ಮಂಗಳೂರು ಮೀನುಗಾರಿಕಾ ಬಂದರು 3ನೆ ಹಂತದ ಅಭಿವೃದ್ಧಿ; 49.50 ಕೋಟಿ ರೂ. ಯೋಜನೆಗೆ ಸದ್ಯದಲ್ಲೇ ಅನುಮೋದನೆ: ದಿನೇಶ್ ಗುಂಡೂರಾವ್
ಮಂಗಳೂರು, ಸೆ.11: ನಗರದ ಮೀನುಗಾರಿಕಾ ಬಂದರಿನ 3ನೆ ಹಂತದ ಅಭಿವೃದ್ಧಿ ಕಾಮಗಾರಿ ಅಗತ್ಯವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 49.50 ಕೋಟಿ ರೂ. ವೆಚ್ಚದ ಅದಾಂಜು ಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯದಲ್ಲೇ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರಕಾರ ಅಸ್ತಿತ್ವಕ್ಕೆ ಬಂದು 100 ದಿನಗಳಲ್ಲಿಯೇ ನುಡಿದಂತೆ ನಡೆದಿದೆ. ಮೀನುಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ ಎಂದರು.
ಸೀಮೆಎಣ್ಣೆ ಇಂಜಿನ್ ಮೀನುಗಾರಿಕಾ ದೋಣಿಗಳನ್ನು ಪೆಟ್ರೋಲ್/ಡೀಸೆಲ್ ಇಂಜಿನಗಳಾಗಿಬದಲಾಯಿಸಲು 50,000 ರೂ. ಸಹಾಯಧನ, ಪ್ರಸ್ತ ಸಾಲಿನಲ್ಲಿ 4000 ಸೀಮೆಎಣ್ಣೆ ಇಂಜಿನ್ಗಳ ಬದಲಾವಣೆಗೆ 20 ಕೋಟಿ ರೂ. ಸಹಾಯಧನ ಒದಗಿಸಲಾಗಿದೆ ಎಂದರು.
ಮೀನುಗಾರ ಮಹಿಳೆಯರಿಗೆ ಬಡ್ಡಿರಹಿತ ಸಾಲದ ಮಿತಿಯನು 50 ಸಾವಿರ ರೂ.ನಿಂದ 3 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಮೀನುಗಾರಿಕ ದೋಣಿಗಳಿಗೆ ನೀಡಲಾಗುತ್ತಿದ್ದ ಕರ ರಹಿತ ಡೀಸೆಲ್ 1.50 ಲಕ್ಷ ಕಿ.ಲೋ. ಲೀಟರ್ನಿಂದ 2 ಲಕ್ಷ ಕಿ.ಲೋ. ಲೀಟರ್ಗೆ ಹೆಚ್ಚಿಸಲಾಗಿದ್ದು ದ.ಕ. ಜಿಲ್ಲೆಯ 3400 ಕ್ಕೂ ಅಧಿಕ ಮೀನುಗಾರ ದೋಣಿಗಳಿಗೆ ಇದರ ಪ್ರಯೋಜನ ಲಭಿಸಲಿದೆ ಎಂದರು.
ನಾಡದೋಣಿ ಮಾಲಕರಿಗೆ ನಿರಂತರ ಸೀಮೆಎಣ್ಣೆ ಪೂರೈಸಲು ರಾಜ್ಯ ಸರಕಾರ ಅನುದಾ ನೀಡಲು ತೀರ್ಮಾನಿಸಿದೆ. ಕೈಗಾರಿಕಾ ಸೀಮೆಎಣ್ಣೆ ಖರೀದಿಸಿ ಕೆಎಫ್ಡಿಸಿ ಮೂಲಕ ಸರಬರಾಜು ಮಾಡಲು ಹೊಸ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಕೈಗಾರಿಕಾ ಸೀಮೆಎಣ್ಣೆ ಖರೀದಿಸುವ ನಾಡದೋಣಿ ಮಾಲಕರಿಗೆ ಲೀಟರಗೆ 35 ರೂ. ರಿಯಾಯಿತಿ ದೊರೆಯಲಿದೆ ಎಂದವರು ಹೇಳಿದರು.
ಮೀನುಗಾರಿಕಾ ಬಂದರಿನ ವಾರ್ಫ್ ಮತ್ತು ಅಳಿವೆ ಬಾಗಿಲಿನಲ್ಲಿ ಹೂಳೆತ್ತುವ ಕಾಮಗಾರಿಗೆ 3.90 ಕೋಟಿ ರೂ. ಅನದುಆನ ಒದಗಿಸಲಾಗಿದೆ. ಈ ತಿಂಗಳಲ್ಲಿ ಹೂಳೆತ್ತುವ ಕಾಮಗಾರಿ ಆರಂಭಿಸಲಾಗುತ್ತದೆ. ಬಂದರು ಇಲಾಖೆ ಸಹ 29 ಕೋಟಿ ರೂ. ಅನುದಾನದಲ್ಲಿ ಹೂಳೆತ್ತುವ ಕಾಮಗಾರಿಕೈಗೆತ್ತಿಕೊಂಡಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಉಳ್ಳಾಲ ಕೋಡಿಯಲ್ಲಿ ನಾಡದೋಣಿಗಳಿಗೆ ಜಟ್ಟಿ ನಿರ್ಮಾಣ ಮಾಡಲು 6.50 ಕೋಟಿ ರೂ. ಅನುದಾನದಲ್ಲಿ ಅಂದಾಜು ಪಟ್ಟಿ ತಯಾರಿಸಲಾಗಿದೆ ಎಂದು ಅವರು ವಿವರ ನೀಡಿದರು.
ಐಟಿಪಾರ್ಕ್ ಅಭಿವೃದ್ಧಿಗೆ ಅನುಮೋದನೆ
ದೇರೆಬೈಲ್ನಲ್ಲಿ ಕಿಯೋನಿಕ್ಸ್ಗೆ ಸೇರಿದ 3 ಎಕರೆಗೂ ಅಧಿಕ ಜಾಗದಲ್ಲಿ ಪಿಪಿಪಿ ಮಾದರಿಯಲ್ಲಿ ಐಟಿ ಪಾರ್ಕ್ ಅಭಿವೃದ್ಧಿ ಪಡಿಸಲು ಸರಕಾರದಿಂದ ಅನುಮೋದನೆ ಪಡೆಯಲಾಗಿದೆ. ಮುಂದಿನ ಎರಡು ತಿಂಗಳೊಳಗೆ ಐಟಿ ಪಾರ್ಕ್ಗೆ ಆರ್ಎಫ್ಪಿ ಸಿದ್ಧವಾಗಲಿದ್ದು, ಗುತ್ತಿಗೆ ಅವಧಿಯನ್ನು ಈಗಿರುವ 30 ವರ್ಷಗಳಿಂದ 60 ವರ್ಷಗಳಿಗೆ ಹೆಚ್ಚಿನ ನಿಟ್ಟಿನಲ್ಲಿ ಪರಿಶೀಲಿಸಲಾಗುತ್ತಿದೆ. ಕದ್ರಿ ಪಾರ್ಕ್ನ ರಸ್ತೆ ಮತ್ತು ಆವರಣದ ಅಂಗಡಞಿಗಳು ಮತ್ತು ಇತರ ಪ್ರದೇಶಗಳಿಗೆ ಹೊಸ ಟೆಂಡರ್ ಕರೆಯಲು ಸೂಚಿಸಲಾಗಿದೆ ಎಂದು ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಮಹಾಯೋಜನೆ ವಲಯ ನಿಯಮಗಳಿಗೆ ತಿದ್ದುಪಡಿ
ದೀರ್ಘಕಾಲದಿಂದ ಬಾಕಿ ಉಳಿದಿರುವ ಮಂಗಳೂರು ಮಾಸ್ಟರ್ ಪ್ಲಾನ್ನ ವಲಯ ನಿಯಮಗಳಿಗೆ ತಿದ್ದುಪಡಿ ತರುವ ಬಗ್ಗೆ ಚರ್ಚಿಸಲಾಗಿದೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ಪ್ರಸ್ತಾಪಿಸಿದ ತಿದ್ದುಪಡಿಗಳನ್ನು ಅಧ್ಯಯನ ಮಾಡಲು ಮತ್ತು ಅವರ ಶಿಫಾರಸುಗಳನ್ನ ಯುಡಿ ಕಾರ್ಯದರ್ಶಿಗೆ ಕಳುಹಿಸಲು ಡಿಟಿಸಿಪಿಗೆ ಸೂಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜತೆ ಸಮಾಲೋಚನೆಸಿ ಝೆಡ್ ಆರ್ಗೆ ಕರಡು ತಿದ್ದುಪಡಿಯನ್ನು ಅಂತಿಮಗೊಳಿಸಲು ಸೂಚಿಸಲಾಗಿದೆ ಎಂದು ಸಚಿವ ದಿನೇಶ ಗುಂಡೂರಾವ್ ತಿಳಿಸಿದರು.