ಮೀನುಗಾರಿಕಾ ವಿವಿ ಆರಂಭಕ್ಕೆ ಪೂರಕ ಪ್ರಯತ್ನ: ಸಚಿವ ಮಂಕಾಳ ವೈದ್ಯ

Update: 2024-07-27 12:49 GMT

ಮಂಗಳೂರು: ಮಂಗಳೂರಿನಲ್ಲಿರುವ ದೇಶದ ಪ್ರಥಮ ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾನಿಲಯವಾಗಿಸುವ ನಿಟ್ಟಿನಲ್ಲಿ ಪೂರಕ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಮೀನುಗಾರಿಕಾ, ಒಲನಾಡು ಸಾರಿಗೆ ಮತ್ತು ಬಂದರು ಸಚಿವ ಮಂಕಾಳ ಎಸ್. ವೈದ್ಯ ಹೇಳಿದ್ದಾರೆ.

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ, ಮೀನುಗಾರಿಕೆ ಇಲಾಖೆ, ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ, ಹಳೇ ವಿದ್ಯಾರ್ಥಿಗಳ ಸಂಘ, ಯಶಸ್ವೀ ಕಡಲ ಉತ್ಪನ್ನಗಳ ಕಂಪನಿ ಹಾಗೂ ಪಿಲ್ಲೈ ಅಕ್ವಾಕಲ್ಚರ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಎಕ್ಕೂರಿನ ಮೀನುಗಾರಿಕೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ: 2024 ಮತ್ತು ಬಿಗ್ ಫಿಶ್: 2.0‘ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರಿನ ಮೀನುಗಾರಿಕಾ ಕಾಲೇಜು ವಿಶ್ವವಿದ್ಯಾನಿಲಯದ ಎಲ್ಲಾ ಅರ್ಹತೆಯನ್ನು ಹೊಂದಿದೆ. 65 ಎಕರೆ ಜಾಗ ವನ್ನೂ ಹೊಂದಿದೆ. ಬೇರೆ ರಾಜ್ಯಗಳಿಗೆ ನಮ್ಮ ಕಾಲೇಜು ಮಾದರಿಯಾಗಿದ್ದು, ಇಲ್ಲಿ ಕಲಿತವರು ತಮ್ಮ ರಾಜ್ಯಗಳಿಗೆ ತೆರಳಿ ಹೊಸ ಕಾಲೇಜು, ವಿಶ್ವವಿದ್ಯಾಲಯಗಳನ್ನು ರಚಿಸಲು ಸಾಧ್ಯವಾಗಿದ್ದರೂ ರಾಜ್ಯದಲ್ಲಿ ಈ ಪ್ರಯತ್ನದಲ್ಲಿ ನಾವು ಹಿಂದುಳಿ ದಿದ್ದೇವೆ. ಒಂದು ಕಾಲೇಜಿನಿಂದ ವಿಶ್ವವಿದ್ಯಾಲಯವನ್ನಾಗಿಸಲು ಸಾಧ್ಯವಿಲ್ಲ ಎಂಬ ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ ಮಂಕಿಯಲ್ಲಿ ತರಬೇತಿ ಕೇಂದ್ರ, ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೀನು ಮರಿ ಉತ್ಪಾದನಾ ಕೇಂದ್ರವನ್ನು ಮೇಲ್ದರ್ಜೆಗೇರಿಸುವುದು ಹಾಗೂ ಮೀನುಗಾರಿಕಾ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿ ಸುವ ಮೂಲಕ ನಾಲ್ಕು ಶಾಖೆಗಳನ್ನು ಆರಂಭಿಸಲು ಕ್ರಮ ವಹಿಸಲಾಗಿದೆ. ಮಂಕಿಯಲ್ಲಿ ತರಬೇತಿ ಕೇಂದ್ರ ಸ್ಥಾಪನೆಗೆ ಸಂಬಂಧಿಸಿ ಈಗಾಗಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಅವರು ಹೇಳಿದರು.

ಮೀನುಗಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈಗಾಗಲೇ 1.50 ಲಕ್ಷ ಲೀಟರ್ ಡೀಸೆಲ್ ವಿತರಣೆಯನ್ನು 2 ಲಕ್ಷ ಲೀಟರ್‌ಗೆ ಏರಿಕೆ ಮಾಡಲಾಗಿದೆ. ಹಾಗಾಗಿ ಕಳೆದ ಸಾಲಿನ ಮೀನುಗಾರಿಕಾ ಅವಧಿಯಲ್ಲಿ ಡೀಸೆಲ್ ಬಂದಿಲ್ಲ ಎಂಬ ದೂರು ಮೂರು ಜಿಲ್ಲೆಗಳಿಂದಲೂ ಬಂದಿಲ್ಲ. ಈ ಸಬ್ಸಿಡಿಗಾಗಿ ಸರಕಾರ ೨೮೫ ಕೋಟಿರೂ. ವೆಚ್ಚ ಮಾಡುತ್ತಿದೆ ಎಂದು ಹೇಳಿದ ಸಚಿವರು, ಸೀಮೆಎಣ್ಣೆ ಸಮಸ್ಯೆ ಆಗದಂತೆಯೂ ಕ್ರಮ ವಹಿಸಲಾಗಿದೆ ಎಂದರು.

ಮೀನುಗಾರ ಮಹಿಳೆಯರಿಗೆ 3 ಲಕ್ಷ ರೂ.ವರೆಗಿನ ಬಡ್ಡಿ ಸಾಲಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಆಸ್ತಿ ಬೇಕೆನ್ನುವ ತಗಾ ದೆಯ ಕುರಿತು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಉಡುಪಿಯಲ್ಲಿ ಮಹಾಲಕ್ಷ್ಮಿ ಸೊಸೈಟಿ ಸಾಲ ಕೊಡಲು ಮುಂದೆ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಲ್ಲಿ ಹಿಂದಿನ ನಾಲ್ಕು ವರ್ಷಗಳ ಬಾಕಿ ಪರಿಹಾರವನ್ನು ಒದಗಿಸಲಾಗಿದೆ. ಬೋಟ್ ದುರಂತದ ಸಂದರ್ಭದಲ್ಲಿಯೂ ಪರಿಹಾರ ನೀಡಲಾಗುತ್ತಿದ್ದು, ಅವಘಡಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡ ಮೀನುಗಾರರಿಗೆ ೨೪ ಗಂಟೆಯಲ್ಲಿ ೮ ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಲಾ ಗಿದೆ. ಅವಘಡದಿಂದ ಅಂಗಾಂಗ ಕಳೆದುಕೊಂಡು ಮತ್ತೆ ಮೀನುಗಾರಿಕೆ ನಡೆಸಲಾಗದ ಮೀನುಗಾರರಿಗೆ ವೈದ್ಯಕೀಯ ವೆಚ್ಚ ಸಹಿತ ನಾಲ್ಕು ಲಕ್ಷ ರೂ. ಪರಿಹಾರ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಬೈಂದೂರಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಸೀಫುಡ್ ಪಾರ್ಕ್ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಬೆಂಗಳೂರಿನ ಹೆಬ್ಬಾಳದ ಪಶು ಸಂಗೋಪನಾ ಇಲಾಖೆಯಿಂದ 3 ಎಕರೆ ಜಮೀನು ಪಡೆದು 50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಹಾಗೂ 20 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಚಿವ ಮಂಕಾಳ ವೈದ್ಯ ವಿವರಿಸಿದರು.

ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದರು. ಶಾಸಕರಾದ ಡಾ.ಭರತ್ ಶೆಟ್ಟಿ ವೈ, ಐವನ್ ಡಿಸೋಜ, ಮೇಯರ್ ಸುಧೀರ್ ಶೆಟ್ಟಿ, ಸ್ಥಳೀ ಕಾರ್ಪೊರೇಟರ್ ಭರತ್ ಕುಮಾರ್, ಬೀದರ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ, ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೇರ್, ಕೊಚ್ಚಿನ್ ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿವಿ ಕುಲಸಚಿವ ಡಾ.ದಿನೇಶ್ ಕೈಲ್ಲಿ, ಯಶಸ್ವಿ ಕಡಲ ಉತ್ಪನ್ನಗಳ ಕಂಪನಿ ಆಡಳಿತ ಪಾಲುದಾರ ಉದಯ ಸಾಲಿಯಾನ್, ಮಿನುಗಾರಿಕೆ ಮಹಾ ವಿದ್ಯಾಲಯದ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಮೇಶ್ ಎಂ.ಆರ್. ಮುಖ್ಯ ಅತಿಥಿಗಳಾಗಿದ್ದರು.

ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಚ್.ಎನ್.ಆಂಜನೇಯಪ್ಪ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ಶಿವಕುಮಾರ್ ಮಗದ ಪ್ರಾಸ್ತಾವಿಕವಾಗಿ ಮಾತನಾಡಿದರು.

ಆಳ ಸಮುದ್ರ ಮೀನುಗಾರಿಕೆ ರಜೆಯನ್ನು 60 ದಿನಗಳಿಂದ 90ಕ್ಕೆ ವಿಸ್ತರಣೆ, ಬೋಟಿನಲ್ಲಿ ಬಳಸಬೇಕಾದ ಇಂಜಿನ್ ಸಾಮರ್ಥ್ಯ, ಬೆಳಕು ಮೀನುಗಾರಿಕೆ ಮತ್ತು ಬುಲ್ ಟ್ರಾಲಿಂಗ್ ನಿಷೇಧ ಸಹಿತ ಪ್ರಮುಖ ವಿಷಯಗಳಿಗೆ ಸಂಬಂಧಿಸಿ ದೇಶಕ್ಕೆ ಏಕರೂಪ ಕಾನೂನಿನ ಅಗತ್ಯವಿದೆ. ಈ ವಿಷಯದಲ್ಲಿ ರಾಜ್ಯಕ್ಕೆ ಪ್ರತ್ಯೇಕ ಕಾನೂನು ಆದಾಗ ಸಮಸ್ಯೆಗಳನ್ನು ಸರಿಪಡಿಸಲು ಅಸಾಧ್ಯ ಎಂಬುದು ನನ್ನ ಬಲವಾದ ನಿಲುವಾಗಿದ್ದು, ರಾಜ್ಯಕ್ಕೆ ಸೀಮಿತವಾದ ನಿಯಮಗಳಿಗೆ ನನ್ನ ವಿರೋಧವಿದೆ. ಗುಜರಾತ್ ಹೊರತುಪಡಿಸಿ ಕರ್ನಾಟಕ 320 ಕಿ.ಮೀ. ಉದ್ದದ ಕಡಲನ್ನು ಹೊಂದಿರುವುದರಿಂದ ದೇಶದಲ್ಲಿ ಏಕರೂಪದ ಕಾನೂನು ಆದಾಗ ಮಾತ್ರವೇ ಮೀನುಗಾರರ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ರಾಜ್ಯ ಮೀನುಗಾರಿಕೆ, ಒಳನಾಡು ಸಾರಿಗೆ ಮತ್ತು ಬಂದು ಸಚಿವ ಮಂಕಾಳ ಎಸ್.ವೈದ್ಯ ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News