ಚಾಲಕನ ನಿಯಂತ್ರಣ ತಪ್ಪಿದ ಬಸ್; ಸರಣಿ ಅಪಘಾತ: ಮೂವರಿಗೆ ಗಾಯ

Update: 2024-08-29 16:27 GMT

ಮಂಗಳೂರು: ನಗರದ ಹಂಪನಕಟ್ಟೆ ಬಳಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ, ಕಾರು, ಬೈಕ್‌ಗೆ ಢಿಕ್ಕಿ ಹೊಡೆದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಇದರಿಂದ ಜಪ್ಪು ಬಪ್ಪಾಲ್‌ನ ನಿವಾಸಿಗಳಾದ ಉಸ್ಮಾನ್ ಮತ್ತವರ ಪತ್ನಿ ರಮ್ಲಾ ಹಾಗೂ ಪುತ್ರ ಮುಹಮ್ಮದ್ ನಝಲ್ ಗಾಯಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ನಗರದ ಬಲ್ಮಠ ರಸ್ತೆಯಾಗಿ ಸ್ಟೇಟ್‌ಬ್ಯಾಂಕ್ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದರ ಚಾಲಕನಿಗೆ ರಕ್ತದೊತ್ತಡದಿಂದ ತಲೆಸುತ್ತು ಬಂದ ಕಾರಣ ಬಸ್ ನಿಯಂತ್ರಣ ತಪ್ಪಿತು ಎನ್ನಲಾಗಿದೆ. ಇದೇ ವೇಳೆ ಉಸ್ಮಾನ್ ತನ್ನ ಪತ್ನಿ ಮತ್ತು ಮಗನ ಜೊತೆ ರಿಕ್ಷಾದಲ್ಲಿ ನಗರಕ್ಕೆ ಬಂದಿದ್ದರು. ಈ ಸಂದರ್ಭ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿ ನಿಲ್ಲಿಸಲಾದ ರಿಕ್ಷಾ, ಕಾರು, ಬೈಕ್‌ಗೆ ಢಿಕ್ಕಿಯಾಗಿದೆ. ಇದರಿಂದ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ರಿಕ್ಷಾದಲ್ಲಿದ್ದ ಮೂವರಿಗೂ ಸಣ್ಣಪುಟ್ಟ ಗಾಯವಾಗಿದ್ದು, ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.

ಕದ್ರಿ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.





 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News