ಕರ್ನಾಟಕದಲ್ಲಿ ಬಾಲಕಿಯರು-ಮಹಿಳೆಯರು ನಾಪತ್ತೆ ಪ್ರಕರಣ: ಸಮಗ್ರ ತನಿಖೆ ನಡೆಸಲು ವಿಮೆನ್ ಇಂಡಿಯಾ ಮೂವ್‌ಮೆಂಟ್ ಆಗ್ರಹ

Update: 2023-09-12 17:39 GMT

ಮಂಗಳೂರು: ಜುಲೈ ತಿಂಗಳಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ಕೇಂದ್ರ ಗ್ರಹ ಸಚಿವಾಲಯ ಮಂಡಿಸಿದ ಅಂಕಿ ಅಂಶಗಳು ದಿಗ್ಭ್ರಮೆಗೊಳಿಸುವಂಥದ್ದು. ಇದರ ಪ್ರಕಾರ 2019-2021ರ ವರೆಗಿನ ಮೂರು ವರ್ಷದ ಅವಧಿಯಲ್ಲಿ 13ಲಕ್ಷಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ. ಈ ಪೈಕಿ 31,935 ಮಹಿಳೆಯರು ಹಾಗೂ ಬಾಲಕಿಯರು ಕರ್ನಾಟಕದಿಂದ ನಾಪತ್ತೆಯಾಗಿದ್ದಾರೆಂದು ವರದಿಯು ತಿಳಿಸುತ್ತದೆ. ಮಹಿಳಾಪರ ಸರ್ಕಾರ ಎಂಬಂತೆ ಬಿಂಬಿಸಿ ಕೊಳ್ಳುತ್ತಿರುವ ಕರ್ನಾಟಕ ಸರ್ಕಾರವು ಈ ಬಗ್ಗೆ ಎಚ್ಚೆತ್ತುಕೊಳ್ಳದಿರುವುದು ಅಕ್ಷಮ್ಯ. ಆದ ಕಾರಣ ಆದ್ಯತೆಯ ಮೇರೆಗೆ ವಿಶೇಷ ತನಿಖಾ ತಂಡದ ಮುಖಾಂತರ ಸಮಗ್ರ ತನಿಖೆ ನಡೆಸಬೇಕು ಹಾಗೂ ಮಹಿಳಾ ಭದ್ರತೆಯ ಬಗ್ಗೆ ವಿಶೇಷ ಕಾರ್ಯಯೋಜನೆಗಳನ್ನು ರೂಪಿಸಬೇಕೆಂದು ವಿಮೆನ್ ಇಂಡಿಯಾ ಮೂವ್‌ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆ ಒತ್ತಾಯಿಸಿದೆ.

ಎರಡು ದಿನಗಳ ವಿಮ್ ರಾಜ್ಯ ಕಾರ್ಯಕಾರಿಣಿ ಸಭೆಯು ರಾಜ್ಯ್ಯಾಧ್ಯಕ್ಷೆ ಫಾತಿಮಾ ನಸೀಮಾರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬೆಂಗಳೂರು ನಡೆದಿದ್ದು ರಾಜ್ಯದ ಬಹಳಷ್ಟು ಸಮಸ್ಯೆಗಳತ್ತ ರಾಜ್ಯ ಸರಕಾರ ಗಮನ ಕೊಡಬೇಕೆಂದೂ ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ದಲಿತ, ಹಿಂದುಳಿದ ವರ್ಗಗಳ ಮತ ಪಡೆದು ಅಧಿಕಾರಕ್ಕೆ ಬಂದಿರುವ ಸರ್ಕಾರ ಈ ವರ್ಗಗಳ ಪರ ಅಭಿವೃದ್ಧಿ ವಿಷಯದಲ್ಲಿ ಹಾಗೂ ಅವರ ಮೇಲಾಗುತ್ತಿರುವ ದೌರ್ಜನ್ಯ, ಅನ್ಯಾಯದ ಬಗ್ಗೆ ನಿರ್ಲಕ್ಷ ವಹಿಸಿರುವುದು ಖಂಡನಾರ್ಹ. ಹಿಜಾಬ್, 2ಬಿ ಮೀಸಲಾತಿ ಮರು ಸ್ಥಾಪಿಸುವ ಭರವಸೆ ನೀಡಿದ್ದ ಸರ್ಕಾರ ಈಗ ಜಾಣ ಮೌನ ತಾಳಿದೆ. ಬಜೆಟ್ ನಲ್ಲೂ ಅಲ್ಪಸಂಖ್ಯಾತರನ್ನು ಕಡೆಗೆಣಿಸಿರುವುದು ಗಮನಾರ್ಹ. ಇಂತಹ ನಿರ್ಲಕ್ಷತನವನ್ನು ಕೈ ಬಿಟ್ಟು ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸ ಬೇಕೆಂದು ಸಭೆಯು ಆಗ್ರಹಿಸಿದೆ.

ಯುವಶಕ್ತಿಯು ದೇಶವೊಂದರ ಭವಿಷ್ಯ ನಿರ್ಮಾಣದ ರೂವಾರಿಗಳಾಗಿದ್ದಾರೆ. ದೇಶದ ನಾಶಕ್ಕೆ ರಕ್ತ ರಹಿತ ಯುದ್ಧ ಎಂಬ ಮಾತಿನಂತೆ ಮಾದಕ ದ್ರವ್ಯದ ವ್ಯಾಪಕತೆಯು ದೇಶವನ್ನು ನಾಶಗೊಳಿಸುವುದರಲ್ಲಿ ಎರಡು ಮಾತಿಲ್ಲ. ಸುಲಭವಾಗಿ ಕೈಗೆಟ್ಟಕುತ್ತಿರುವ ಮಾದಕ ಪದಾರ್ಥಗಳು ಯುವ ಸಮೂಹವನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ. ರಾಜ್ಯದಲ್ಲಿ ಮಾದಕ ವ್ಯಸನಿಗಳ ಬಂಧನವಾಗುತ್ತಿದೆಯೇ ಹೊರತು ಅದರ ಮೂಲವನ್ನು ಪತ್ತೆ ಹಚ್ಚುತ್ತಿಲ್ಲ. ಜೊತೆಗೆ ರಾಜಕೀಯ ಪ್ರಭಾವ ದಿಂದಾಗಿ ಆರೋಪಿಗಳು ಸುಲಭವಾಗಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸರಕಾರವು ಬೆನ್ನೆಲುಬಾಗಿ ನಿಂತಿರುವುದು ವಿಷಾದನೀಯ ಎಂದು ವಿಮೆನ್ ಇಂಡಿಯಾ ಮೂವ್‌ಮೆಂಟ್ ಹೇಳಿದೆ.

ಸರಕಾರ ಮಾದಕ ದ್ರವ್ಯದ ಜಾಲದ ಮೂಲವನ್ನು ಪತ್ತೆ ಹಚ್ಚಿ ನಿರ್ಮೂಲನೆಗೊಳಿಸಿ ಸ್ವಸ್ಥ ಸಮಾಜವನ್ನು ನಿರ್ಮಿಸಬೇಕೆಂದು ವಿಮೆನ್ ಇಂಡಿಯಾ ಮೂವ್‌ಮೆಂಟ್ ರಾಜ್ಯ ಕಾರ್ಯಕಾರಿಣಿ ಸಮಿತಿ ಕರ್ನಾಟಕ ರಾಜ್ಯ ಸರಕಾರವನ್ನು ಒತ್ತಾಯಿಸಿದೆ. ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯೆ ಮೇರಿ ವೇಗಸ್ ಮಹಿಳಾ ಸಂಘಟನೆ ಅನಿವಾರ್ಯತೆಯ ಬಗ್ಗೆ ಮಾತಾಡಿದರು.

ಈ ಸಭೆಯಲ್ಲಿ ರಾಜ್ಯ ಪದಾಧಿಕಾರಿಗಳು, ರಾಜ್ಯ ಸಮಿತಿ ಸದಸ್ಯೆಯರು, ಎಲ್ಲಾ ಜಿಲ್ಲೆಗಳ ಅಧ್ಯಕ್ಷೆ-ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಸ್ವಾಗತಿಸಿರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News