ಭಾರತದಲ್ಲಿ ಮುಸ್ಲಿಮರೇಕೆ ಹಿಂದುಳಿಯುತ್ತಿದ್ದಾರೆ

Update: 2024-08-15 07:10 GMT

ದೇಶದಲ್ಲಿ ಮುಸ್ಲಿಮರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದವ ರಾಗಿದ್ದರೂ ಸಂವಿಧಾನದ ಆಶಯದಂತೆ ಮೀಸಲಾತಿ ನೀಡದೆ ವಂಚಿಸಲಾಗಿದೆ. ಈಗಲೂ ಮುಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ವಾದಿಸಲಾಗುತ್ತದೆ. ಅದು ಶುದ್ಧ ಸುಳ್ಳು ಎನ್ನುವುದು ಎಲ್ಲರಿಗೂ ಗೊತ್ತಿದ್ದರೂ ಮಾತನಾಡಲು ಹಿಂಜರಿಯುತ್ತಿದ್ದಾರೆ.

ಭಾರತ ಸ್ವಾತಂತ್ರ್ಯ ಪಡೆದು 78 ವರ್ಷಗಳು ಪೂರೈಸುತ್ತಿದೆ. ಇಂತಹ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಜೀವ ಕಳೆದುಕೊಂಡವರು, ತ್ಯಾಗ ಬಲಿದಾನ ಮಾಡಿದ ಮಹನೀಯರ ಬಗ್ಗೆ ಚರ್ಚಿಸುವುದು ಪ್ರಮುಖ ಅಂಶವಾಗಿದೆ, ಅಲ್ಲದೆ ಸ್ವಾತಂತ್ರ್ಯಾನಂತರದ ಭಾರತದ ಸ್ಥಿತಿಗತಿ ಕುರಿತು ಚರ್ಚಿಸುವ ಅವಶ್ಯಕತೆಯಿದೆ. ಅದರಲ್ಲಿಯೂ ಸ್ವತಂತ್ರ ಭಾರತದಲ್ಲಿ ಕೆಲವು ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಹಲವು ಸರಕಾರಗಳು ಎಡವಿದ್ದೆಲ್ಲಿ ಎಂದು ವಿಚಾರ ಮಾಡುವ ಸಮಯವಿದು.

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರದ ಬಗ್ಗೆಯೂ ಚರ್ಚೆ ಮಾಡುವ ಅವಶ್ಯಕತೆ ಇದೆ. ಹೋರಾಟವು ಪಕ್ಷಾತೀತವಾಗಿ, ಜಾತ್ಯತೀತವಾಗಿ ನಡೆದಿದ್ದರೂ, ಮುಸ್ಲಿಮರು ಸ್ವಾತಂತ್ರ್ಯ ಹೋರಾಟದಲ್ಲಿ ಗಣನೀಯ ಪ್ರಮಾಣದಲ್ಲಿ ಭಾಗವಹಿಸಿ ತನು-ಮನ-ಧನ ತ್ಯಾಗ ಮಾಡಿರುವುದು ಇತಿಹಾಸದಲ್ಲಿ ಇದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಕೆಲವರು ಪ್ರಮುಖವಾಗಿ ಕ್ಯಾಪ್ಟನ್ ಅಬ್ಬಾಸ್ ಅಲಿ, ಮೌಲಾನಾ ಅಬ್ದುಲ್ ಕಲಾಂ ಆಝಾದ್, ಅಹಮದುಲ್ಲಾ ಶಾಹ, ಅಸಫ್ ಅಲಿ, ಭಕ್ತಖಾನ, ಮೌಲಾನಾ ಮನ್ಸೂರುಲ್ ಹಕ್, ಅಬ್ದುಲ್ ಗಪ್ಫಾರ್ ಖಾನ್, ಸೈಫುದ್ದೀನ್ ಕಿಚ್ಲೀವ್, ಡಾ. ಝಾಕಿರ್ ಹುಸೈನ್, ಆಬದಿ ಬೇಗಂ, ಅಶ್ಫಾಕುಲ್ಲಾ ಖಾನ್, ಬೇಗಂ ಹಝರತ್ ಮಹಲ್, ಫಝಲ್‌ಎ-ಹಕ್ ಖೈರಾಬಾದಿ, ಮಗ್ಫೂರ್ ಅಹ್ಮದ್ ಅಜಾಜಿ, ಮಹಮೂದ್ ಹಸನ್ ದೇವಬಂದಿ, ಮೌಲ್ವಿ ಮುಹಮ್ಮದ್ ಬಖೀರ್, ಮುಝಾಪ್ಫರ್ ಅಹ್ಮದ್, ಪೀರ್ ಅಲಿ ಖಾನ್, ಸೈಯದ್‌ಮುಹಮ್ಮದ್ ಶರಫುದ್ದೀನ್ ಖಾದ್ರಿ, ಅಲ್ಲಾಬಕ್ಷ್ ಸೂಮ್ರೋ, ಡಾ.ಮುಹಮ್ಮದ್ ಅಹ್ಮದ್ ಅನ್ಸಾರಿ, ಅಬ್ದುಲ್ ಬಾರಿ ಸೇರಿದಂತೆ ಲಕ್ಷಾಂತರ ಜನ ಹೋರಾಟದಲ್ಲಿ ಭಾಗವಹಿಸಿದ್ದಾರೆ.

ಮೊಗಲ್ ಸಾಮ್ರಾಜ್ಯದ ಕೊನೆಯ ದೊರೆ ಬಹಾದೂರ್ ಶಾಹ ಝಫರ್ ಸಿಪಾಯಿ ದಂಗೆಯ ನೇತೃತ್ವವಹಿಸಿ ತನ್ನ ಸಾಮ್ರಾಜ್ಯವನ್ನೇ ಕಳೆದುಕೊಂಡು ದೇಶದಿಂದಲೇ ಗಡಿಪಾರಾಗಿ ರಂಗೂನ್‌ನಲ್ಲಿ ವಾಸವಿದ್ದರು. ದೀರ್ಘಕಾಲ ದೇಶವಾಳಿದ ಮೊಗಲ್ ಸಾಮ್ರಾಜ್ಯದ ಕೊನೆಯ ದೊರೆಗೆ ದೇಶದಲ್ಲಿ ದಫನ್ ಮಾಡಲು ಆರಡಿ ಜಮೀನು ಸಹ ಸಿಗಲಿಲ್ಲ. ಸೆಲ್ಯೂಲರ್ ಜೈಲಿನಲ್ಲಿ ಕಾಲಾಪಾನಿ ಶಿಕ್ಷೆಗೆ ಒಳಗಾದ ಹೋರಾಟಗಾರರಲ್ಲಿ ಮುಸ್ಲಿಮ್ ಸಮುದಾಯದ ಫಝಲ್-ಎ-ಹಕ್ ಖೈರಾಬಾದಿ, ಮೌಲಾನಾ ಅಹ್ಮದ್ ಉಲ್ಲಾ, ಮೌಲ್ವಿ ರಹೀಮ ಸಾದೀಖಪುರಿ, ಮೌಲ್ವಿ ಲಿಯಾಖತ್ ಅಲಿ, ಮೌಲ್ವಿ ಅಲ್ಲಾಉದ್ದೀನ್, ಅಲಿ ಅಹ್ಮದ್ ಸಿದ್ದೀಕಿ, ಮುಖದಾ ಬಾಬು, ಮುಸ್ತಫಾ ಹುಸೈನ್ ಸೇರಿದಂತೆ ಹಲವು ಮುಸ್ಲಿಮ್ ಸ್ವಾತಂತ್ರ್ಯ ಹೋರಾಟಗಾರರು ಇದ್ದರು ಎನ್ನುವುದು ಹೆಚ್ಚಿನವರಿಗೆ ಗೊತ್ತಿರದ ಸಂಗತಿ. ಅಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಬಲಿಯಾದ 95,300 ಸ್ವಾತಂತ್ರ್ಯ ಹೋರಾಟಗಾರರಲ್ಲಿ 61,945 ಜನ ಮುಸ್ಲಿಮರು ಇದ್ದುದನ್ನು ದಿಲ್ಲಿಯ ಇಂಡಿಯಾ ಗೇಟ್ ಮೇಲೆ ಕೆತ್ತಲಾದ ಹೆಸರು ಸೂಚಿಸುವುದು ವಿಶೇಷ. ಅಂದರೆ ಅದರಲ್ಲಿ ಶೇ. 65ರಷ್ಟು ಜನ ಮುಸ್ಲಿಮರು ದೇಶಕ್ಕಾಗಿ ಬಲಿದಾನ ನೀಡಿದವರು.

ಸ್ವಾತಂತ್ರ್ಯಾನಂತರ ಭಾರತ ಗಣನೀಯವಾಗಿ ಬದಲಾವಣೆಯಾಗಿರುವುದು ಕಾಣುತ್ತಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ತಾಂತ್ರಿಕವಾಗಿ, ವಿಜ್ಞಾನ ಕ್ಷೇತ್ರದಲ್ಲಿ ಅಪಾರವಾಗಿ ಬೆಳವಣಿಗೆ ಕಂಡಿದೆ. ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ವಿವಿಧ ಜಾತಿ-ಧರ್ಮಗಳ ಜನತೆ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಕಾಣಸಿಗುತ್ತಾರೆ. ಆದರೆ, ಭಾರತ ಸರಕಾರದ ಹಲವು ವರದಿಗಳು ದೇಶದಲ್ಲಿ ಮುಸ್ಲಿಮರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ಅಷ್ಟೊಂದು ಸಮಾಧಾನಕರವಾಗಿಲ್ಲ ಎಂದು ಹೇಳಿವೆ. ಇದು ಅತ್ಯಂತ ಕಳವಳಕಾರಿಯಾಗಿದೆ. ಕಳೆದ ಏಳು ದಶಕಗಳಿಂದ ಮುಸ್ಲಿಮರ ಮೇಲೆ ಮಾನಸಿಕ ದಾಳಿ ಹೆಚ್ಚಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ದೇಶದ ಜನಸಂಖ್ಯೆ 35 ಕೋಟಿ. ಅದರಲ್ಲಿ ಮುಸ್ಲಿಮರ ಜನಸಂಖ್ಯೆ 3.5 ಕೋಟಿ. ಈಗ ಮುಸ್ಲಿಮರ ಜನಸಂಖ್ಯೆ 17 ಕೋಟಿ, ಇತರ ಧರ್ಮಗಳ ಜನಸಂಖ್ಯೆ 31 ಕೋಟಿಯಿಂದ 120 ಕೋಟಿಯಾಗಿದೆ. ಆದರೂ ಜನಸಂಖ್ಯೆ ಹೆಚ್ಚಳಕ್ಕೆ ಮುಸ್ಲಿಮರೇ ಕಾರಣ ಎಂದು ಹೇಳಲಾಗುತ್ತದೆ. ಯಾರೋ ಮಾಡಿದ ಭಾಷಣವೇ ಸತ್ಯವೆಂದು ತಿಳಿದು ಮಾತನಾಡುವುದು ಇಂದು ಹೆಚ್ಚಾಗಿದೆ. ಅಲ್ಪಸಂಖ್ಯಾತರು ಎಂದರೆ ಮೀಸಲಾತಿ ಪಡೆಯುವವರು ಎನ್ನುವ ರೀತಿ ಬಿಂಬಿಸಲಾಗಿದೆ. ಅಲ್ಪಸಂಖ್ಯಾತ ಎನ್ನುವುದು ಸಂವಿಧಾನ ನೀಡಿರುವ ಒಂದು ಗುರುತು ಎನ್ನುವ ಕನಿಷ್ಠ ತಿಳುವಳಿಕೆ ಇಲ್ಲದೆ ಮೀಸಲಾತಿಯ ಬಗ್ಗೆ ಬೊಬ್ಬೆ ಹಾಕಲಾಗುತ್ತದೆ.

ದೇಶದಲ್ಲಿ ಮುಸ್ಲಿಮರು ಯಾಕೆ ಬಡವರು, ಶೈಕ್ಷಣಿಕವಾಗಿ ಯಾಕೆ ಹಿಂದುಳಿದಿದ್ದಾರೆ ಎಂದು ಅವಲೋಕನ ಮಾಡಿದರೆ, ಸಿಗುವ ಮೊದಲ ಉತ್ತರ, ಮುಸ್ಲಿಮರಲ್ಲಿ ಕೃಷಿ ಜಮೀನು ಹೊಂದಿರುವವರ ಸಂಖ್ಯೆ ಅತೀ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನುವುದು. ಗ್ರಾಮೀಣ ಭಾಗದಲ್ಲಿ ಕೃಷಿ ಜಮೀನು ಇಲ್ಲದೆ ಇರುವುದರಿಂದ ಮುಸ್ಲಿಮರು ನಗರ ಕೇಂದ್ರಿತವಾಗಿ ವಲಸೆ ಬಂದಿರುವುದು. ನಗರಗಳಲ್ಲಿ ಮುಸ್ಲಿಮರು ಎಲ್ಲಾ ರೀತಿಯ ಕಸುಬು ನಡೆಸಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಬದುಕುವುದೇ ಕಷ್ಟವಿರುವಾಗ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡದೇ ಇರುವುದು ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣ. ದೇಶದಲ್ಲಿ ಧಾರ್ಮಿಕವಾಗಿ ಮುಸ್ಲಿಮರು ಎನ್ನುವ ಕಾರಣಕ್ಕೆ ಯಾವುದೇ ರೀತಿಯ ಮೀಸಲಾತಿ ಸೌಲಭ್ಯ ಇಲ್ಲದೆ ಶಿಕ್ಷಣದಿಂದ ವಂಚಿತಗೊಂಡು, ಉದ್ಯೋಗದಿಂದಲೂ ವಂಚಿತಗೊಂಡು ಮತ್ತದೇ ಉಪಕಸುಬುಗಳನ್ನು ಮಾಡುತ್ತ ಜೀವನ ಸಾಗಿಸುವಂತಾಗಿದೆ. ಇತ್ತೀಚೆಗೆ ನ್ಯಾ.ರಾಜೇಂದ್ರ ಸಾಚಾರ್ ಅಧ್ಯಕ್ಷತೆಯ ಸಮಿತಿ ಮುಸ್ಲಿಮರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ಕುರಿತು ವಿಸ್ತಾರವಾದ ವರದಿ ನೀಡಿದೆ. ಅದರ ಜೊತೆಗೆ ಮುಸ್ಲಿಮ್ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಇರುವ ಮಾರ್ಗಗಳನ್ನು 76 ಶಿಫಾರಸುಗಳ ಮೂಲಕ ಸರಕಾರಕ್ಕೆ ನೀಡಿದೆ. ಆದರೂ ಇಚ್ಛಾಶಕ್ತಿಯ ಕೊರತೆಯಿಂದ ನ್ಯಾ.ರಾಜೇಂದ್ರ ಸಾಚಾರ್ ಸಮಿತಿಯ ವರದಿಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಿಲ್ಲ. ಕೇವಲ ಬಾಯಿ ಚಪಲಕ್ಕೆ ಮುಸ್ಲಿಮರ ಪರವಾಗಿದ್ದೇವೆ ಎಂದು ಮಾತನಾಡುತ್ತ, ಅವರ ಸಬಲೀಕರಣದ ವಿಷಯಕ್ಕೆ ಬಂದಾಗ ಹಿಂಜರಿಯುವಂತಹ ರಾಜಕೀಯ ದೇಶದಲ್ಲಿ ನಡೆದಿದೆ. ನ್ಯಾ. ಸಾಚಾರ್ ಅವರು ಮುಸ್ಲಿಮರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಲು ರಾಜಕೀಯ ಮೀಸಲಾತಿ ನೀಡಬೇಕೆಂದು ಹೇಳಿದ್ದಾರೆ. ಅಲ್ಲದೆ ಮುಸ್ಲಿಮರಲ್ಲಿರುವ ಕೆಲವು ಪಂಗಡಗಳಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಬೇಕೆಂದು ಹೇಳಿದ್ದಾರೆ.

ದೇಶದಲ್ಲಿ ಮುಸ್ಲಿಮರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದವ ರಾಗಿದ್ದರೂ ಸಂವಿಧಾನದ ಆಶಯದಂತೆ ಮೀಸಲಾತಿ ನೀಡದೆ ವಂಚಿಸಲಾಗಿದೆ. ಈಗಲೂ ಮುಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನ ದಲ್ಲಿ ಅವಕಾಶವಿಲ್ಲ ಎಂದು ವಾದಿಸಲಾಗುತ್ತದೆ. ಅದು ಶುದ್ಧ ಸುಳ್ಳು ಎನ್ನುವುದು ಎಲ್ಲರಿಗೂ ಗೊತ್ತಿದ್ದರೂ ಮಾತನಾಡಲು ಹಿಂಜರಿಯುತ್ತಿದ್ದಾರೆ.

ನ್ಯಾ.ರಂಗನಾಥ್ ಮಿಶ್ರಾ ನೇತೃತ್ವದ ಆಯೋಗವು ಸಹ ಮುಸ್ಲಿಮರು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಬಗ್ಗೆ ಸುದೀರ್ಘ ವರದಿ ನೀಡಿದೆ. ಮುಸ್ಲಿಮರು ಶೈಕ್ಷಣಿಕವಾಗಿ ಅತ್ಯಂತ ಕೆಳಸ್ತರದಲ್ಲಿ ಇದ್ದಾರೆ. ಸರಕಾರಿ ನೇಮಕಾತಿಯಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕನಿಷ್ಠವಾಗಿದೆ. ಹಾಗಾಗಿ ನ್ಯಾ.ಮಿಶ್ರಾ ಅವರು ದೇಶದಲ್ಲಿ ಅಲ್ಪಸಂಖ್ಯಾತರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 15ರಷ್ಟು ಮೀಸಲಾತಿ ನೀಡಬೇಕು. ಅದರಲ್ಲಿ ಶೇ. 10ರಷ್ಟು ಮುಸ್ಲಿಮರಿಗೆ ನೀಡಬೇಕೆಂದು ವರದಿ ನೀಡಿದ್ದಾರೆ. ಆದರೆ ಮುಸ್ಲಿಮರ ಪರವಾಗಿ ಕಾನೂನು ಮಾಡುವುದೇ ದೇಶದ್ರೋಹದ ಕೆಲಸ ಎನ್ನುವ ವಾತಾವರಣ ದೇಶದಲ್ಲಿ ಸೃಷ್ಟಿ ಮಾಡಲಾಗಿರುವುದರಿಂದ ಮುಸ್ಲಿಮರ ಸ್ಥಿತಿಗತಿ ಕುರಿತು ಮಾತನಾಡುವ ರಾಜಕೀಯ ಪಕ್ಷಗಳು ಸಹ ಅವರ ಪರವಾಗಿ ಕೆಲಸ ಮಾಡಲು ಹಿಂಜರಿಯುತ್ತಿವೆೆ. ನಂತರ ಬಂದ ಸಮಾನ ಅವಕಾಶ ಆಯೋಗದ ವರದಿಯು ಸಹ ಇದನ್ನೇ ಹೇಳಿದೆ.

ದೇಶವನ್ನು ಸುಮಾರು ಎಂಟು ನೂರು ವರ್ಷಗಳ ಕಾಲ ಆಳಿದ್ದರೂ ಇಂದು ರಾಜಕೀಯವಾಗಿಯೂ ಮುಸ್ಲಿಮರು ಅಸ್ಪಶ್ಯರಾಗುತ್ತಿದ್ದಾರೆ. ಕಳೆದ 30 ವರ್ಷಗಳಿಂದ ರಾಜಕೀಯ ಪ್ರಾತಿನಿಧ್ಯ ಗಣನೀಯವಾಗಿ ಕಡಿಮೆಯಾಗುತ್ತ ಬಂದಿದೆ. ಕರ್ನಾಟಕ ರಾಜ್ಯದಲ್ಲಿಯೇ ಕಳೆದ ಕೆಲವು ವರ್ಷಗಳಿಂದ ಒಬ್ಬರೂ ಲೋಕಸಭೆ ಸದಸ್ಯರು ಮುಸ್ಲಿಮ್ ಸಮುದಾಯದಿಂದ ಆಯ್ಕೆಯಾಗಿಲ್ಲ. ವಿಧಾನಸಭೆ ಸದಸ್ಯರ ಸಂಖ್ಯೆ ಈಗ ಕೇವಲ 9 ಮಾತ್ರ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‌ಗಳಲ್ಲಿ ಬಹಳಷ್ಟು ಜಿಲ್ಲೆಗಳಲ್ಲಿ ಒಬ್ಬರೂ ಸದಸ್ಯರಿಲ್ಲದಿರುವುದು ಕಾಣುತ್ತದೆ. ಕಲಬುರಗಿಯಂತಹ ಜಿಲ್ಲೆಗಳಲ್ಲಿ ಒಬ್ಬರೂ ಜಿಲ್ಲಾ ಪಂಚಾಯತ್ ಸದಸ್ಯರು ಕಳೆದ 15 ವರ್ಷಗಳಿಂದ ಇಲ್ಲ ಎಂದರೆ ಯಾವ ಸ್ಥಿತಿಯಲ್ಲಿದೆ ರಾಜಕೀಯ ಪ್ರಾತಿನಿಧ್ಯ ಎನ್ನುವುದು ಮನಗಾಣಬೇಕಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಅಧಿಕಾರ, ಸ್ಥಾನಮಾನ, ಪ್ರಾಣವನ್ನೇ ತ್ಯಾಗ ಮಾಡಿದ ಮುಸ್ಲಿಮ್ ಸಮುದಾಯ ಇಂದು ಅಧೋಗತಿಗೆ ಇಳಿದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾ.ರಝಾಕ್ ಉಸ್ತಾದ, ರಾಯಚೂರು

contributor

Similar News