತಿಲ್ಲ ಎಂದು ಹತ್ತಾರು ದೂರುಗಳು ಸಲ್ಲಿಕೆಯಾಗಿವೆ.
ಶ್ರೀ ಕ್ಷೇತ್ರ ಎಸ್ಕೆಡಿಆರ್ಡಿಪಿ ಗ್ರಾಮೀಣಾಭಿವೃದ್ಧಿ ಯೋಜನೆಯ ಶ್ರವಣಬೆಳಗೊಳದ ಶಾಖೆಯ ಸುನೀತಾ ಮತ್ತು ಸಿಇಒ ಅನಿಲ್ ಕುಮಾರ್ ಮತ್ತು ಟ್ರಸ್ಟ್ನ ಇತರ ಸದಸ್ಯರು, ಸಿಬ್ಬಂದಿಯು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಹೇಂದ್ರ ಎಂಬವರ ಕುಟುಂಬದ ಸದಸ್ಯರಿಗೆ ನಿಯಮ ಮೀರಿ ವಿಪರೀತ ಬಡ್ಡಿ ವಿಧಿಸಿದ್ದಾರೆ ಮತ್ತು ಪ್ರತಿ ವಾರ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ (ದೂರಿನ ಸಂಖ್ಯೆ; 1/1623/2025- ದಿನಾಂಕ 02/01/2025) ವಿವರಿಸಿರುವುದು ಗೊತ್ತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಂತ್ರ ಗ್ರಾಮದ ಕೃಷ್ಣ ರೈ ಎಂಬವರು ಸಂಘವು ಆರ್ಬಿಐ ನಿಯಮವನ್ನು ಪಾಲಿಸುತ್ತಿಲ್ಲ ಮತ್ತು ಅವ್ಯವಹಾರ ನಡೆಸುತ್ತಿದೆ ಎಂದು ದೂರಿದ್ದಾರೆ. ಈ ದೂರಿನಲ್ಲಿಯೂ ಸಂಘದ ದಕ್ಷಿಣ ಕನ್ನಡ ಜಿಲ್ಲೆ ಅಧ್ಯಕ್ಷ ಅನಿಲ್ ಕುಮಾರ್ ಎಂಬವರ ಹೆಸರನ್ನು ಉಲ್ಲೇಖಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ಇದೇ ಕಡಬ ತಾಲೂಕಿನ ಹಳೆನೆರಂಕಿ ಗ್ರಾಮದ ಎಂ.ದಿವಾಕರ ಎಂಬವರೂ ಸಹ ಸಂಘವು ಆರ್ಬಿಐ ನಿಯಮವನ್ನು ಪಾಲಿಸುತ್ತಿಲ್ಲ ಎಂದು ದೂರಿದ್ದಾರೆ. ಈ ಸಂಘದ ಸಿಬ್ಬಂದಿಯು ಅರ್ಜಿದಾರರಿಗೆ ತೊಂದರೆ ನೀಡಿದ್ದಾರೆ ಎಂದು ದೂರಿನಲ್ಲಿ(ದೂರಿನ ಸಂಖ್ಯೆ 177/ಪಿಟಿನ್/ಕೆಪಿಎಸ್/2024, ದಿನಾಂಕ 25.12.2024) ವಿವರಿಸಲಾಗಿದೆ ಎಂದು ಗೊತ್ತಾಗಿದೆ.
ಬಂಟ್ವಾಳದ ಕುಕ್ಕಡಕಟ್ಟೆಯ ಬಲಪುನಿ ಗ್ರಾಮದ ನೂರ್ ಜಹಾನ್ ಎಂಬ ಅರ್ಜಿದಾರರಿಗೆ ಸಂಘದ ನಳಿನಾಕ್ಷಿ ಮತ್ತು ಇತರರು ಕಿರುಕುಳ ನೀಡಿದ್ದಾರೆ ಎಂದು 2024ರ ಫೆ.2ರಂದೇ ದೂರಿರುವುದು ತಿಳಿದು ಬಂದಿದೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪೆಡುಬೆಲ್ಲದ ಹರೀಶ್ ಅಮೀನ್ ಎಂಬವರು ಪಡೆದಿದ್ದ 3 ಲಕ್ಷ ರೂ. ಮೊತ್ತದ ಸಾಲಕ್ಕೆ ನಿಯಮ ಮೀರಿ ಬಡ್ಡಿ ವಿಧಿಸಿದ್ದಾರೆ ಮತ್ತು ಇದಕ್ಕೆ ಮೀಟರ್ ಬಡ್ಡಿ ವಿಧಿಸಲಾಗಿದೆ. ಪ್ರತಿ ವಾರವೂ 8-10 ಮಂದಿ ಮನೆಗೆ ನುಗ್ಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು (ದೂರಿನ ಸಂಖ್ಯೆ; 377/ಪಿಟಿಎನ್/ಎಸ್ಎಚ್ಆರ್/ಯುಡಿ/2024, ದಿನಾಂಕ 23.12.2024) ದೂರಲಾಗಿದೆ. ಈ ದೂರಿನಲ್ಲಿಯೂ ಸಂಘದ ಸಿಇಒ ಅನಿಲ್ ಕುಮಾರ್ ಅವರನ್ನು ಪ್ರತಿವಾದಿಯನ್ನಾಗಿಸಲಾಗಿದೆ ಎಂದು ಗೊತ್ತಾಗಿದೆ.
ಬೆಳ್ತಂಗಡಿಯ ರೆಖ್ಯಾ ಗ್ರಾಮದ ಜಯಶ್ರೀ ಅವರಿಗೂ ಸಂಘದ ಅಧ್ಯಕ್ಷ , ಸಿಇಒ ಮತ್ತು ಸದಸ್ಯರು ನಿಯಮ ಮೀರಿ ವಿಪರೀತವಾಗಿ ವಾರದ ಬಡ್ಡಿ ವಿಧಿಸಿದ್ದಾರೆ. ಪ್ರತಿ ವಾರ ಮನೆಗೆ ನುಗ್ಗಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ (ದೂರಿನ ಸಂಖ್ಯೆ; 355/ಒಪಿಎಸ್/2024, ದಿನಾಂಕ 30/12/2024) ವಿವರಿಸಿರುವುದು ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪುಂಚಪಡಿ ಗ್ರಾಮದ ಕಮಲಾ ಎಂಬವರು ಸಾಲ ಮರುಪಾವತಿಸಲು ಬಾಕಿ ಇದ್ದುದರಿಂದ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಮತ್ತು ಇತರ ಸದಸ್ಯರು ಕಿರುಕುಳ ನೀಡಿದ್ದಾರೆ ಎಂದು 2024ರ ಡಿಸೆಂಬರ್ 16ರಂದೇ ದೂರಿರುವುದು ಗೊತ್ತಾಗಿದೆ.
ಮಂಡ್ಯ ಜಿಲ್ಲೆಯ ಮೇಲುಕೋಟೆ ತಾಲೂಕಿನ ಎಚ್.ಆರ್. ಉಮಾದೇವಿ ಎಂಬವರು ಪಡೆದಿದ್ದ ಸಾಲಕ್ಕೆ ಸಂಘದ ಸಿಇಒ ಅನಿಲ್ ಕುಮಾರ್ ಮತ್ತು ಇತರ ಸದಸ್ಯರು ನಿಯಮ ಮೀರಿ ವಿಪರೀತವಾದ ಬಡ್ಡಿ ವಿಧಿಸಿದ್ದರು ಎಂದು ದೂರಿನಲ್ಲಿ ಆಪಾದಿಸಿದ್ದರು. ಅಲ್ಲದೆ ಪ್ರತಿ ವಾರ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದೂ ದೂರಿರುವುದು ತಿಳಿದು ಬಂದಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ವಡಕಪ್ಪ ಬಿ. ಎಂಬವರು ಎಸ್ಕೆಡಿಆರ್ಡಿಪಿ ಸಂಘದಲ್ಲಿ ಸಾಲ ಪಡೆದಿದ್ದರು. ಇದನ್ನು ಮರು ಪಾವತಿಸಿದ್ದರು. ಆದರೆ ಸಂಘದ ಹನುಮೇಶ ಮತ್ತು ಸಿದ್ದರಾಮ ಎಂಬವರು ಮಾಹಿತಿ ನೀಡುತ್ತಿಲ್ಲ ಎಂದು ವಡಕಪ್ಪ ಅವರು 2024ರ ಡಿಸೆಂಬರ್ 19ರಂದು ದೂರಿರುವುದು ಗೊತ್ತಾಗಿದೆ.
ವಿಜಯನಗರ ಜಿಲ್ಲೆಯ ಹೆಚ್ಬಿ ಹಳ್ಳಿ ತಾಲೂಕಿನ ಮೋರಗೇರಿ ಗ್ರಾಮದ ನೀಲಗುಂಡ ಎಂಬವರು ಸಂಘದಿಂದ ಪಡೆದಿದ್ದ ಸಾಲವನ್ನು ಹಂತಹಂತವಾಗಿ ಮರುಪಾವತಿಸಿದ್ದರು. ಆದರೆ ಸಂಘದ ನಾಗವೇಣಿ, ಪೂಜಾ ಮತ್ತು ಸೂಪರ್ವೈಸರ್ ಗುತ್ತೆಪ್ಪ ಎಂಬವರು ರಸೀದಿ ನೀಡಿಲ್ಲ. ಬದಲಿಗೆ ಬೆದರಿಕೆ ಹಾಕಿದ್ದರು ಎಂದು ನೀಲಗುಂಡ ಅವರು 2024ರ ನವೆಂಬರ್ 29ರಂದು ( ಸಂಖ್ಯೆ 328/2024) ದೂರಿದ್ದಾರೆ.
ಉಡುಪಿಯ ತೆಂಕುಬಿರ್ತಿಯ ವಿಮಲಾ ಎಂಬವರು ಸಹ ಎಸ್ಕೆಡಿಆರ್ಡಿಪಿಯ ಸಿಬ್ಬಂದಿಯಿಂದ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಈ ಕುರಿತು 2025ರ ಜನವರಿ 3ರಂದು ದೂರು (ಸಂಖ್ಯೆ; 9/1208/2025) ನೀಡಿದ್ದಾರೆ. ಕುಂದಾಪುರದ ಅಂಗಲಿ ಗ್ರಾಮದ ಚಂದ್ರ ಕಾಲಂಜೆ ಎಂಬವರು ಸಹ ಸಂಘದ ಹಣಕಾಸಿನ ವ್ಯವಹಾರದ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿ ದೂರು (ಸಂಖ್ಯೆ; 306/ಪಿಟಿನ್/ಕೆಎನ್ಡಿ/2024, ದಿನಾಂಕ 02/12/2024) ನೀಡಿದ್ದಾರೆ ಎಂದು ಗೊತ್ತಾಗಿದೆ.
ಅದೇ ರೀತಿ ಕಾರ್ಕಳದ ಅಬ್ದುಲ್ ಎಂಬವರು ಎಸ್ಕೆಡಿಆರ್ಡಿಪಿ ಸಂಘದಿಂದ 2 ಲಕ್ಷ ರೂ. ಸಾಲ ಪಡೆದಿದ್ದರು. ಇವರು ಪ್ರತಿ ವಾರ 1,500 ರೂ.ನಂತೆ ಮರು ಪಾವತಿಸುತ್ತಿದ್ದರು. ಒಂದು ವರ್ಷದಿಂದ ಸಾಲ ಪಾವತಿಸಿರಲಿಲ್ಲ. ಅದಕ್ಕೆ ಸಂಘದ ರಮ್ಯಾ ಮತ್ತು ಇತರ 8-10 ಮಂದಿ ನಿಯಮ ಮೀರಿ ಬಡ್ಡಿ ವಿಧಿಸಿದ್ದರು. ಅಲ್ಲದೆ ಪ್ರತಿ ವಾರ ಮನೆಗೆ ಬಂದು ಮಾನಸಿಕ ಹಿಂಸೆ, ತೊಂದರೆ ನೀಡಿದ್ದರು ಎಂದು ಅಬ್ದುಲ್ ಎಂಬವರು (ಸಂಖ್ಯೆ; ಪಿಟಿನ್/589/ಕೆಟಿಪಿಎಸ್ 2024/ ದಿನಾಂಕ 27/12/2024) ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ನೀತಿ ತಂಡದ ರಾಜ್ಯಾಧ್ಯಕ್ಷ ಜಯಂತ್ ಟಿ.ಕೆ. ಎಂಬವರು ವೀರೇಂದ್ರ ಹೆಗಡೆ, ಅನಿಲ್ ಕುಮಾರ್, ಜಯರಾಮ್ ನೆಲ್ಲಿಕಾಯಿ, ಮಂಡ್ಯ ಜಿಲ್ಲಾ ನಿರ್ದೇಶಕ ಪಾಂಡಿಯನ್ ಅವರ ವಿರುದ್ಧ ಇ-ಮೇಲ್ ಮೂಲಕ ದೂರು ನೀಡಿದ್ದಾರೆ ಎಂದು ಗೊತ್ತಾಗಿದೆ. ‘ಸಾಲದ ಹಣ ಮರು ಪಾವತಿಗೆ ಸಂಬಂಧಿಸಿದಂತೆ ಅವಾಚ್ಯ ಶಬ್ದಗಳ ನಿಂದನೆ ಸಹಿಸಲಾರದೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು ಮಡಿಯೂರು ಗ್ರಾಮದ ಮಹಾಲಕ್ಷ್ಮೀ ಎಂಬವರು ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ಇಮೇಲ್ನಲ್ಲಿ ಸಲ್ಲಿಸಿರುವ ದೂರಿನಲ್ಲಿ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಸಂಧ್ಯಾ ಎಂಬವರು ಸಹ ಸಂಘದ ಭವ್ಯಾ ಎಂಬವರ ವಿರುದ್ಧ (ಪಿಟಿಎನ್/787/ಬಿಆರ್ಪಿಎಸ್/2024, 26/12/2024) ದೂರಿದ್ದಾರೆ. ಸಾಲ ಮರು ಪಾವತಿ ಮತ್ತು ಬಡ್ಡಿ ವಸೂಲಿಗಾರರು ವಸೂಲಿ ವಿಚಾರದಲ್ಲಿ ತೊಂದರೆ ನೀಡುತ್ತಿದ್ದಾರೆ ಎಂದು ದೂರಿರುವುದು ಗೊತ್ತಾಗಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಆನಂದ್ ಎಂಬವರು ಸಂಘದಿಂದ ಪಡೆದಿದ್ದ ಸಾಲವನ್ನು ತೀರಿಸಿದ್ದರು. ಆದರೆ ಉಳಿತಾಯ ಹಣದ ವಿಚಾರವಾಗಿ ಸಂಘದವರು ಸರಿಯಾಗಿ ಲೆಕ್ಕ ನೀಡಿಲ್ಲ ಎಂದು ದೂರಿನಲ್ಲಿ ಆಪಾದಿಸಿದ್ದಾರೆ. ಹಾಗೆಯೇ ಉಡುಪಿಯ ಕುಂಜಿಗುಡ್ಡದ ಶ್ರೀಕಾಂತ್ ಆಚಾರ್ಯ ಅವರು ಸಂಘದಿಂದ 2.50 ಲಕ್ಷ ರೂ.ಯನ್ನು ಸಾಲವಾಗಿ ಪಡೆದಿದ್ದರು. ಈ ಹಣವನ್ನು ಬಡ್ಡಿ ಸಮೇತ ಕಟ್ಟಬೇಕು ಎಂದು ರಮ್ಯಾ, ಶಾರದಾ ರೈ ಎಂಬವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು (ಸಂಖ್ಯೆ; ಪಿಟಿನ್/17/1224/2025, 04/01/2025) ದೂರಿರುವುದು ತಿಳಿದು ಬಂದಿದೆ.
ಕುಂಜಿಗುಡ್ಡದ ನಾರಾಯಣ ಆಚಾರ್ಯ ಎಂಬವರು ಸಹ ಸಂಘದಿಂದ 2 ಲಕ್ಷ ರೂ. ಸಾಲ ಪಡೆದಿದ್ದರು. ಈ ಹಣವನ್ನು ಬಡ್ಡಿ ಸಮೇತ ಕಟ್ಟಬೇಕು ಎಂದು ಸಂಘದ ರಮ್ಯಾ ಮತ್ತು ಶಾರದಾ ರೈ ಅವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ( ದೂರಿನ ಸಂಖ್ಯೆ; 18/1224/2025 ದಿನಾಂಕ 04/01/2025) ಎಂದು ಆರೋಪಿಸಿರುವುದು ಗೊತ್ತಾಗಿದೆ.
ಸಂಘದ ಅಧ್ಯಕ್ಷ ಹಾಗೂ ನಿರ್ದೇಶಕ ಅನಿಲ್ ಕುಮಾರ್ ಹಾಗೂ ಸದಸ್ಯರು ಮತ್ತು ಸಿಬ್ಬಂದಿಯು ಆರ್ಬಿಐನ ನಿಯಮಗಳನ್ನು ಪಾಲಿಸದೇ ವ್ಯವಹಾರ ನಡೆಸುತ್ತಿದ್ದಾರೆ. ಇವರ ನಿರ್ದೇಶನದ ಮೇರೆಗೆ ಸಂಸ್ಥೆಯ ಪ್ರತಿನಿಧಿಯಾಗಿರುವ ಮೀನಾಕ್ಷಿ ಎಂಬವರು ಹಣ ಮರು ಪಾವತಿಸಲು ಗಲಾಟೆ ಮಾಡುತ್ತಿದ್ದಾರೆ ಎಂದು ವಿರಾಜಪೇಟೆಯ ವಿ. ಗೀತಾ ಎಂಬವರು (ಎಲ್ಪಿನಂ 07/2024/ ದಿನಾಂಕ 04/01/2025) ದೂರಿದ್ದಾರೆ.
ಕುಜುಮರುಗುಡ್ಡೆಯ ರತ್ನಾವತಿ ಆಚಾರ್ಯ ಎಂಬವರು ಸಂಘದ ಅಧಿಕಾರಿಗಳ ವಿರುದ್ಧ ದೂರಿದ್ದಾರೆ. ಧರ್ಮಸ್ಥಳ ಸಂಘದಿಂದ ಪಡೆದಿದ್ದ ಸಾಲಕ್ಕೆ ಸಮರ್ಪಕ ದಾಖಲೆಗಳನ್ನು ನೀಡುತ್ತಿಲ್ಲ ಎಂದು ( ಸಿಎನ್ಒ 08/ಪಿಟಿಎನ್/ಕೆಟಿಪಿಎಸ್/2025, ದಿನಾಂಕ 05/01/2025) ಆರೋಪಿಸಿದ್ದಾರೆ.
ಕೊಡಗು ಜಿಲ್ಲೆಯ ಶುಂಠಿಕೊಪ್ಪದ ಜಯಂತ್ ಎಸ್. ಎಂಬವರು ಸಂಘದ ಚಿತ್ರಾ ಎಂಬವರ ವಿರುದ್ಧ ದೂರಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧ್ದಿ ಯೋಜನೆ ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಯಿಂದ ಹಾಗೂ ಇತರ ಸಂಘದಿಂದ ಜಯಂತ್ ಅವರು ಸಾಲ ಪಡೆದಿದ್ದರು. ಎಸ್ಕೆಡಿಆರ್ಪಿ ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿಯು ಅರ್ಜಿದಾರರ ಮನೆ ಬಾಗಿಲಿಗೆ ಬಂದು ಹಣ ಕಟ್ಟುವಂತೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು (ಎಲ್ಪಿಟಿಎನ್ 07/2025, ದಿನಾಂಕ 05/01/2025) ಆಪಾದಿಸಿರುವುದು ಗೊತ್ತಾಗಿದೆ.
ಮಂಡ್ಯದ ಕೆ.ಆರ್. ಪೇಟೆ ಟೌನ್ನ ರಾಜೇಶ್ವರಿ ಎಂಬುವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ಸಾಲ ಪಡೆದಿದ್ದರು. ಈ ಸಾಲವನ್ನು ಮರು ಪಾವತಿಸಿದ್ದರು. ಆದರೆ ಉಳಿತಾಯ ಪಾಸ್ ಬುಕ್ ಮತ್ತು ಇತರ ದಾಖಲೆಗಳನ್ನು ನೀಡಿರಲಿಲ್ಲ. ಸಂಘದ ಕೆ.ಆರ್. ಪೇಟೆ ಶಾಖೆಯ ಅಧ್ಯಕ್ಷರು ಮತ್ತು ಇತರರು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿರುವುದು ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸಂತೋಷ್ ಕುಮಾರ್ ಎಂಬವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಡಾ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧವೂ ( ಒಪಿಆರ್ 11/ಪಿಟಿನ್/ಕೆಪಿಎಸ್/2025, 17/01/2025) ದೂರಿದ್ದಾರೆ. ಆರ್ಬಿಐ ನಿಯಮಗಳನ್ನು ಉಲ್ಲಂಘಿಸಿ ವಾರದ ಬಡ್ಡಿ ವಿಧಿಸಲಾಗುತ್ತಿದೆ. ಅರ್ಜಿದಾರರ ಸ್ವ ಸಹಾಯ ಸಂಘದ ಬ್ಯಾಂಕ್ ಪಾಸ್ಬುಕ್, ಪಿಆರ್ಕೆ ಬಾಂಡ್ ಕೊಡದೇ ಬಡ್ಡಿ ದಂಧೆ ನಡೆಸಲಾಗುತ್ತಿದೆ. ಈ ಸಂಘದ ಅಧ್ಯಕ್ಷರಾದ ಡಾ. ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಿರುವುದು ಗೊತ್ತಾಗಿದೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ನಿವಾರಣೆ ಹಾಗೂ ಮೈಕ್ರೋ ಫೈನಾನ್ಸ್ಗಳ ಹಾವಳಿಗೆ ಕಡಿವಾಣ ಹಾಕುವ ಸಂಬಂಧ ಕೃಷ್ಣಾದಲ್ಲಿ 2025ರ ಜನವರಿ 30ರಂದು ಸಭೆ ನಡೆದಿತ್ತು. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ತಪ್ಪಿಸುವ ಉದ್ದೇಶದಿಂದ ರಚಿಸಲಾಗಿರುವ ಸುಗ್ರೀವಾಜ್ಞೆಯಲ್ಲಿನ ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಬಲಿಷ್ಠ ಕಾಯ್ದೆಯನ್ನು ಆದಷ್ಟು ಬೇಗನೆ ಜಾರಿ ಮಾಡಲಾಗುವುದು. ಈ ಕುರಿತು ಕಾನೂನು ಇಲಾಖೆ, ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ರಚನೆ ಮಾಡಿದೆ.
ಕಾಯ್ದೆ ಸಂಪೂರ್ಣ ಸಂವಿಧಾನ ಬದ್ಧವಾಗಿದ್ದು, ಯಾವುದೇ ಲೋಪದೋಷಗಳನ್ನು ಹೊಂದಿರಬಾರದು. ಸಾಲಗಾರರು ಎದುರಿಸುತ್ತಿರುವ ಕಿರುಕುಳವನ್ನು ತಪ್ಪಿಸಲು ಹಾಗೂ ಸಾಲ ನೀಡಿದವರು ಬಲವಂತದ ವಸೂಲಿ ಮಾಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಬಲಿಷ್ಠ ಕಾಯ್ದೆ ರಚಿಸಲಾಗುವುದು ಎಂದು ಸಭೆಯಲ್ಲಿ ಹೇಳಲಾಗಿದೆ.
ಕಾಯ್ದೆಯಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ದೊರೆಯಲಿದೆ. ಒಂಬುಡ್ಸ್ಮೆನ್ಗಳ ನೇಮಕ ಮಾಡಲಾಗುವುದು. ಅಮಾನವೀಯವಾಗಿ ಬಲವಂತದ ಸಾಲ ವಸೂಲಾತಿ ಮಾಡುವವರಿಗೆ ಜಾಮೀನುರಹಿತ ಪ್ರಕರಣ ದಾಖಲು ಸೇರಿದಂತೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶ ಸಿಗುವಂತೆ ಕಾನೂನು ರೂಪಿಸಲಾಗುವುದು. ನೋಂದಣಿಯಾಗದ ಲೇವಾದೇವಿಗಾರರ ಕಿರುಕುಳವನ್ನು ತಪ್ಪಿಸಲು ಕಠಿಣ ಕಾನೂನು ಜಾರಿ ಮಾಡಲು ಸೂಚಿಸಲಾಗಿದೆ.
ಪ್ರಸಕ್ತ ಇರುವ ಕಾನೂನಿನಲ್ಲಿ ಮೈಕ್ರೋ ಫೈನಾನ್ಸ್ಗಳ ಕಿರುಕುಳ ನಿಯಂತ್ರಿಸಲು ಹಲವು ಅವಕಾಶಗಳಿದ್ದು, ತಾತ್ಕಾಲಿಕವಾಗಿ ಇದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದು, ಸಂತ್ರಸ್ತರು ದೂರು ದಾಖಲು ಮಾಡುವ ತನಕ ಕಾಯದೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.