ಬೊಂದೇಲ್‌ ನ ಸರ್ವಜ್ಞ ವೃತ್ತ ಕಾಮಗಾರಿ ಅಸಮರ್ಪಕ; ಕುಂದುಕೊರತೆ ಸಭೆಯಲ್ಲಿ ಪೊಲೀಸ್ ಆಯುಕ್ತರಿಗೆ ದೂರು

Update: 2023-11-11 10:08 GMT

ಮಂಗಳೂರು, ನ. 11: ಸುಮಾರು ಏಳು ತಿಂಗಳ ಹಿಂದೆ ಉದ್ಘಾಟನೆಗೊಂಡಿರುವ ಬೊಂದೇಲ್‌ನ ಸರ್ವಜ್ಞ ವೃತ್ತ ಕಾಮಗಾರಿ ಅವೈಜ್ಞಾನಿಕವಾಗಿದೆ. 45 ಲಕ್ಷ ರೂ. ವೆಚ್ಚದಲ್ಲಿ ಮುಡಾದಿಂದ ಈ ವೃತ್ತ ನಿರ್ಮಾಣವಾಗಿದ್ದು, ಹಸಿರು ಹುಲ್ಲಿನ ಬದಲು ಪ್ಲಾಸ್ಟಿಕ್ ಹುಲ್ಲು ಬಳಸಲಾಗಿದೆ. ಕಾರಂಜಿಯೇ ಇಲ್ಲ ಎಂಬ ದೂರು ಪೊಲೀಸ್ ಆಯುಕ್ತರಿಗೆ ಸಲ್ಲಿಕೆಯಾಗಿದೆ.

ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಮಿಷನರ್ ಅನುಪಮ್ ಅಗ್ರವಾಲ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಈ ದೂರು ನೀಡಿದ ಸ್ಥಳೀಯರಾದ ಶ್ರೀನಿವಾಸ ಸಾಲ್ಯಾನ್, ಈ ಅವ್ಯವಸ್ಥೆಯನ್ನು ಸರಿಪಡಿಸಲು ಸಂಬಂಧಪಟ್ಟವರಿಗೆ ಸೂಕ್ತ ಮಾಗದರ್ಶನ ನೀಡಬೇಕೆಂದು ಆಗ್ರಹಿಸಿದರು.

ಕೋಮು ಸೂಕ್ಷ್ಮ ಪ್ರದೇಶವೆಂಬ ಹಣೆಪಟ್ಟಿ ಹೋಗಲಾಡಿಸಿ

ಉಳ್ಳಾಲದಲ್ಲಿ ಮೊಗವೀರರು ಹಾಗೂ ಮುಸ್ಲಿಂ ಬಾಂಧವರು ಹಿಂದಿನಿಂದಲೂ ಅನ್ಯೋನ್ಯದಿಂದಿದ್ದಾರೆ. ಆದರೆ ಅಲ್ಲಿ ನಡೆಯುವ ಸಣ್ಣ ಪುಟ್ಟ ಘಟನೆಗಳಿಗೆ ಕೋಮು ಬಣ್ಣ ಹಚ್ಚಿ ಆ ಪ್ರದೇಶವನ್ನು ಕೋಮು ಸೂಕ್ಷ್ಮ ಪ್ರದೇಶವೆಂದು ಪ್ರಚಾರ ಮಾಡಲಾಗುತ್ತಿದೆ. ಈ ಹಣೆಪಟ್ಟಿಯನ್ನು ಹೋಗಲಾಡಿಸಲು ಕ್ರಮ ಆಗಬೇಕು. ಮಾತ್ರವಲ್ಲದೆ, ನಮ್ಮ ಪ್ರದೇಶದಲ್ಲಿ ಸಂಭವಿಸುವ ಸಾವು ಪ್ರಕರಣಗಳಲ್ಲಿ ಹೆಚ್ಚಿನವು ಕ್ಯಾನ್ಸರ್‌ನಿಂದ ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಅಂತಹ ಸಾವಿಗೆ ಏನು ಕಾರಣ ಎಂಬ ಬಗ್ಗೆ ಪರಿಶೀಲನೆಯ ಅಗತ್ಯವಿದೆ ಎಂದು ಸಿದ್ದೀಕ್ ಎಂಬವರು ಒತ್ತಾಯಿಸಿದರು.

ವರದಕ್ಷಿಣೆ ಪ್ರಕರಣಗಳಲ್ಲಿ ಕೆಲವೊಂದು ಕ್ಷುಲ್ಲಕ ಕಾರಣಗಳಿಂದ ನಡೆದಿರುತ್ತದೆ. ಇಂತಹ ಪ್ರಕರಣಗಳಲ್ಲಿ ಪರಸ್ಪರ ಸಮಾಲೋಚನೆಗೆ ಅವಕಾಶ ನೀಡದೆ ತ್ರಿವಳಿ ತಲಾಕ್ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗುತ್ತಿದೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಸಂಶುದ್ದೀನ್ ಜೋಕಟ್ಟೆ ಆಗ್ರಹಿಸಿದರು.

ಕುಂದುಕೊರತೆಯಲ್ಲೇ ಟ್ರಾಫಿಕ್‌ ನದ್ದೇ ಅಧಿಕ ಸಮಸ್ಯೆಗಳು!

ನಗರದ ರಸ್ತೆಗಳಲ್ಲಿ ಹೊಂಡ, ಸರ್ವಿಸ್ ರಸ್ತೆಯಲ್ಲಿ ಬಸ್ಸುಗಳು ನಿಲುಗಡೆಯಾಗದೆ ಹೈವೇಯಿಂದಲೇ ಚಲಿಸುವುದು, ಬಾವುಟಗುಡ್ಡ ಬಳಿಯ ಬಸ್ ನಿಲ್ದಾಣ ಬಂದ್ ಆಗಿರುವುದು, ಅಪಾರ್ಟ್‌ಮೆಂಟ್‌ಗಳಿಂದ ಪಾರ್ಕಿಂಗ್ ಜಾಗದ ಉಲ್ಲಂಘನೆ, ಮೀನಿನ ಲಾರಿಗಳಿಂದ ಕೊಳಚೆ ನೀರು ಚೆಲ್ಲುವುದು, ಬಸ್ಸುಗಳಲ್ಲಿ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ಕಾಯ್ದಿರಿಸಿದ ಆಸನ ನೀಡಲು ಹಿಂದೇಟು, ಬಸ್ಸುಗಳ ಫುಟ್‌ಬೋರ್ಡ್‌ನಲ್ಲಿ ನೇತಾಡುವುದು ಸೇರಿದಂತೆ ಟ್ರಾಫಿಕ್‌ಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ವ್ಯಕ್ತವಾದವು.

ರಾಬರ್ಟ್ ಫ್ರಾಂಕ್ಲಿನ್ ರೇಗೋ, ಜಿ.ಕೆ. ಭಟ್, ಹನುಮಂತ ಕಾಮತ್, ಬಶೀರ್, ಚೂಡಾಮಣಿ, ಸಂಶಾದ್, ಸುಮಂತ್ ರಾವ್, ಜಯಕೃಷ್ಣನ್, ಭಗವಾನ್‌ದಾಸ್, ಪ್ರಶಾಂತ್ ಕುಮಾರ್, ವಾಲ್ಟರ್, ಎಂ.ಪಿ. ಶೆಣೈ, ರೊನಾಲ್ಡ್ ಸೆರಾವೊ, ಫೈಜಲ್, ಹರಿಪ್ರಸಾದ್, ಸುಷ್ಮಾ ಅತ್ತಾವರ ಮೊದಲಾದವರು ಸಭೆಯಲ್ಲಿ ಅಹವಾಲು ತೋಡಿಕೊಂಡರು.ಡಿಸಿಪಿಗಳಾದ ದಿನೇಶ್ ಕುಮಾರ್, ಸಿದ್ಧಾರ್ಥ್ ಗೋಯಲ್ ಉಪಸ್ಥಿತರಿದ್ದರು.


ಡ್ರಗ್ಸ್ ಹಾವಳಿ ವ್ಯಾಪಕ: ನಿರ್ದಿಷ್ಟ ಪ್ರಕರಣಗಳಿದ್ದಲ್ಲಿ ದೂರು ನೀಡಿ

ದ.ಕ. ಜಿಲ್ಲೆಯಲ್ಲಿ ಡ್ರಗ್ಸ್ ಹಾವಳಿ ಮಿತಿ ಮೀರುತ್ತಿದ್ದು, ಯುವಜನತೆ ಹಾದಿ ತಪ್ಪುತ್ತಿದ್ದಾರೆ. ಪೋಷಕರಾಗಲಿ, ಸಾರ್ವಜನಿಕರಾಗಲಿ ಈ ವ್ಯಸನಕ್ಕೆ ಒಳಗಾದವರಿಗೆ ಬುದ್ದಿವಾದ ಹೇಳಲು ಭಯ ಪಡುವಂತಾಗಿದೆ. ಡ್ರಗ್ಸ್ ಪೂರೈಕೆ ಮಾಡುವವರನ್ನು ಆಗಾಗ್ಗೆ ಪೊಲೀಸರು ಬಂಧಿಸಿರುವುದಾಗಿ, ಇಷ್ಟೊಂದು ಪ್ರಮಾಣದ ಮಾದಕ ವಸ್ತು ವಶಪಡಿಸಿಕೊಂಡಿರುವುದಾಗಿ ಹೇಳುತ್ತಾರೆ. ಆದರೆ ಮೂಲವನ್ನು ಕಂಡು ಹಿಡಿಯಲಾಗುತ್ತಿಲ್ಲ ಎಂದು ಸಿದ್ದೀಕ್ ತಲಪಾಡಿ ದೂರಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಕಮಿಷನರ್ ಅನುಪಮ್ ಅಗ್ರವಾಲ್, ಕಳೆದ 10 ದಿನಗಳಲ್ಲಿ ಡ್ರಗ್ಸ್ ಪೂರೈಕೆ, ಮಾರಾಟ ಹಾಗೂ ಸೇವನೆಗೆ ಸಂಬಂಧಿಸಿ 60ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಮುಂಬೈ, ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಿಂದ ಈ ಡ್ರಗ್ಸ್ ಪೂರೈಕೆದಾರರನ್ನು ಬಂಧಿಸಿ ತರಲಾಗುತ್ತಿದೆ. ಡ್ರಗ್ಸ್ ನಿಯಂತ್ರಣದಲ್ಲಿ ಪೊಲೀಸರ ಜತೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಆದರೆ ಪೋಷಕರು ಅಥವಾ ಸಾರ್ವಜನಿಕರಿಂದ ಈ ನಿಟ್ಟಿನಲ್ಲಿ ಹೆಚ್ಚಿನ ಬೆಂಬಲ ಸಿಗುತ್ತಿಲ್ಲ. ತಮ್ಮ ಆಸುಪಾಸಿನಲ್ಲಿ ಡ್ರಗ್ಸ್ ಸಂಬಂಧಿತ ಚಟುವಟಿಕೆ ಕಂಡಾಗ ನಮಗೆ ಮಾಹಿತಿ ನೀಡಿ ಎಂದು ಹೇಳಿದರು.

ಆ ರೀತಿ ಮಾಡಿದರೆ, ಅಂತಹವರನ್ನು ಟಾರ್ಗೆಟ್ ಮಾಡಲಾಗುತ್ತದೆ ಎಂಬ ಭಯದ ಮಾತು ಸಾರ್ವಜನಿಕರಿಂದ ವ್ಯಕ್ತವಾದಾಗ, ಅಂತಹ ಯಾವುದೇ ಭಯ ಬೇಡ. ಮಾಹಿತಿ ನೀಡುವವರ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗುವುದು ಎಂದು ಆಯುಕ್ತರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News