ಉಳ್ಳಾಲ | ಎ.26ರಂದು ವೈದ್ಯಕೀಯ ಶಿಕ್ಷಣ, ಕೈಚಳಕ ಕಾರ್ಯಾಗಾರ

ಉಳ್ಳಾಲ : ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಇದರ ಆರ್ಥೋಪೆಡಿಕ್ ವೈದ್ಯಕೀಯ ವಿಭಾಗದ ವತಿಯಿಂದ "ಅಸಾಮಿ ಇಂಡಿಯಾ, ಕೆಓಎ ಮತ್ತು ಸಿಓಎಸ್ ಮಂಗಳೂರು ಸಂಸ್ಥೆಗಳ ಆಶ್ರಯದಲ್ಲಿ" ಇಳಿಜಾರೋವ್ ಎಂಬ ಉಪಕರಣದ ಬಗ್ಗೆ ನಿರಂತರ ವೈದ್ಯಕೀಯ ಶಿಕ್ಷಣ ಮತ್ತು ಕೈಚಳಕ ಕಾರ್ಯಾಗಾರವು ಎ.26ರಂದು ಶನಿವಾರದಂದು ಕಣಚೂರು ಆಸ್ಪತ್ರೆ ಯ ಆಡಿಟೋರಿಯಂ ನಲ್ಲಿ ನಡೆಯಲಿದೆ.
ಅಪಘಾತ ಅಥವಾ ಇನ್ನಿತರ ಸಂದರ್ಭದಲ್ಲಿ ಮುರಿತಕ್ಕೊಳಗಾದ ಕಾಲಿನ ಎಲುಬುಗಳನ್ನು ಈ ಉಪಕರಣವನ್ನು ಉಪಯೋಗಿಸಿ ಹೇಗೆ ಸರಿಪಡಿಸಬಹುದು ಎಂಬ ಬಗ್ಗೆ ಈ ಕಾರ್ಯಗಾರದಲ್ಲಿ ಮಾಹಿತಿ ನೀಡಲಾಗುವುದು ಎಂದು ಆರ್ಥೋಪೆಡಿಕ್ ವಿಭಾಗದ ಮುಖ್ಯಸ್ಥ ಡಾ.ಸಲಾಉದ್ದೀನ್ ಆರಿಫ್ ಕೆ. ತಿಳಿಸಿದರು.
ತೊಕ್ಕೊಟ್ಟು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಣಚೂರ್ ವೈದ್ಯಕೀಯ ಕಾಲೇಜಿನ ಆರ್ಥೋಪೆಡಿಕ್ ವಿಭಾಗವು ಕಾಲಿನ ಕೆಳಭಾಗದ ಎಲುಬು ಮುರಿತಗಳಿಂದಾಗಿ ಉಂಟಾಗುವ ಸಮಸ್ಯೆಗಳನ್ನು ಈ ಉಪಕರಣಗಳನ್ನು ಉಪಯೋಗಿಸಿ ರೋಗಿಗೆ ಹೇಗೆ ಚಿಕಿತ್ಸೆ ನೀಡಬಹುದು, ಎಲುಬುಗಳ ಮುರಿತದಿಂದ ಶಸ್ತ್ರಚಿಕಿತ್ಸೆ ಮಾಡಿಸಿ ಗುಣಮುಖವಾಗದ ರೋಗಿಗಳಿಗೆ ಸಹ ಇದನ್ನು ಹೇಗೆ ಉಪಯೋಗಿಸಬಹುದು ಎಂಬ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕಾರ್ಯಗಾರದಲ್ಲಿ ತಿಳಿಸಲಾಗುವುದು ಎಂದರು.
ಈ ಸಮ್ಮೇಳನವು ಆಸಕ್ತಿ ಇರುವ ವೈದ್ಯಕೀಯ ತಜ್ಞರಿಗೆ ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇಳಿಜಾರೋವ್ ಫಿಕ್ಸೇಟರ್ ಉಪಯೋಗಿಸುವ ಸಮಗ್ರವಾದ ಮಾಹಿತಿಯನ್ನು ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕಡೆಗಳಿಂದ ಸಂಪನ್ಮೂಲ ವ್ಯಕ್ತಿಗಳು ಈ ಕಾರ್ಯಗಾರಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.