ಯಾದಗಿರಿ | ಸಾಧನೆಗೆ ಶಿಕ್ಷಣ, ಸಹಕಾರ ಬಹಳ ಮುಖ್ಯ: ಸೀಮಾ ಫಾರೂಕಿ

ಯಾದಗಿರಿ : ಮಹಿಳೆ ಇಂದು ಸಾಧನೆಗಳ ಎಲ್ಲ ಹಾದಿಗಳಲ್ಲೂ ತನ್ನ ಛಾಪು ಮೂಡಿಸಿದ್ದಾಳೆ. ಇದಕ್ಕೆ ಮುಖ್ಯವಾಗಿ ಶಿಕ್ಷಣ ಮತ್ತು ಸಹಕಾರವೇ ಕಾರಣವೆಂದು ಸಹಕಾರ ಸಂಘಗಳ ಇಲಾಖೆ ಸಹಾಯಕ ನಿಬಂಧಕಿ ಸೀಮಾ ಫಾರೂಕಿ ಅಭಿಪ್ರಾಯಪಟ್ಟರು.
ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಇಲ್ಲಿನ ಕಸಾಪ ಸಭಾಂಗಣದಲ್ಲಿ ಅಂತರರಾಷ್ಟ್ರಿಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳಾ ವಿಚಾರಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಒಂದು ಮನೆಯಲ್ಲಿ ಓರ್ವ ಮಹಿಳೆ ಅಕ್ಷರವಂತೆ ಆಗಿದ್ದಳು ಎಂದರೇ ಆ ಮನೆ ಸರ್ವ ರೀತಿಯಿಂದಲ್ಲೂ ಉತ್ತಮವಾಗುತ್ತದೆ ಮತ್ತು ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರು.
ಸನ್ಮಾನ ಸ್ವಿಕರಿಸಿ ಮಾತನಾಡಿದ ಜಿಲ್ಲಾ ಸರ್ಜನ್ ಡಾ.ರಿಜ್ವಾನಾ ಅಫ್ರೀನ್, ಮಹಿಳೆ ಮಾನವ ಜನಾಂಗದ ಮೊದಲ ಶಿಕ್ಷಕಿ. ಆಕೆ ಕೇವಲ ಹೆಣ್ಣಲ್ಲ, ಬಾಲಕಿ, ಯುವತಿ, ಹೆಂಡತಿ, ತಾಯಿ, ಅಜ್ಜಿ ಹೀಗೆ ವಿವಿಧ ರೀತಿಯಿಂದ ಕೌಟುಂಬಿಕವಾಗಿ ಯಶಸ್ಸಿ ಮಹಿಳೆಯಾದರೇ, ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಂಕಾಗದಲ್ಲೂ ಉತ್ತಮ ಕೆಲಸ ಮಾಡುವ ಮೂಲಕ ಸಾಧಕಳಾಗುತ್ತಾಳೆ ಎಂದರು.
ಪೂರ್ಣಿಮಾ ವಿ.ಗಡ್ಡಿಮನಿ ಮಾತನಾಡಿ, ಮಹಿಳೆ ಮನಸ್ಸು ಮಾಡಿದರೇ ಏನೆಲ್ಲಾ ಸಾಧನೆ ಮಾಡಬಲ್ಲಳು, ಆದರೇ ಆಕೆಯ ಕನಸುಗಳನ್ನು ಹೊಸಕಿ ಹಾಕುವ ಕೆಲಸವಾಗಬಾರದು, ವಿದ್ಯಾರ್ಥಿನಿಯರು ಉತ್ತಮ ಸಂಸ್ಕಾರದೊಂದಿಗೆ ಸಾಧಕರಾಗಬೇಕೆಂದರು.
ಹಿರಿಯ ಸಾಹಿತಿ ಹನುಮಾಕ್ಷೀ ಗೋಗಿ ಮಾತನಾಡಿ, ಒಳ್ಳೆಯ ಸಂಕಲ್ಪ ಮಾಡಿ ಆ ನಿಟ್ಟಿನಲ್ಲಿ ಸಾಗಿದರೇ ಮಹಿಳೆ ಜೀವನದಲ್ಲಿ ಯಶಸ್ಸಿಯಾಗುವುದರಲ್ಲಿ ಸಂಶಯವೇ ಇಲ್ಲ ಎಂದರು.
ತ್ರಿವೇಣಿ ಅವರ ಕಾದಂಬರಿಗಳಲ್ಲಿ ಸ್ತ್ರೀ ಸಂವೇಧನೆ ಕುರಿತು ಸುರಪುರದ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ.ಉಮಾದೇವಿ ಮಟ್ಟಿ ಉಪನ್ಯಾಸ ನೀಡಿದರು.
ಕಸಾಪ ಮಹಿಳಾ ಪ್ರತಿನಿಧಿ ರಮಾದೇವಿ ಕಾವಲಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಎಸ್ ಹೊಟ್ಟಿ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹತ್ತಿಕುಣಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಪ್ರಾಚಾರ್ಯರಾದ ರಮಾದೇವಿ ಮೋಟಾರ್, ಅಯ್ಯಣ್ಣ ಹುಂಡೇಕಾರ, ಡಾ.ಸುಭಾಷಚಂದ್ರ ಕೌಲಗಿ, ಬಸವರಾಜ ಮೋಟ್ನಳ್ಳಿ, ಡಾ.ಭೀಮರಾಯ ಲಿಂಗೇರಿ, ಡಾ.ಎಸ್ ಎಸ್ ನಾಯಕ, ವೆಂಕಟೇಶ ಕಲಕಂಭ, ಬಸವಂತ್ರಾಯಗೌಡ ಮಾಲಿ ಪಾಟೀಲ್, ಚೆನ್ನಪ್ಪ ಸಾಹುಕಾರ, ನಾಗೇಂದ್ರ ಜಾಜಿ, ಡಾ.ಗಾಳೆಪ್ಪ ಪೂಜಾರಿ, ರಾಜಶೇಖರ ಕಿಲ್ಲನಕೇರ, ಸಿ ಎಮ್ ಪಟ್ಟೆದರ್, ದೇವರಾಜ ವರ್ಕನಳ್ಳಿ ಸೇರಿದಂತೆಯೇ ಅನೇಕರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ನಾಗರತ್ನ ಅನಪುರ ಸ್ವಾಗತಿಸಿದರು, ಡಾ.ಜ್ಯೋತಿಲತಾ ತಡಿಬಡಿಮಠ ನಿರೂಪಿಸಿದರು. ಕಲಾವಿದ ಶರಣು ನಾಡಗೀತೆ ಹಾಡಿದರು.
ಸಾಧಕ ಮಹಿಳೆಯರಿಗೆ ಸನ್ಮಾನ :
ವಿವಿಧ ಕ್ಷೇತ್ರಗಳ ಸಾಧಕರಾದ ಹನುಮಾಕ್ಷಿ ಗೋಗಿ, ಪೂರ್ಣಿಮಾ ಗಡ್ಡಿಮನಿ, ಡಾ.ರಿಜ್ವಾನಾ ಅಫ್ರೀನಾ, ನಿರ್ಮಾಲಾ ರಾಜಗುರು ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.