ಮಂಗಳೂರು: ಎಬಿವಿಪಿ ಪ್ರತಿಭಟನೆಗೆ ಎನ್‌ಎಸ್‌ಯುಐ ಖಂಡನೆ

Update: 2023-09-10 14:17 GMT

ಮಂಗಳೂರು, ಸೆ.10: ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಶೋಧಕ ಡಾ. ಶಂಸುಲ್ ಇಸ್ಲಾಂ ವಿರುದ್ಧ ಎಬಿವಿಪಿ ಪ್ರತಿಭಟಿಸಿರುವುದನ್ನು ದ.ಕ.ಜಿಲ್ಲಾ ಎನ್ ಎಸ್‌ಯುಐ ತೀವ್ರವಾಗಿ ಖಂಡಿಸಿದೆ.

ಡಾ. ಶಂಸುಲ್ ಇಸ್ಲಾಂ ಅವರ ಉಪನ್ಯಾಸ ಕಾರ್ಯಕ್ರಮಕ್ಕೆ ತನ್ನದೇ ಆದ ವಿಶೇಷತೆಯಿತ್ತು. ಎಬಿವಿಪಿಯು ಇದನ್ನು ವಿರೋಧಿಸಿ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟಿಸಿರುವುದು ಸ್ವಾತಂತ್ರ್ಯ ಹೋರಾಟಗಾರರಿಗೆ, ದೇಶಕ್ಕಾಗಿ ಬಲಿದಾನ ಮಾಡಿದ ಹುತಾತ್ಮರಿಗೆ ಮಾಡಿರುವ ಅವಮಾನವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಯಾವ ಪಾತ್ರವನ್ನೂ ವಹಿಸದೆ ಬ್ರಿಟಿಷರ ಏಜೆಂಟರಾಗಿ ಕೆಲಸ ಮಾಡಿದ ಆರೆಸ್ಸೆಸ್‌ನ ತನ್ನ ಅಂಗಸಂಸ್ಥೆಯಾದ ಎಬಿವಿಪಿ ಮೂಲಕ ವಿದ್ಯಾರ್ಥಿಗಳನ್ನು ಬಳಸಿಕೊಂಡು ಅವಮಾನಿಸುವುದು ನಾಚಿಕೆಗೇಡಿನ ಕೆಲಸವಾಗಿದೆ. ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಮಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಕೇಶವನ್ ವೇಲುತ್ತಾಟ್ ಅವರನ್ನು ತಡೆದು ನಿಲ್ಲಿಸಿ ಹಲ್ಲೆ ಮಾಡಲು ಮುಂದಾದದ್ದು ಅಕ್ಷಮ್ಯ ಎಂದು ಎನ್‌ಎಸ್‌ಯುಐ ದ.ಕ.ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News