ಬೆಳ್ತಂಗಡಿ| ವಿದ್ಯಾರ್ಥಿನಿಗೆ ಹಲ್ಲೆ, ಕೊಲೆ ಬೆದರಿಕೆ: ಆರೋಪಿ ಶಂಕರ ದೇವಾಡಿಗ ವಿರುದ್ಧ ಪ್ರಕರಣ ದಾಖಲು

Update: 2024-09-13 12:52 GMT

ಬೆಳ್ತಂಗಡಿ: ಕಾಲೇಜಿಗೆ ಹೋಗಿ ಹಿಂತಿರುಗುತ್ತಿದ್ದ ವಿದ್ಯಾರ್ಥಿನಿಯನ್ನು ರಸ್ತೆಯ ನಿರ್ಜನ ಪ್ರದೇಶದಲ್ಲಿ ತಡೆದು ಹಲ್ಲೆ‌ ನಡೆಸಿ, ಬಟ್ಟೆ ಹರಿದು ಮಾನಹಾನಿ ಮಾಡಿ, ಕೊಲೆ ಬೆದರಿಕೆ ಹಾಕಿರುವ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸ್ಥಳೀಯ ನಿವಾಸಿ ಶಂಕರ ದೇವಾಡಿಗ ಎಂಬಾತ ವಿದ್ಯಾರ್ಥಿನಿಗೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಶಂಕರ ದೇವಾಡಿಗ ವಿದ್ಯಾರ್ಥಿನಿಯೊಂದಿಗೆ ಕೆಲದಿನಗಳಿಂದ ಅನ್ಯೋನ್ಯವಾಗಿದ್ದ ಎನ್ನಲಾಗಿದು, ಈ ವಿಚಾರ ಆಕೆಯ ತಾಯಿಗೆ ತಿಳಿದು‌ ಆತನೊಂದಿಗೆ ಮಾತನಾಡದಂತೆ ಮಗಳಿಗೆ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಆತ‌ನ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಳು ಎಂದು ತಿಳಿದುಬಂದಿದೆ.

ಇದೇ ಕಾರಣಕ್ಕೆ ಸೆ.12ರಂದು ಸಂಜೆ ಕಾಲೇಜು ಮುಗಿಸಿ ವಿದ್ಯಾರ್ಥಿನಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ನಿರ್ಜನ ಪ್ರದೇಶದಲ್ಲಿ ಕಾದು ನಿಂತಿದ್ದ ಆರೋಪಿ ಶಂಕರ ದೇವಾಡಿಗ ಆಕೆಯ ಮೇಲೆ ದಾಳಿ ನಡೆಸಿ, ಮೊಬೈಲ್ ಕಸಿದುಕೊಂಡು ಅವಾಚ್ಯವಾಗಿ ನಿಂದಿಸಿ, ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಲ್ಲದೆ ಬಟ್ಟೆಯನ್ನು ಹರಿದು ನಾಳೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ಹಲ್ಲೆಗೆ ಒಳಗಾದ ವಿದ್ಯಾರ್ಥಿನಿ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿರುವ ವೇಣೂರು ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News