ಸರ್ವರ ಒಳಗೊಳ್ಳುವಿಕೆ ಸುಸ್ಥಿರ ಅಭಿವೃದ್ಧಿಗೆ ಮೂಲಾಧಾರ: ಸ್ಪೀಕರ್ ಯು.ಟಿ. ಖಾದರ್

Update: 2024-09-24 15:45 GMT

ಮಂಗಳೂರು: ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸರ್ವರ ಒಳಗೊಳ್ಳುವಿಕೆಯೇ ಸುಸ್ಥಿರ ಅಭಿವೃದ್ಧಿಗೆ ಮೂಲವಾಗಿದೆ ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಹೇಳಿದ್ದಾರೆ.

ದಿಲ್ಲಿಯಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಸಂಸದೀಯ ಸಂಘ ಭಾರತ ವಲಯದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಸುಸ್ಥಿರ ಅಭಿವೃದ್ಧಿ ಸಾಧಿಸಲು ತಮ್ಮ ಅಭಿವೃದ್ಧಿ ನೀತಿಗಳನ್ನು ಜೋಡಿಸಬೇಕಿದೆ. ಬಜೆಟ್ ಪ್ರಕ್ರಿಯೆಗಳು ಅತ್ಯಂತ ಕೆಳಸ್ಥರದಲ್ಲಿರುವ ಸಮೂಹಗಳನ್ನು ಗುರಿಯಾಗಿರಿಸಿಕೊಳ್ಳಬೇಕು ಎಂದರು.

ಸರಕಾರದ ಕಾರ್ಯಕ್ರಮ ಮತ್ತು ಯೋಜನೆಗಳು ಜನರಿಗೆ ತಲುಪುವುದನ್ನು ಜನಪ್ರತಿನಿಧಿಗಳು ಮೇಲ್ವಿಚಾರಣೆ ಮಾಡ ಬೇಕಿದೆ. ಈ ನಿಟ್ಟಿನಲ್ಲಿ ಶಾಸಕಾಂಗವು ಪ್ರಬಲ ಅಧಿಕಾರವನ್ನು ಹೊಂದಿದೆ. ಅಭಿವೃದ್ಧಿಯ ಗುರಿ ತಲುಪಲು ಬಜೆಟ್ ವೆಚ್ಚವನ್ನು ಪರಿಣಾಮಕಾರಿಯಾಗಿ ಮಾಡಬೇಕು ಎಂದು ಅವರು ತಿಳಿಸಿದರು.

2030 ರೊಳಗೆ ಸುಸ್ಥಿರ ಅಭಿವೃದ್ಧಿ ಸಾಧಿಸುವ ವಿಶ್ವಸಂಸ್ಥೆಯ ಗುರಿ ತಲುಪುವುದು ಅಸಾಧ್ಯವೇನಲ್ಲ. ಈ ನಿಟ್ಟಿನಲ್ಲಿ ಶಾಸ ಕಾಂಗ ಮತ್ತು ಸರಕಾರ ಪರಸ್ಪರ ಸಹಕಾರದಿಂದ ನಿರ್ವಹಿಸಬೇಕಿದೆ. ಶಾಸಕರು ಪಕ್ಷಾತೀತವಾಗಿ ಕಾರ್ಯನಿರ್ವಹಿಸಿದರೆ ಅಭಿವೃದ್ಧಿ ವೇಗ ಪಡೆಯಲಿದೆ ಎಂದು ಸಭಾಧ್ಯಕ್ಷರು ಹೇಳಿದರು.

ಅರಣ್ಯೀಕರಣ, ತ್ಯಾಜ್ಯ ನಿರ್ವಹಣೆ, ಸೌರಶಕ್ತಿ ಬಳಕೆ, ಮಣ್ಣು ಮತ್ತು ನೀರಿನ ಸಂರಕ್ಷಣೆ, ನದಿಗಳ ಪರಸ್ಪರ ಸಂಪರ್ಕ ಇತ್ಯಾದಿ ಯೋಜನೆಗಳಿಂದ ಸ್ವಚ್ಛ ಮತ್ತು ಹಸಿರು ಪ್ರದೇಶಕ್ಕೆ ಒತ್ತು ಸಿಗಲಿದೆ. ಸುಸ್ಥಿರ ಅಭಿವೃದ್ಧಿಗೆ ಕರ್ನಾಟಕದಲ್ಲಿ ಕೈಗೊಂಡಿರುವ ಯೋಜನೆಗಳು ಪರಿಣಾಮಕಾರಿಯಾಗಿವೆ. ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗಾಗಿ ಕರ್ನಾಟಕ ಸರಕಾರವು ಆದ್ಯತೆ ನೀಡುವ ಮೂಲಕ ಸಮತೋಲಿತ ಅಭಿವೃದ್ಧಿಯನ್ನು ಮುಟ್ಟಲು ಪ್ರಯತ್ನಿಸಿದೆ ಎಂದು ಯು.ಟಿ. ಖಾದರ್ ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News