ಪರಿಸರ ಜಾಗೃತಿಗಾಗಿ ಪಚ್ಚನಾಡಿಯಿಂದ ಪಕ್ಷಿಕೆರೆಗೆ ಕಾಲ್ನಡಿಗೆ ಜಾಥಾಕ್ಕೆ ಚಾಲನೆ

ಮಂಗಳೂರು : ಪ್ರಕೃತಿಯು ಮನುಷ್ಯನಿಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಮನುಷ್ಯ ತನ್ನ ವೈಯಕ್ತಿಕ ತೆವಲಿಗಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾನೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಪ್ರಕೃತಿ ಸರ್ವನಾಶವಾಗಲಿದೆ. ಹಾಗಾಗಿ ಇನ್ನಾದರೂ ಪರಿಸರ ಸಂರಕ್ಷಣೆ ಮಾಡಬೇಕಿದೆ ಎಂದು ದ.ಕ. ಜಿಪಂ ಉಪ ಕಾರ್ಯದರ್ಶಿ ಹಾಗೂ ಸ್ವಚ್ಚ ಭಾರತ್ ಮಿಷನ್ (ಗ್ರಾ)ನೋಡಲ್ ಅಧಿಕಾರಿ ರಘು ಎ.ಇ ಅವರು ಹೇಳಿದರು.
ದ.ಕ. ಜಿಪಂ, ಮಂಗಳೂರು ತಾಪಂ, ಮೂಡುಶೆಡ್ಡೆ ಗ್ರಾಪಂ ಸಹಕಾರದಲ್ಲಿ ಪೇಪರ್ ಸೀಡ್ ಸಂಸ್ಥೆಯು ಪರಿಸರ ಜಾಗೃತಿ ಗಾಗಿ ಪಚ್ಚನಾಡಿಯಿಂದ ಪಕ್ಷಿಕೆರೆಯವರೆಗೆ ಆ.15ರವರೆಗೆ ಹಮ್ಮಿಕೊಂಡ ಕಾಲ್ನಡಿಗೆ ಜಾಥಾಕ್ಕೆ ಗುರುವಾರ ಪಚ್ಚನಾಡಿ ಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಬೇಕಿದೆ. ಅದಕ್ಕಾಗಿ ಕೆಲಸ ಕಾರ್ಯಗಳನ್ನು ಬದಿಗೊತ್ತುವ ಅವಶ್ಯಕತೆ ಇಲ್ಲ. ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರ ಉಳಿವಿಗೆ ಸಹಾಯಕ ವಾಗುತ್ತದೆ. ನಿಸರ್ಗದ ಜೊತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ, ಪರಿಸರದ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ನಮ್ಮ ಸಾಮಾನ್ಯ ಜ್ಞಾನ ತಾನಾಗಿಯೇ ಬೆಳೆಯುತ್ತದೆ ಎಂದು ರಘು ಎ.ಇ. ಹೇಳಿದರು.
ಮಂಗಳೂರು ತಾಪಂ ಇಒ ಮಹೇಶ್ ಕುಮಾರ್ ಹೊಳ್ಳ, ಗ್ರಾಪಂ ಅಧ್ಯಕ್ಷ ಅನಿಲ್ ಕುಮಾರ್, ಉಪಾಧ್ಯಕ್ಷ ಬಬಿತಾ ಶೆಟ್ಟಿ, ಗ್ರಾಪಂ ಪಿಡಿಒ ಜಯಪ್ರಕಾಶ್, ಸ್ವಚ್ಚ ಭಾರತ್ ಮಿಷನ್ ಜಿಲ್ಲಾ ಐಇಸಿ ಸಂಯೋಜಕ ಡೊಂಬಯ್ಯ ಇಡ್ಕಿದು, ಜೀತ್ ಮಿಲನ್ ರೋಚ್, ರಘವೀರ್ ಸೂಟರ್ ಪೇಟೆ ಉಪಸ್ಥಿತರಿದ್ದರು.
ಸ್ವಚ್ಚ ಭಾರತ್ ಮಿಷನ್ ಜಿಲ್ಲಾ ಎಚ್ಆರ್ಡಿ ಸಂಯೋಜಕ ನವೀನ್ ಕಾರ್ಯಕ್ರಮ ನಿರೂಪಿಸಿದರು.