ಸುರತ್ಕಲ್ನಲ್ಲಿ ಭಾರೀ ಗಾಳಿ ಸಹಿತ ಮಳೆ; ಕಾರುಣ್ಯ ವಿದ್ಯಾಲಯದ ಹೆಂಚುಗಳು ಬಿದ್ದು ಸಹಾಯಕಿಗೆ ಗಾಯ
ಸುರತ್ಕಲ್: ಕರಾವಳಿಯಾದ್ಯಂತ ಭಾರೀ ಗಾಳಿ ಸಹಿತ ಮಳೆಯಾಗಿದ್ದು, ಸುರತ್ಕಲ್ ಹೋಬಳಿಯ ಕಾಟಿಪಳ್ಳ ಗ್ರಾಮದಲ್ಲಿ ಅಪಾರ ಹಾನಿಯಾಗಿರುವ ಘಟನೆ ಶುಕ್ರವಾರ ಸಂಜೆ ವರದಿಯಗಿದೆ.
ಭಾರೀ ಗಾಳಿ ಸಹಿತ ಸುರಿದ ಮಳೆಗೆ ಕಾಟಿಪಳ್ಳ ಗ್ರಾಮದ 24 ಮನೆಗಳ ಹೆಂಚುಗಳು ಹಾಗೂ ಮೇಲ್ಚಾವಣಿಗಳು ಹಾರಿ ಹೋಗಿದ್ದು ಅಪಾರ ಹಾನಿ ಸಂಭವಿಸಿದೆ. ಇಲ್ಲಿನ ಕಾರುಣ್ಯ ವಿದ್ಯಾಲಯ ಶಾಲೆಯ ಹೆಂಚುಗಳು ಬಿದ್ದು ಓರ್ವ ಸಹಾಯಕಿ ಗಾಯಗೊಂಡಿದ್ದಾರೆ. ಅಲ್ಲದೆ, ಆಝಾದ್ ನಗರದಲ್ಲಿ ಸುಮಾರು 7 ವಿದ್ಯುತ್ ಕಂಬಗಳು ಧರೆಶಾಯಿಯಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಸುಮಾರು 3.30ರ ಸುಮಾರಿಗೆ ಬೀಸಿದ ಭಾರೀ ಗಾಳಿಗೆ ಕಾರುಣ್ಯ ವಿದ್ಯಾಲಯದ ಸುತ್ತಿನ ಬೃಹತ್ ಗಾತ್ರದ ಮರಗಳು ಬಿದ್ದಿದ್ದು, ಶಾಲೆಯ ಕಾಂಪೌಂಡ್ ಗೋಡೆ ಸಂಪೂರ್ಣ ಜಖಂಗೊಂಡಿದೆ. ಹೆಂಚು ಬಿದ್ದು ಶಾಲೆಯಲ್ಲಿದ್ದ ಸಹಾಯಕಿ ಮಾರ್ಗರೇಟ್ (60) ಎಂಬವರಿಗೆ ತಲೆಗೆ ಗಾಯವಾಗಿದೆ. ತಕ್ಷಣ ಶಾಲೆಯ ಅಧ್ಯಾಪಕರು ಸ್ಥಳೀಯರ ಸಹಕಾರ ಪಡೆದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಸೂಚನೆಯ ಮೇರೆಗೆ ಕಾಂಗ್ರೆಸ್ ನಿಯೋಗವು ಸ್ಥಳ ಪರಿಶೀಲನೆ ನಡೆಸಿ, ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ನಿಯೋಗದಲ್ಲಿ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಕಿಶೋರ್ ಶೆಟ್ಟಿ, ಪ್ರತಿಭಾ ಕೆಪಿಸಿಸಿ ಕೋ ಆಡಿನೇಟರ್, ಕೆಪಿಸಿಸಿ ಸದಸ್ಯ ಸದಾಶಿವ ಶೆಟ್ಟಿ, ಸುರತ್ಕಲ್ ಬ್ಲಾಕ್ ಉಪಾಧ್ಯಕ್ಷ ಬಶೀರ್ ಬೈಕಂಪಾಡಿ, ಆನಂದ ಅಮೀನ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಳಾಯಿ, ಕಿಸಾನ್ ಘಟಕದ ಅಧ್ಯಕ್ಷ ರಾಜೇಶ್ ಶೆಟ್ಟಿ ಪಡ್ರೆ, ಮೀನುಗಾರಿಕಾ ಘಟಕಾಧ್ಯಕ್ಷ ಶ್ರೀಕಾಂತ್ ಸಾಲ್ಯಾನ್, ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ರಾಘವೇಂದ್ರ ರಾವ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಜೈಸನ್ ಡಿಸೋಜಾ, ಹಂಝಾ ಸುರತ್ಕಲ್, ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಕಮಾಲ್, ಮಾಜಿ ಕಾರ್ಪೊರೇಟರ್ ಅಯಾಝ್ ಚೊಕ್ಕಬೆಟ್ಟು ಪದಾಧಿಕಾರಿಗಳಾದ ಕಬೀರ್, ಟಿ. ಮೊಯ್ದೀನ್, ಸಲ್ಮಾನ್ ಹಾಗೂ ಇನ್ನಿತರರು ಇದ್ದರು.