ತೌಡುಗೋಳಿ ಜಂಕ್ಷನ್ ನ ಅಂಗಡಿಯಿಂದ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ!

Update: 2025-03-01 13:00 IST
ತೌಡುಗೋಳಿ ಜಂಕ್ಷನ್ ನ ಅಂಗಡಿಯಿಂದ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ!
  • whatsapp icon

ಕೊಣಾಜೆ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನರಿಂಗಾನ ಗ್ರಾಮದ ತೌಡುಗೋಳಿ ಜಂಕ್ಷನ್ ನ ಅಂಗಡಿಯೊಂದರಿಂದ ನಗದು ಹಾಗೂ ಸಾಮಗ್ರಿಗಳನ್ನು ಕಳವುಗೈದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತೌಡುಗೋಳಿಯ ವಸಂತ ಎಂಬವರ ಮಾಲಕತ್ವದ ಅಂಗಡಿಗೆ ಸುಮಾರು ಎರಡೂವರೆ ಗಂಟೆ ರಾತ್ರಿ ರಾಡ್ ಸಮೇತ ನುಗ್ಗಿದ ದಢೂತಿ ದೇಹದ ಕಳ್ಳ ಹೊರಗಡೆಯ ಕಬ್ಬಿಣದ ಬಾಗಿಲಿಗೆ ಒಳಗೂ ಹೊರಗೂ ಹಾಕಿದ್ದ ಬೀಗವನ್ನು ಮುರಿದು ಒಳ ನುಗ್ಗಿದ್ದಾನೆ. ಅಲ್ಲಿಂದ ಕ್ಯಾಶ್ ಕೌಂಟರ್ ಇರುವ ಕೊಠಡಿಯ ಮರದ ಬಾಗಿಲಿನ ಬೀಗ ಮುರಿಯಲು ಸುಮಾರು ಅರ್ಧಗಂಟೆ ಒದ್ದಾಡಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.

ಸುಮಾರು ಹತ್ತು ಸಾವಿರ ರೂ. ನಗದು ಹಾಗೂ 15 ಸಾವಿರ ರೂ. ಮೌಲ್ಯದ ಸಿಗರೇಟ್ ಬಂಡಲ್, ಗುಟ್ಕಾ ಪ್ಯಾಕೇಟ್ ಗಳು, ಟೀ ಪೌಡರ್, ಆಹಾರ ಸಾಮಗ್ರಿಗಳು ಸೇರಿದಂತೆ ಸುಮಾರು ನಲ್ವತ್ತು ಸಾವಿರ ರೂ. ಮೌಲ್ಯದ ಸಾಮಗ್ರಿಗಳನ್ನು ಚೀಲವೊಂದರಲ್ಲಿ ತುಂಬಿಸಿ ಕೊಂಡೊಯ್ದಿದ್ದಾನೆ.

ಕಳ್ಳ ಅಂಗಡಿಗೆ ನುಗ್ಗಿದ ಬಳಿಕ ಹಾಕಿದ್ದ ಟಿ ಶರ್ಟ್ ಅನ್ನು ಕಳಚಿದ್ದು ಕ್ಯಾಶ್ ಕೌಂಟರ್ ಬಳಿ ಬರುತ್ತಿದ್ದಂತೆಯೇ ಮುಖಕ್ಕೆ ಟೀ ಶರ್ಟ್ ಅನ್ನು ಕಟ್ಟಿಕೊಂಡಿದ್ದಾನೆ. ಪಕ್ಕದಲ್ಲಿದ್ದ ವೈಫೈ ಸಿಸ್ಟಮ್ ಕದ್ದೊಯ್ದಿದ್ದು, ಸಿಸಿಟಿಯ ಹಾರ್ಡ್ ಡಿಸ್ಕ್ ಎಂದು ಭಾವಿಸಿ ಕದ್ದಿರುವ ಶಂಕೆ ಇದೆ. ಒಟ್ಟಿನಲ್ಲಿ ಅಂದಾಜು ಸುಮಾರು 40 ಸಾವಿರ ರೂ. ಮೌಲ್ಯದ ಸಾಮಗ್ರಿಗಳನ್ನು ಕದ್ದೊಯ್ದಿದ್ದಾನೆ

ಸ್ಥಳೀಯರ ಮಾಹಿತಿ ಪ್ರಕಾರ ಆರೋಪಿ ಇದೇ ಅಂಗಡಿಯಿಂದ ತಿಂಗಳ ಹಿಂದೆ ಸಾಮಾನು ಖರೀದಿಸಿರುವ ಹಾಗೂ ಪಕ್ಕದ ಹೊಟೇಲ್ ನಲ್ಲಿ ಚಹಾ ಕುಡಿಯಲು ಬಂದಿರುವ ಮಾಹಿತಿ ಲಭ್ಯವಾಗಿದ್ದು ಆರೋಪಿ ಕಳ್ಳತನಕ್ಕೆ ಬರುವಾಗ ಅಂಗಡಿಯಿಂದ ಸುಮಾರು 50 ಮೀಟರ್ ದೂರದಲ್ಲಿ ಕಾರನ್ನು ನಿಲ್ಲಿಸಿದ್ದಾನೆ.

ಅಂಗಡಿಯ ಮಾಲಕರು ಕೆಲವೊಮ್ಮೆ ಅಂಗಡಿ ಕೋಣೆಯಲ್ಲೇ ಮಲಗುತ್ತಿದ್ದು ಇತ್ತೀಚೆಗೆ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದ ಕಾರಣ ಪಕ್ಕದಲ್ಲೇ ಇರುವ ಮನೆಯಲ್ಲಿ ಮಲಗಿದ್ದರು.

ಕೊಣಾಜೆ ಪೊಲೀಸರು ಪರಿಶೀಲಿಸಿದ್ದು ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲೆ ದಾಖಲಾಗಿದ್ದು ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News