ಜಾಮ್ ನಗರ್ ರಾಜವಂಶದ ಉತ್ತರಾಧಿಕಾರಿಯಾಗಿ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ನೇಮಕ
ಅಹಮದಾಬಾದ್: ಗುಜರಾತ್ ರಾಜ್ಯದ ರಾಜ ವಂಶವಾದ ನವನಗರ್ ಅಥವಾ ಜಾಮ್ ನಗರ್ ನ ಉತ್ತರಾಧಿಕಾರಿಯಾಗಿ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾರನ್ನು ಘೋಷಿಸಲಾಗಿದೆ. ಈ ಸಂಗತಿಯನ್ನು ಪ್ರಕಟಣೆಯ ಮೂಲಕ ನವ್ ನಗರ್ ನ ಮಹಾರಾಜ್ ಜಾಮ್ ಸಾಹೇಬ್ ದೃಢಪಡಿಸಿದ್ದಾರೆ.
ANI ಸುದ್ದಿ ಸಂಸ್ಥೆ ಹಂಚಿಕೊಂಡಿರುವ ಪತ್ರವೊಂದರ ಪ್ರಕಾರ, ಅಜಯ್ ಜಡೇಜಾ ತಮ್ಮ ಉತ್ತರಾಧಿಕಾರಿಯಾಗಲು ಸಮ್ಮತಿಸಿದ್ದಾರೆ ಎಂದು ಶತ್ರುಸಲ್ಯಸಿನ್ಹಾಜೀ ದಿಗ್ವಿಜಯ್ ಸಿನ್ಹಾಜೀ ಜಡೇಜಾ ತಿಳಿಸಿದ್ದಾರೆ. ಶತ್ರುಸಲ್ಯಾಸಿನ್ಹಾಜೀ ನವ್ ನಗರ್ ನ ಜಾಮ್ ಸಾಹೇಬ್ ಆಗಿದ್ದು, ಅವರು ಅಜಯ್ ಜಡೇಜಾರ ತಂದೆಯ ಮಲ ಸೋದರರಾಗಿದ್ದಾರೆ.
ಈ ಕುರಿತು ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿರುವ ಮಹಾರಾಜ್ ಜಾಮ್ ಸಾಹೇಬ್, “ಅಜ್ಞಾತವಾಸದಲ್ಲಿದ್ದ ಪಾಂಡವರು ಗೆಲುವು ಸಾಧಿಸಿದ ದಿನವನ್ನಾಗಿ ಈ ದಸರಾವನ್ನು ಆಚರಿಸಲಾಗುತ್ತದೆ. ಈ ದಸರಾದಲ್ಲಿ ನಾನೂ ಕೂಡಾ ಸಮಾನವಾಗಿ ಸಂತಸಗೊಂಡಿದ್ದು, ನನ್ನ ದ್ವಂದ್ವಗಳಿಗೆ ಪರಿಹಾರ ಕಂಡುಕೊಂಡಿದ್ದೇನೆ. ನನ್ನ ವಾರಸುದಾರನಾಗಲು ಸಮ್ಮತಿಸಿರುವ ಅಜಯ್ ಜಡೇಜಾಗೆ ಧನ್ಯವಾದಗಳು” ಎಂದು ಹೇಳಿದ್ದಾರೆ.
“ಜಾಮ್ ನಗರ್ ನ ಜನರಿಗೆ ಸೇವೆ ಸಲ್ಲಿಸುವ ಹೊಣೆಗಾರಿಕೆಯನ್ನು ಅಜಯ್ ಜಡೇಜಾ ವಹಿಸಿಕೊಂಡಿರುವುದು ನಿಜಕ್ಕೂ ಅವರ ಪಾಲಿನ ಪುಣ್ಯವಾಗಿದೆ. ನಾನು ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ಅವರಿಗೆ ಸಲ್ಲಿಸುತ್ತೇನೆ” ಎಂದೂ ಅವರು ಹೇಳಿದ್ದಾರೆ.