ಚಿತ್ರದುರ್ಗದಲ್ಲಿ ರಾಜಾರೋಷವಾಗಿ ಲಕ್ಷಾಂತರ ಟನ್‌ ಕಬ್ಬಿಣದ ಅದಿರು ಅಕ್ರಮ ಸಾಗಾಟ

Update: 2025-04-22 08:00 IST
ಚಿತ್ರದುರ್ಗದಲ್ಲಿ ರಾಜಾರೋಷವಾಗಿ ಲಕ್ಷಾಂತರ ಟನ್‌ ಕಬ್ಬಿಣದ ಅದಿರು ಅಕ್ರಮ ಸಾಗಾಟ
  • whatsapp icon

ಬೆಂಗಳೂರು, ಎ.21; ರಾಜ್ಯದ ಚಿತ್ರದುರ್ಗ ಜಿಲ್ಲೆಯ ದಿಂಡದಹಳ್ಳಿ ಮತ್ತು ಇತರ ಕಡೆಗಳಲ್ಲಿ ಅದಿರು ಗಣಿಗಾರಿಕೆ ನಡೆಸುತ್ತಿರುವ ಉದ್ಯಮಗಳು, ಕಂಪೆನಿಗಳು ಅರಣ್ಯ ಪ್ರದೇಶದಿಂದ ಲಕ್ಷಾಂತರ ಟನ್ ಕಬ್ಬಿಣದ ಅದಿರು ಮತ್ತು ಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿವೆ. ಅಲ್ಲದೆ, ಎನ್‌ಒಸಿ ಇಲ್ಲದೆಯೇ ಖಾಸಗಿ ಜಮೀನು ಸೇರಿದಂತೆ ಸರಕಾರಿ ಜಮೀನುಗಳಲ್ಲಿನ ಕಬ್ಬಿಣದ ಅದಿರನ್ನು ಹರಾಜು ಮಾಡುತ್ತಿವೆ ಎಂದು ‘the-file.in’ ವರದಿ ಮಾಡಿದೆ.

ಅರಣ್ಯ ಮತ್ತು ಗಣಿ ಭೂ ವಿಜ್ಞಾನ ಇಲಾಖೆಯ ಕಣ್ಣು ತಪ್ಪಿಸಿ ಲಕ್ಷಾಂತರ ಮೆಟ್ರಿಕ್ ಟನ್ ಪ್ರಮಾಣದ ಅದಿರು ಸಾಗಿಸಲಾಗುತ್ತಿದೆ. ಹಾಗೆಯೇ ಇನ್ನು ಕೆಲವು ಪ್ರಕರಣಗಳಲ್ಲಿ ಜಮೀನುಗಳ ಮಾಲಕರ ಪೂರ್ವಾನುಮತಿ ಪಡೆಯದೇ ಕಬ್ಬಿಣದ ಅದಿರನ್ನು ಸಾಗಣೆ ಮಾಡುವ ಸಂದರ್ಭದಲ್ಲಿ ಬೆಲೆಬಾಳುವ ಶ್ರೀಗಂಧ ಮತ್ತು ಇತರ ಜಾತಿಯ ಮರಗಳನ್ನೂ ಹಾಳುಗೆಡವುತ್ತಿರುವ ಪ್ರಕರಣಗಳು ಬಹಿರಂಗವಾಗಿವೆ.

ಕೇಂದ್ರ ಸರಕಾರದ ಎರಡನೇ ಹಂತದ ಫಾರೆಸ್ಟ್ ಕ್ಲಿಯರೆನ್ಸ್ ಪ್ರಸ್ತಾವನೆ ಪಡೆಯದೇ ಅರಣ್ಯ ಕಾಯ್ದೆ ಉಲ್ಲಂಘನೆ ಮತ್ತು ಅದಿರು ಸಾಗಣೆ ರಸ್ತೆಯನ್ನು ಬಳಸಲು ಸರಕಾರದ ಅನುಮತಿ ಮುಕ್ತಾಯಗೊಂಡ ನಂತರವೂ ಜೆಎಸ್‌ಡಬ್ಲ್ಯು ಅಕ್ರಮವಾಗಿ ಅದಿರು ಸಾಗಣೆ ಮಾಡಿದೆ ಎಂದು ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಗುರುತರವಾದ ಆರೋಪ ಮಾಡಿದ್ದರ ಬೆನ್ನಲ್ಲೇ ಅದೇ ಹೋಬಳಿಯ ದಿಂಡದಹಳ್ಳಿಯಲ್ಲಿ ಮತ್ತೊಂದು ಕಂಪೆನಿಯ ಪ್ರಕರಣವು ಬಹಿರಂಗವಾಗಿರುವುದು ಮುನ್ನೆಲೆಗೆ ಬಂದಿದೆ.

ಹಾಗೆಯೇ ಅಧಿಕಾರಿಗಳು ಒಂದೇ ಗ್ರಾಮದ ಒಂದೇ ಸರ್ವೇ ನಂಬರ್‌ನ ಪ್ರದೇಶದಲ್ಲಿ ದಾಸ್ತಾನು ಇರುವ ಅದಿರು ಮತ್ತು ಗಿಡಮರಗಳ ಕಟಾವಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ವರದಿಗಳನ್ನು ಸಲ್ಲಿಸಿದ್ದರು. ಎರಡು ಪ್ರತ್ಯೇಕ ಅಳತೆ ಪಟ್ಟಿಗಳನ್ನು ಸಹ ಕೂಲಂಕಶವಾಗಿ ಪರಿಶೀಲಿಸುತ್ತಿಲ್ಲ ಮತ್ತು ನಿಯಮಾನುಸಾರ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಸಂಗತಿಯು ಅಕ್ರಮ ಅದಿರು ಸಾಗಣೆಯು ನಿರಂತರವಾಗಿ ನಡೆಯುತ್ತಿದೆ ಎಂಬುದಕ್ಕೆ ಪುರಾವೆ ಸಿಕ್ಕಂತಾಗಿದೆ.

ಶ್ರೀ ಸಾಯಿ ಬಾಲಾಜಿ ಐರನ್ ಇಂಡಿಯಾ ಪ್ರೈ. ಲಿಮಿಟೆಡ್ ಈ ಹಿಂದೆ ದಿಂಡದಹಳ್ಳಿಯ ಸರ್ವೇ ನಂಬರ್ 35 ಮತ್ತು 38ರಲ್ಲಿ ದಾಸ್ತಾನು ಮಾಡಿದ್ದ 2,48,500.00 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಖಾಸಗಿ ಜಮೀನಿನಲ್ಲಿ ದಾಸ್ತಾನು ಮಾಡಿತ್ತು. ಅದನ್ನು ಸಾಗಿಸಲು ಜಮೀನಿನ ಮಾಲಕರ ಪೂರ್ವಾನುಮತಿ ಪಡೆಯದೇ ಸಾಗಣೆ ಮಾಡಲು 25ರಿಂದ 35 ಸೆಂ.ಮೀ. ಸುತ್ತಳತೆಯುಳ್ಳ ಬೆಲೆಬಾಳುವ ಶ್ರೀಗಂಧ ಹಾಗೂ ಇತರ ಜಾತಿಯ ಮರಗಳನ್ನು ಹಾಳು ಮಾಡಿದ್ದಾರೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಈ ವರದಿಯ ಪ್ರತಿ ಮತ್ತು ಇದಕ್ಕೆ ಸಂಬಂಧಿಸಿದಂತೆ ಹಲವು ದಾಖಲೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.

ಹಿರೇಗುಂಟನೂರು ಹೋಬಳಿಯ ಭೀಮಸಮುದ್ರ ಗ್ರಾಮ ಪಂಚಾಯತ್ ವ್ಯಾಪ್ತಿಯ ದಿಂಡದಹಳ್ಳಿ ಗ್ರಾಮದ ಸರ್ವೇ ನಂಬರ್ 35 ಮತ್ತು ರಿ ಸ ನಂ. 38ರ ಈ ಜಮೀನಿನಲ್ಲಿ ಕಬ್ಬಿಣದ ಅದಿರಿನ ಮಣ್ಣನ್ನು ದಾಸ್ತಾನು ಮಾಡಿರುವ ಕುರಿತು ಶಿವಕುಮಾರ್ ಮತ್ತಿತರರು ವಲಯ ಅರಣ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ಕಬ್ಬಿಣದ ಅದಿರು ದಾಸ್ತಾನಿನ ಮೇಲೆ ನೈಸರ್ಗಿಕವಾಗಿ ಶ್ರೀಗಂಧ, ತೇಗ, ಬೀಟೆ, ಅಕೇಶಿಯಾ, ನೀಲಗಿರಿ, ಬೇವು ಸೇರಿದಂತೆ ಇನ್ನಿತರ ನೂರಾರು ಮರಗಿಡಗಳು ಬೆಳೆದಿದ್ದವು. ಈ ಮರಗಿಡಗಳನ್ನು ಕಡಿದು ಆ ಜಾಗದಲ್ಲಿ ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ಹಾಗೆಯೇ ಈ ಜಾಗದಲ್ಲಿ ದಾಸ್ತಾನಾಗಿದ್ದ 2.5 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಹರಾಜು ಮಾಡಿಸಿ ಅರಣ್ಯ ಪ್ರದೇಶದಿಂದ ದಾಸ್ತಾನು ಮಾಡಿರುವ ಕಬ್ಬಿಣದ ಅದಿರನ್ನು ಸಾಗಣೆ ಮಾಡಲು ಯತ್ನಿಸಿದ್ದಾರೆ. ಈ ಸರ್ವೇ ನಂಬರ್‌ನಲ್ಲಿ 2.5 ಲಕ್ಷ ಟನ್ ಕಬ್ಬಿಣದ ಅದಿರು ಸಂಗ್ರಹಣೆಯಾಗಿಲ್ಲ. ಅಲ್ಲಿ ಸುಮಾರು 1 ಲಕ್ಷ ಟನ್ ಕಬ್ಬಿಣದ ಅದಿರು ಇತ್ತು. ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲು 2.5 ಲಕ್ಷ ಟನ್ ಕಬ್ಬಿಣದ ಅದಿರು ಇದೆ ಎಂದು ಹರಾಜು ಹಾಕಲಾಗಿದೆ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ. ನಿಯಮಾವಳಿಗಳ ಪ್ರಕಾರ ಖಾಸಗಿ ಜಮೀನು ಮತ್ತು ಸರಕಾರಿ ಜಮೀನುಗಳಲ್ಲಿ ಕಬ್ಬಿಣದ ಅದಿರನ್ನು ಹರಾಜು ಹಾಕುವಾಗ ಅರಣ್ಯ ಇಲಾಖೆಯಿಂದ ಎನ್‌ಒಸಿ ಪಡೆಯಬೇಕು. ಆದರೆ ಈ ಪ್ರಕರಣದಲ್ಲಿ ಎನ್‌ಒಸಿ ಪಡೆದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಈ ದೂರಿನ ಅನ್ವಯ ಸ್ಥಳಕ್ಕೆ ಭೇಟಿ ನೀಡಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಶ್ರೀ ಸಾಯಿ ಬಾಲಾಜಿ ಸ್ಪಾಂಜ್ ಐರನ್ ಇಂಡಿಯಾ ಪ್ರೈ. ಲಿಮಿಟೆಡ್, ಸಾಗಣೆ ಮಾಡುತ್ತಿದ್ದವರ ವಿರುದ್ಧ 2024ರ ಅಕ್ಟೋಬರ್ 15ರಂದು ಅರಣ್ಯ ಮೊಕದ್ದಮೆ ದಾಖಲಿಸಿದ್ದರು. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News