ಮದ್ರಸಗಳಿಗೆ ಧನಸಹಾಯ ಸ್ಥಗಿತಗೊಳಿಸಲು ಸೂಚಿಸಿದ ಆಯೋಗ: ಮುಸ್ಲಿಂ ಜಮಾಅತ್ ಖಂಡನೆ

Update: 2024-10-14 13:55 GMT

ಮಂಗಳೂರು, ಅ.14: ಮದ್ರಸಗಳನ್ನು ಮುಚ್ಚಿಸುವ ಮತ್ತು ಮದ್ರಸ ಮಂಡಳಿಗಳಿಗೆ ಧನಸಹಾಯ ನೀಡುವುದನ್ನು ನಿಲ್ಲಿಸು ವಂತೆ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಶಿಫಾರಸು ಮಾಡಿರುವುದು ಸಂಘ ಪರಿವಾರದ ಸೈದ್ಧಾಂತಿಕ ಯೋಜನೆಗಳನ್ನು ಕಾರ್ಯಗತಗೊಳಿಸುವ ಮತ್ತು ಮುಸ್ಲಿಮರನ್ನು ಗುರಿಯಾಗಿಸುವ ದೊಡ್ಡ ಕಾರ್ಯಸೂಚಿಯ ಭಾಗವಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಎನ್‌ಸಿಪಿಸಿಆರ್ ಶಿಫಾರಸು ಕರ್ನಾಟಕದ ಮದ್ರಸಾಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ ರಾಜ್ಯ ಸರಕಾರವು ಇಲ್ಲಿನ ಮದ್ರಸಗಳಿಗೆ ಯಾವುದೇ ಹಣಕಾಸಿನ ನೆರವು ನೀಡುತ್ತಿಲ್ಲ. ಕರ್ನಾಟಕದಲ್ಲಿ ಮದ್ರಸಾಗಳೆಂದರೆ ಬೆಳಿಗ್ಗೆ ಮತ್ತು ಸಂಜೆ ಒಂದೆರಡು ಗಂಟೆಗಳ ಕಾಲ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವ ಕೇಂದ್ರಗಳಾಗಿವೆ. ಮದ್ರಸಾದ ಅವಧಿಯ ಬಳಿಕ ಮಕ್ಕಳು ಶಾಲೆಗೆ ಹೋಗಿ ಶಿಕ್ಷಣ ಪಡೆಯುತ್ತಾರೆ. ಹತ್ತನೇ ತರಗತಿಯ ಬಳಿಕ ವಸತಿ ಸಹಿತ ಧಾರ್ಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು, ಅಲ್ಲೇ ಪಿಯುಸಿ, ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಮೂಲಕ ಧಾರ್ಮಿಕ ಶಿಕ್ಷಣ ಕೇಂದ್ರ ಗಳು ಸಮನ್ವಯ ಶಿಕ್ಷಣ ಕೇಂದ್ರಗಳಾಗಿ ಗುರುತಿಸಿಕೊಂಡಿವೆ. ಎನ್‌ಸಿಪಿಸಿಆರ್ ಶಿಫಾರಸು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಅದನ್ನು ವಾಪಸ್ ಪಡೆಯಬೇಕು. ಈ ಶಿಫಾರಸನ್ನು ರಾಜ್ಯ ಸರಕಾರಗಳು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡರೆ ಉತ್ತರ ಭಾರತದ ಮದ್ರಸಾಗಳಿಗೆ ದೊಡ್ಡ ಮಟ್ಟಿನ ಪರಿಣಾಮ ಬೀರಬಹುದು. ಮದ್ರಸ ಶಿಕ್ಷಣದ ಬಗ್ಗೆ ತಪ್ಪು ವ್ಯಾಖ್ಯಾನದಿಂದಾಗಿ ಮಕ್ಕಳು ಶಿಕ್ಷಣದಿಂದ ಅವಕಾಶ ವಂಚಿತರಾಗುವ ಹಾಗೂ ತಾರತಮ್ಯದ ಹೊಸ ಪದರಗಳು ಸೃಷ್ಟಿ ಯಾಗುವ ಸಾಧ್ಯತೆ ಇದೆಯೆಂದು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News