ಬಂಟ್ವಾಳ: ಪತ್ರಕರ್ತರ ಸಂಘದ ಸದಸ್ಯರಿಗೆ ಆರೋಗ್ಯ ಕಾರ್ಡ್ ವಿತರಣೆ, ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ

Update: 2023-07-31 17:26 GMT

ವಿಟ್ಲ: ದೇಶದ ಸದ್ಯದ ಸ್ಥಿತಿಯಲ್ಲಿ ಎಲ್ಲಾ ಅಂಗಗಳೂ ಅಂಟಿಕೊಂಡು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಂಥಾಲಯಗಳ ಬಳಕೆಯನ್ನು ವಿದ್ಯಾರ್ಥಿಗಳು ಹೆಚ್ಚು ಬಳಕೆ ಮಾಡುವ ಮೂಲಕ ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಬೇಕು. ಒಳ್ಳೆಯ ವಿಚಾರಗಳನ್ನು ಸಮಾಜ ಸ್ವೀಕರಿಸುವ ರೀತಿ ಬದಲಾಗುತ್ತಿದೆ. ಪತ್ರಕರ್ತರು ಸಮಾಜವನ್ನು ತಿದ್ದುವ ರೀತಿಗಳು ವಿದ್ಯಾರ್ಥಿಗಳಿಗೆ ತಿಳಿಯಬೇಕಾಗಿದೆ. ಪತ್ರಿಕಾ ರಂಗದಿಂದಾಗಿ ಸಮಾಜ ಸಮತೋಲನದಿಂದ ಸಾಗುತ್ತಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಸೋಮವಾರ ಬಸವನಗುಡಿ ವಿಠಲ ಜೇಸೀಸ್ ಆಂಗ್ಲ ಮಾಧ್ಯಮಶಾಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು, ಬಿಸಿರೋಡ್ ಪ್ರೆಸ್ ಕ್ಲಬ್ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಸಂಘದ ಸದಸ್ಯರಿಗೆ ಮಣಿಪಾಲ್‌ ಆರೋಗ್ಯ ಕಾರ್ಡ್ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪುತ್ತೂರು ಪತ್ರಕರ್ತ ಸುಧಾಕರ ಸುವರ್ಣ ಮಾತನಾಡಿ ತುಳುನಾಡಿ ಪ್ರಧಾನ ಸೀಮೆಗಳಲ್ಲಿ ಒಂದಾದ ವಿಟ್ಲ ರಾಜರ ಕಾಲದಿಂದಲೂ ವಿಶೇಷ ಸ್ಥಾನಮಾನವನ್ನು ಹೊಂದಿದೆ. ಧನಾತ್ಮಕ ಹಾಗೂ ಋಣಾತ್ಮಕವಾಗಿ ವಿಚಾರದಲ್ಲಿ ರಾಜ್ಯದ ಗಡಿಯಲ್ಲಿರುವ ವಿಟ್ಲದ ಜತೆಗೆ ಪೊಲೀಸರಿಗೆ ಹಾಗೂ ಪತ್ರಕರ್ತರಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಸಮಾಜದ ಕನ್ನಡಿಯಂತಿರುವ ಪತ್ರಿಕೆ, ಜನರ ನಡುವಿನ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತದೆ. ಒಳ್ಳೆಯ ಸಮಾಜ ನಿರ್ಮಾಣದಲ್ಲಿ ಪತ್ರಿಕೆಗಳ ಮಹತ್ವ ಹೆಚ್ಚಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕುಘಟಕದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ವಹಿಸಿದ್ದರು. ಪತ್ರಕರ್ತರಿಂದ ವಿವಿಧ ಬೇಡಿಕೆಗಳ ಮನವಿ ಹಾಗೂ ಶಾಲಾ ಆಡಳಿತ ಮಂಡಳಿಯ ಬೇಡಿಕೆಗಳ ಮನವಿಯನ್ನು ಈ ಸಂದರ್ಭದಲ್ಲಿ ನೀಡಲಾಯಿತು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ವಿಠಲಜೇಸೀಸ್ ಎಜುಕೇಶನಲ್ ಸೊಸೈಟಿ ಅಧ್ಯಕ್ಷ ಎಲ್. ಎನ್. ಕೂಡೂರು, ಶಾಲೆಯ ಆಡಳಿತಾಧಿಕಾರಿ ರಾಧಾಕೃಷ್ಣ ಎರುಂಬು, ಮಂಗಳೂರು ಕೆ.ಎಂ.ಸಿ. ಮಾರುಕಟ್ಟೆ ವಿಭಾಗದ ಮನಮೋಹನ, ಉದಯ, ಕಾರ್ತಿಕ್ ನಾಯಕ್ ಉಪಸ್ಥಿತರಿದ್ದರು.

ವಿಠಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಜಯರಾಮ ರೈ ಸ್ವಾಗತಿಸಿದರು. ಬಂಟ್ವಾಳ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ ಪ್ರಸ್ತಾವನೆಗೈದರು. ಪತ್ರಕರ್ತ ರಮೇಶ್ ಕೆ. ಪುಣಚ ವಂದಿಸಿದರು. ಪತ್ರಕರ್ತ ಉದಯಶಂಕರ ನೀರ್ಪಾಜೆ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News