ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ ಪ್ರಕರಣ | ಎಫ್ಐಆರ್ ಸೋರಿಕೆ; ಪೊಲೀಸರ ವಿರುದ್ಧ ಕ್ರಮದ ಆದೇಶವನ್ನು ಅಮಾನತುಗೊಳಿಸಿದ ಸುಪ್ರೀಂ ಕೋರ್ಟ್

ಅಣ್ಣಾ ವಿಶ್ವವಿದ್ಯಾಲಯ | PC : PTI
ಹೊಸ ದಿಲ್ಲಿ: ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್ ಸೋರಿಕೆ ಪ್ರಕರಣದಲ್ಲಿ ಅದಕ್ಕೆ ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸಬೇಕು ಹಾಗೂ ಲೋಪಕ್ಕೆ ಕಾರಣರಾದವರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಬೇಕು ಎಂದು ತಮಿಳುನಾಡು ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಸೂಚನೆಯನ್ನು ಸೋಮವಾರ ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದೆ.
ನ್ಯಾ. ಬಿ.ವಿ.ನಾಗರತ್ನ ಹಾಗೂ ನ್ಯಾ. ಸತೀಶ್ ಚಂದ್ರ ಶರ್ಮ ಅವರನ್ನೊಳಗೊಂಡ ನ್ಯಾಯಪೀಠವು, ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಹಾಗೂ ಸಿದ್ಧಾರ್ಥ್ ಲೂಥ್ರಾರ ವಾದಗಳನ್ನು ಆಲಿಸಿದ ನಂತರ, ಪೊಲೀಸ್ ಅಧಿಕಾರಿಗಳ ವಿರುದ್ಧ ಮದ್ರಾಸ್ ಹೈಕೋರ್ಟ್ ನೀಡಿದ್ದ ಪ್ರತಿಕೂಲ ಹೇಳಿಕೆಗಳಿಗೆ ತಡೆ ನೀಡಿತು.
ವಿಶೇಷ ತನಿಖಾ ತಂಡವನ್ನು ರಚಿಸಿದರೆ ರಾಜ್ಯ ಸರಕಾರಕ್ಕೇನಾದರೂ ನೋವಾಗಲಿದೆಯೆ ಎಂದು ವಕೀಲ ರೋಹ್ಟಗಿಯವರನ್ನು ನ್ಯಾಯಪೀಠ ಪ್ರಶ್ನಿಸಿತು. ನಾವು ಸಂತ್ರಸ್ತೆಯನ್ನು ಬೆಂಬಲಿಸಿದರೂ, ಪೊಲೀಸ್ ಅಧಿಕಾರಿಗಳ ವಿರುದ್ಧ ಆದೇಶದಲ್ಲಿ ನೀಡಲಾಗಿರುವ ಹೇಳಿಕೆಗಳಿಗೆ ತಡೆ ನೀಡಬೇಕು ಎಂದು ಅವರು ಮನವಿ ಮಾಡಿದರು.
“ವಿಶೇಷ ತನಿಖಾ ತಂಡದ ರಚನೆಯಿಂದ ನನಗೇನೂ ನೋವಾಗಿಲ್ಲ. ನನಗೆ ರಕ್ಷಣೆಯಿಂದ ನೋವಾಗಿಲ್ಲ” ಎಂದು ರೋಹ್ಟಗಿ ಹೇಳಿದರು.
ಸದ್ಯ ಯಾರು ಬೇಕಾದರೂ ಎಫ್ಐಆರ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಅವರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.