ಬೆಳ್ತಂಗಡಿ | ಸವಣಾಲಿನಲ್ಲಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಮತ್ತೊಂದು ಚಿರತೆ

Update: 2024-09-21 04:31 GMT

ಬೆಳ್ತಂಗಡಿ: ಸವಣಾಲು ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಮತ್ತೊಂದು ಚಿರತೆ ಬಿದ್ದಿದೆ. ಈ ಗ್ರಾಮದಲ್ಲಿ ಕಳೆದೊಂದು ತಿಂಗಳಲ್ಲಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದ 2ನೇ ಚಿರತೆ ಇದಾಗಿದೆ.

ಸವಣಾಲು ಗ್ರಾಮದ ಗುರಿಕಂಡ ಆನಂದ ಶೆಟ್ಟಿ ಎಂಬವರ ಮನೆ ಬಳಿ ಇರಿಸಲಾಗಿದ್ದ ಬೋನಿನಲ್ಲಿ ಕಳೆದ ಮಧ್ಯರಾತ್ರಿ ಚಿರತೆಯೊಂದು ಸೆರೆಯಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಗುರಿಕಂಡ ಪರಿಸರದಲ್ಲಿ ಚಿರತೆ ಹಾವಳಿಯಿತ್ತು. ಈ ಬಗ್ಗೆ ಇಲ್ಲಿನ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅದರಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಚಿರತೆಯನ್ನು ಸೆರೆ ಹಿಡಿಯುವುದಕ್ಕಾಗಿ ಬೋನು ಆಳವಡಿಸಿದ್ದರು. ಸುಮಾರು 3 ತಿಂಗಳ ನಂತರ ಸೆಪ್ಟೆಂಬರ್ 1 ರ ಮಧ್ಯರಾತ್ರಿ ಚಿರತೆ ಈ ಬೋನಿನೊಳಗೆ ಸೆರೆಯಾಗಿತ್ತು. ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿತ್ತು. ಅದರೆ ಒಂದೇ ವಾರದೊಳಗೆ ಮತ್ತೊಂದು ಚಿರತೆ ಈ ಪರಿಸರದಲ್ಲಿ ಸುತ್ತಾಡಿದ್ದಲ್ಲದೇ ಮನೆಯ ಕೋಳಿಯನ್ನು ಹಿಡಿದಿತ್ತು. ಇದರಿಂದ ಮತ್ತಷ್ಟು ಆತಂಕಕ್ಕೊಳಗಾದ ಮನೆಯವರು ಅರಣ್ಯ ಇಲಾಖೆಗೆ ಮತ್ತೆ ಮಾಹಿತಿ ನೀಡಿ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿಕೊಂಡಿದ್ದರು.

ಅದರಂತೆ ಮತ್ತೆ ಕಳೆದ ಒಂದು ವಾರಗಳ ಹಿಂದೆ ಬೋನು ಅಳವಡಿಸಲಾಗಿತ್ತು. ಸೆ 20ರ ಶುಕ್ರವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬೋನಿನೊಳಗೆ ಚಿರತೆ ಸೆರೆಯಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮನೆಯವರು ಮಾಹಿತಿ ನೀಡಿದ್ದು, ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಒಂದು ತಿಂಗಳಲ್ಲಿ ಎರಡು ಚಿರತೆಗಳು ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಂತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News