ಗಾಳಿ, ಮಳೆ| ಬಂಟ್ವಾಳ ತಾಲೂಕಿನ ವಿವಿಧೆಡೆ ಅಪಾರ ಹಾನಿ
ಬಂಟ್ವಾಳ : ಕೆಲವು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ತಾಲೂಕಿನ ವಿವಿಧೆಡೆ ಮಳೆ ಹಾನಿ ಸಂಭವಿಸಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಶುಕ್ರವಾರ ಸುರಿದ ಮಳೆಗೆ ಹಲವು ಕಡೆ ಮರ ಹಾಗೂ ವಿದ್ಯುತ್ ಕಂಬಗಳು ಮುರಿದು ಬಿದ್ದು ಹಾನಿಯಾಗಿದೆ.
ಪುದು ಗ್ರಾಮದ ಮಾರಿಪಳ್ಳ ನಿವಾಸಿ ಮೊಯ್ದಿನ್ ಬಿನ್ ಎಫ್.ಎಚ್. ಇಸ್ಮಾಯಿಲ್, ಹಾಜಿರಾ ಕೋಂ ಇಬ್ರಾಹಿಂ, ಚಂದ್ರಕಲಾ ಕೋಂ ಶೇಖರ್ ಪೂಂಜಾ, ಹಸನಬ್ಬ ಬಿನ್ ಅಬೂಬಕ್ಕರ್, ಜುಮಾದಿ ಗುಡ್ಡೆ ನಿವಾಸಿ ಸೈನಾಝ್ ಕೋಂ ಸಲೀಂ ರವರ ಮನೆಯ ಹಂಚುಗಳಿಗೆ ಹಾನಿಯಾಗಿದೆ.
ಮಾಣಿ ಗ್ರಾಮದ ಸೂರಿಕುಮೇರು ನಿವಾಸಿ ಚೆನ್ನಮ್ಮ ಎಂಬುವವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿ ರುತ್ತದೆ. ತುಂಬೆ ಗ್ರಾಮದ ಸಾರಮ್ಮ ಎಂಬವರ ಮನೆಗೆ ಪಕ್ಕದ ಮನೆಯ ಶೀಟ್ ಬಿದ್ದು ಹಂಚು ಪುಡಿಯಾಗಿ, ರಿಯಾಝ್ ಎಂಬವರಿಗೆ ಗಾಯವಾಗಿದೆ, ನರಿಕೊಂಬು ಗ್ರಾಮದ ಮಿತ್ತಿಲಕೋಡಿ ನಿವಾಸಿ ನಾರಾಯಣ ಬಿನ್ ಈಶ್ವರ ಸಪಲ್ಯ ರವರ ವಾಸ್ತವ್ಯದ ಮನೆ ಮೇಲೆ ಮಾವಿನ ಮರ ಮುರಿದು ಬಿದ್ದು ಹಾನಿಯಾಗಿರುತ್ತದೆ. ಬಾಳ್ತಿಲ ಗ್ರಾಮದ ದಾಸಕೋಡಿ ನಿವಾಸಿ ದಾಮೋದರ ಪೂಜಾರಿ ಬಿನ್ ಪಕೀರ ಪೂಜಾರಿ ರವರ ವಾಸ್ತವ್ಯದ ಮನೆ ಮೇಲೆ ಮರ ಮುರಿದು ಬಿದ್ದು ಭಾಗಶಃ ಹಾನಿಯಾಗಿರುತ್ತದೆ.