ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳ ಕೇಂದ್ರ ಉದ್ಘಾಟನೆ
ಕೊಣಾಜೆ: ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಮಾರ್ಗದರ್ಶನದಲ್ಲಿ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದಲ್ಲಿ ಭಾರತೀಯ ಪಾರಂಪರಿಕ ಜ್ಞಾನ ವ್ಯವಸ್ಥೆಗಳ ಕೇಂದ್ರವನ್ನು ಬುಧವಾರ ಹೊಸನಗರ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಭಾರತೀಯ ಜ್ಞಾನ ಪರಂಪರೆ ವಿಶ್ವದಲ್ಲೆಡೆ ಹರಡಿದ್ದು ಅದು ಹೊಟ್ಟೆ ತುಂಬಿಸುವ ವಿದ್ಯೆ ಅಲ್ಲ ಅದು ಜ್ಞಾನದ ಹೃದಯವಾಗಿದೆ. ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳ ಕೇಂದ್ರ ವನ್ನು ಸ್ಥಾಪಿಸುವುದರ ಮೂಲಕ ಭಾರತೀಯ ಜ್ಞಾನವನ್ನು ಉಳಿಸುವ, ಅಧ್ಯಯನ ಮತ್ತು ಪ್ರಾಯೋಗಿಕವಾಗಿ ಸಮಕಾಲೀನ ಸಮಸ್ಯೆಗಳನ್ನು ಪರಿಹರಿಸಲು ಮಹತ್ವದ ಹೆಜ್ಜೆಯನ್ನಿರಿಸಲಾಗಿದೆ ಎಂದು ಹೇಳಿದರು.
ಉಪಕುಲಾಧಿಪತಿ ಡಾ. ಎಮ್. ಶಾಂತಾರಾಮ್ ಶೆಟ್ಟಿ ಮುಖ್ಯ ಭಾಷಣ ಮಾಡಿ 2020ರಲ್ಲಿ ಎನ್ ಇ ಪಿ ಜಾರಿಗೆ ಬಂತು. ನೂತನ ಶೈಕ್ಷಣಿಕ ವಿಧಾನದಿಂದ ಒಬ್ಬ ಉತ್ತಮ ಪ್ರಜೆಯನ್ನು ಸೃಷ್ಟಿಸುವುದೇ ಮೊದಲ ಆದ್ಯತೆ. ವೈದ್ಯಕೀಯ ಶಾಸ್ತ್ರದಲ್ಲಿ ಚರಕ, ಶುಶ್ರುತ, ಗಣಿತ ಶಾಸ್ತ್ರದ ದಿಕ್ಕನ್ನೇ ಬದಲಿಸಿದ ಅರ್ಯಭಟ, ಪತಂಜಲಿ, ಅರ್ಥಶಾಸ್ತ್ರದ ಚಾಣಕ್ಯ, ನಾಗಾರ್ಜುನ, ಆಚಾರ್ಯ ಕಪಿಲ, ಭಾಸ್ಕರ, ಕಣ್ವ ಮಹರ್ಷಿ ಅವರ ಸಂಶೋಧನೆ ಎಲ್ಲವೂ ಪ್ರಪಂಚಕ್ಕೆ ಪುರಾತನ ಜ್ಞಾನವನ್ನು ಸಾರಿದೆ. ಪುರಾತನ ನಳಂದ, ಮೊಹೆಂಜಾದಾರೋ, ತಕ್ಷಶಿಲ ವಿವಿಗಳು ನಮ್ಮ ಜ್ಞಾನ ಸಂಪತ್ತು. ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ವೈದ್ಯಕೀಯ, ಶಿಕ್ಷಣ ಸೇರಿದಂತೆ ಭಾರತೀಯ ಪಾರಂಪರಿಕ ಜ್ಞಾನ ಮತ್ತೆ ಸಾರುವ ಪ್ರಯತ್ನ ನಡೆಯುತ್ತಿದೆ ಎಂದರು.
ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಮ್. ಎಸ್. ಮೂಡಿತ್ತಾಯ ಸ್ವಾಗತಿಸಿದರು. ಹಣಕಾಸು ಮತ್ತು ಯೋಜನಾ ನಿರ್ದೇಶಕ ರಾಜೇಂದ್ರ, ಕುಲಸಚಿವ ಹರ್ಷ ಹಾಲಹಳ್ಳಿ ಉಪಸ್ಥಿತರಿದ್ದರು.
ಡಾ.ಸಿ.ಎಸ್.ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ಭಾರತೀಯ ಜ್ಞಾನ ಪದ್ದತಿ ಕೇಂದ್ರದ ನಿರ್ದೇಶಕ ಪ್ರೊ.ಸುಧೀರ್ ರಾಜ್ ವಂದಿಸಿದರು.