ಎಂಸಿಸಿ ಬ್ಯಾಂಕ್ ಗೆ ದಾಖಲೆಯ 10.45 ಕೋಟಿ ರೂ. ನಿವ್ವಳ ಲಾಭ: ಶೇ.10 ಡಿವಿಡೆಂಡ್ ಘೋಷಣೆ

Update: 2024-09-23 10:15 GMT

ಮಂಗಳೂರು, ಸೆ.23: ಎಂ.ಸಿ.ಸಿ. ಬ್ಯಾಂಕ್ ಎಂದು ಪ್ರಖ್ಯಾತವಾಗಿರುವ ಮಂಗಳೂರು ಕೆಥೊಲಿಕ್ ಕೋ-ಆಪರೇಟಿವ್ ಬ್ಯಾಂಕ್ ಅತ್ಯುತ್ತಮ ಪ್ರಗತಿ ಸಾಧಿಸಿದ್ದು 2023-24ನೇ ವಿತ್ತೀಯ ವರ್ಷದಲ್ಲಿ ಶೇ.10 ಲಾಭಾಂಶ ಘೋಷಿಸಿದೆ. ಜೊತೆಗೆ ಬ್ಯಾಂಕ್ ಲಾಭ ಗಳಿಕೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದು, ಬ್ಯಾಂಕಿನ ನಿವ್ವಳ ಲಾಭ.10.45 ಕೋಟಿ ರೂ. ಆಗಿರುತ್ತದೆ. ಇದು ಬ್ಯಾಂಕಿನ ಚರಿತ್ರೆಯಲ್ಲೇ ಅತ್ಯಂತ ಹೆಚ್ಚಿನ ಲಾಭ ಎಂದು ಎಂ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ತಿಳಿಸಿದ್ದಾರೆ.

ಅವರು ರವಿವಾರ ಸಂತ ಆಲೋಶಿಯಸ್ ಪದವಿಪೂರ್ವ ಕಾಲೇಜಿನ ಸಭಾಂಗಣ(ಲೊಯೊಲಾ ಹಾಲ್)ದಲ್ಲಿ ನಡೆದ ಬ್ಯಾಂಕಿನ 106ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಎಂ.ಸಿ.ಸಿ. ಬ್ಯಾಂಕ್ ಒಟ್ಟು ಠೇವಣಿಯಲ್ಲಿ ಶೇ.10.00 ಪ್ರಗತಿ ಸಾಧಿಸಿದ್ದು, ರೂ.635.70 ಕೋಟಿ ಠೇವಣಿ, ಒಟ್ಟು ಮುಂಗಡದಲ್ಲಿ ಶೇಕಡ 25.21 ಪ್ರಗತಿ ಸಾಧಿಸಿದ್ದು ರೂ.444.88 ಕೋಟಿ ಮುಂಗಡಗಳು, ದುಡಿಯುವ ಬಂಡವಾಳ ರೂ.752.95 ಕೋಟಿ (ಪ್ರಗತಿ ಶೇಕಡ 10.03) ಮತ್ತು ಶೇರು ಬಂಡವಾಳ ರೂ.31.21 ಕೋಟಿ (ಪ್ರಗತಿ ಶೇಕಡ 14.07) ಆಗಿದೆ ಎಂದರು.

ಜೊತೆಗೆ ಬ್ಯಾಂಕಿನ ಎನ್.ಪಿ.ಎ. ಪ್ರಮಾಣವು ಕಳೆದ ಆರ್ಥಿಕ ವರ್ಷದಲ್ಲಿದ್ದ ಶೇ.1.37ರಿಂದ 1.12%ಕ್ಕೆ ತಲುಪಿರುವುದು ಬ್ಯಾಂಕಿನ ಬೆಳವಣಿಗೆ ಉತ್ತಮವಾಗಿದೆ ಎಂಬುದನ್ನು ತೋರಿಸುತ್ತದೆ. ಬ್ಯಾಂಕಿನ ಅನುತ್ಪಾದಕ ಸಾಲಕ್ಕೆ ಒದಗಿಸಿದ ಅವಕಾಶದ ಅನುಪಾತವು 78.34% ಆಗಿರುತ್ತದೆ. ಬ್ಯಾಂಕಿನ ಪ್ರಮಾಣವು ಆರ್ಬಿಐ ನಿಗದಿಪಡಿಸಿರುವ ಕನಿಷ್ಠ ಮಿತಿ ಶೇಕಡಾ 9%ಕ್ಕಿಂತ ಹೆಚ್ಚಿದ್ದು, 23.06% ಇರುತ್ತದೆ ಎಂದರು.

 

ಬ್ಯಾಂಕ್ 2023-24ನೇ ಆರ್ಥಿಕ ವರ್ಷದಲ್ಲಿ ಒಂದು ಸಾವಿರ ಕೋಟಿ ವ್ಯವಹಾರದ ಮೈಲುಗಲ್ಲನ್ನು ದಾಟಿರುತ್ತದೆ. ಬ್ಯಾಂಕ್ ಲೆಕ್ಕ ಪರಿಶೋಧನೆಯಲ್ಲಿ ಸತತವಾಗಿ ಎ’ ಶ್ರೇಣಿಯ ಬ್ಯಾಂಕಾಗಿ ಗುರುತಿಸಲ್ಪಟ್ಟಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ಮಾನದಂಡಗಳನ್ನು ಪೂರ್ಣಗೊಳಿಸಿ ಬ್ರಹ್ಮಾವರದಲ್ಲಿ ಮಾರ್ಚ್ ತಿಂಗಳಲ್ಲಿ 17ನೇ ಶಾಖೆಯನ್ನು ಪ್ರಾರಂಭಿಸಲಾಗಿದೆ. ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಲು ಹಾಗೂ ಹೊಸ ಶಾಖೆಗಳನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ ಎಂದ ಅವರು, ಬ್ಯಾಂಕಿನ ಪ್ರಗತಿಗೆ ಕಾರಣರಾದ ಗ್ರಾಹಕರು, ಸದಸ್ಯರು, ಸಿಬ್ಬಂದಿ ವರ್ಗ ಮತ್ತು ಹಿತೈಷಿಗಳನ್ನು ಅಭಿನಂದಿಸಿದರು.

ಸಾಲಗಾರರು ಸಾಲವನ್ನು ಪಡೆದು ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡಿರುವುದರಿಂದ ಬ್ಯಾಂಕ್ ಉತ್ತಮ ಲಾಭವನ್ನು ಗಳಿಸಿ ಬ್ಯಾಂಕಿನ ಎನ್.ಪಿ.ಎ. ಪ್ರಮಾಣ ಕಡಿಮೆಯಾಗಲು ಸಹಕಾರಿಯಾಗಿದೆ ಎಂದರು.

ಬ್ಯಾಂಕಿನ ಮುಂದಿನ ಉದ್ದೇಶ ಮತ್ತು ಗುರಿಗಳ ಬಗ್ಗೆ ಮಾತನಾಡುತ್ತಾ ಮುಂದಿನ ವರ್ಷದಲ್ಲಿ 10 ಹೊಸ ಶಾಖೆಗಳ ಆರಂಭ, ಉಡುಪಿ, ಮೂಡುಬಿದಿರೆ, ಕಾರ್ಕಳ, ಮತ್ತು ಕುಲಶೇಖರ ಶಾಖೆಗಳ ಸ್ಥಳಾಂತರ, ಡಿಜಿಟಲ್ ಸೇವೆಯಂತಹ ಗೂಗಲ್ ಪೇ, ಫೊನ್ ಪೇ, ಯುಪಿಎ, ಇತರ ಸೌಲಬ್ಯಗಳನ್ನು ಸದ್ಯದಲ್ಲಿಯೇ ಗ್ರಾಹಕರಿಗೆ ಒದಗಿಸುವ ಯೋಜನೆಯನ್ನು ಕೈಗೊಂಡಿದ್ದು ಶಾಖೆಗಳನ್ನು ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಬ್ಯಾಂಕ್ ಮುಂದಿನ 10 ವರ್ಷಗಳ ಎಲ್ಲಿ ತಲುಪಬೇಕು ಎಂಬ ಬಗ್ಗೆ ಚಿಂತನೆ ಮಾಡಿ ನಿರ್ದಿಷ್ಟ ಗುರಿಯನ್ನು ತಲುಪಲು ಈಗಾಗಲೇ ಕಾರ್ಯಯೋಜನೆಯನ್ನು ರೂಪಿಸಿದ್ದೇವೆ. ತಂತ್ರಜ್ಞಾನವನ್ನು ಉನ್ನತ ಮಟ್ಟಕ್ಕೆ ಏರಿಸಲು ಕಾರ್ಯಪ್ರವೃತ್ತರಾಗಿದ್ದೇವೆ. ಬ್ಯಾಂಕಿನ ಸದಸ್ಯರು ಉತ್ತಮ ಸಲಹೆ ಸೂಚನೆಗಳನ್ನು ನೀಡಿ ಈ ಎಲ್ಲಾ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಹಕರಿಸಿ ಬ್ಯಾಂಕಿನ ಅಭಿವೃದ್ದಿಗೆ ಕಾರಣಕರ್ತರಾಗಬೇಕೆಂದು ಕೋರಿದರು.

ಸಭೆಯನ್ನು ಉದ್ಘಾಟಿಸಿದ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ, ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ಸದಸ್ಯರಾದ ಎಡ್ಮಂಡ್ ಫ್ರಾಂಕ್ (ಮಾಜಿ ಉಪಾಧ್ಯಕ್ಷರು ಎಂ.ಸಿ.ಸಿ. ಬ್ಯಾಂಕ್), ರೋನ್ಸ್ ಬಂಟ್ವಾಳ್, ರೋಹನ್ ಮೊಂತೇರೊ,(ಮ್ಯಾನೇಜಿಂಗ್ ಡೈರೆಕ್ಟರ್, ರೋಹನ್ ಕಾರ್ಪೊರೇಶನ್) ಪಿಯೂಸ್ ಎಲ್. ರೊಡ್ರಿಗಸ್(ಮಾಜಿ ನಿರ್ದೇಶಕರು ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಮಂಡಳಿ) ಮತ್ತು ಲುವಿ ಪಿಂಟೊ (ಅಧ್ಯಕ್ಷರು, ಮಾಂಡ್ ಸೊಭಾಣ್) ಇವರು ಎಲ್ಲಾ ಸದಸ್ಯರ ಪರವಾಗಿ ಬ್ಯಾಂಕಿನ ಸಂಸ್ಥಾಪಕರಿಗೆ ಪುಷ್ಪಾಂಜಲಿ ಅರ್ಪಿಸುವ ಮೂಲಕ ಗೌರವಿಸಿದರು.

ಉಪಾಧ್ಯಕ್ಷ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವಾ 105ನೇ ವಾರ್ಷಿಕ ಸಾಮಾನ್ಯ ಸಭೆಯ ವರದಿಗಳನ್ನು ಓದಿದರು. 2023-24ರ ಲೆಕ್ಕ ಪರಿಶೋಧಿತ ಹಣಕಾಸು, ಲೆಕ್ಕ ಪರಿಶೋಧನಾ ವರದಿ, 2024-25ರ ಆರ್ಥಿಕ ವರ್ಷದ ಚಟುವಟಿಕೆಗಳ ಕಾರ್ಯಕ್ರಮ ಮತ್ತು 2024-25ರ ಬಜೆಟ್ ಅನ್ನು ಸಾಮಾನ್ಯ ಸಭೆಯ ಮುಂದೆ ಮಂಡಿಸಿ, ಅನುಮೋದನೆ ಪಡೆಯಲಾಯಿತು. ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅಧ್ಯಕ್ಷರು, ಸದಸ್ಯರು ನೀಡಿದ ಸಲಹೆ ಸೂಚನೆಗಳನ್ನು ಪರಿಗಣನೆಗೆ ತೆಗೆದುಕೊಂಡು ಮುಂದಿನ ವರ್ಷದಲ್ಲಿ ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ನಿರ್ದೇಶಕರಾದ ಆ್ಯಡ್ರ್ಯೂ ಡಿಸೋಜ, ಜೋಸೆಫ್ ಎಂ. ಅನಿಲ್ ಪತ್ರಾವೊ, ಡಾ| ಜೆರಾಲ್ಡ್ ಪಿಂಟೊ, ಡೇವಿಡ್ ಡಿಸೋಜ, ಎಲ್ರೊಯ್ ಕಿರಣ್ ಕ್ರಾಸ್ಟೊ, ರೋಶನ್ ಡಿಸೋಜ, ಹೆರಾಲ್ಡ್ ಮೊಂತೇರೊ, ಜೆ.ಪಿ.ರೊಡ್ರಿಗಸ್, ವಿನ್ಸೆಂಟ್ ಲಸ್ರಾದೊ, ಮೆಲ್ವಿನ್ ವಾಸ್, ಐರಿನ್ ರೆಬೆಲ್ಲೊ, ಡಾ.ಫ್ರೀಡಾ ಡಿಸೋಜ, ವೃತ್ತಿಪರ ನಿರ್ದೇಶಕರಾದ ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಮಹಾಪ್ರಬಂಧಕ ಸುನಿಲ್ ಮಿನೇಜಸ್, ಉಪ ಮಹಾಪ್ರಬಂಧಕ ರಾಜ್ ಎಫ್. ಮಿನೇಜಸ್ ಉಪಸ್ಥಿತರಿದ್ದರು.

ಮಹಾಪ್ರಬಂಧಕ ಸುನಿಲ್ ಮಿನೇಜಸ್ ಸ್ವಾಗತಿಸಿದರು. ಬ್ರಹ್ಮಾವರ ಶಾಖಾ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ವಂದಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News