ಕೇಂದ್ರ ಸರಕಾರ ಸಂವಿಧಾನವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ : ಪ್ರಿಯಾಂಕಾ ಗಾಂಧಿ

ಪ್ರಿಯಾಂಕ ಗಾಂಧಿ
ವಯನಾಡು : ಕೇಂದ್ರ ಸರ್ಕಾರ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
ವಯನಾಡಿನ ಮಾನಂತವಾಡಿಯಲ್ಲಿ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಮಾತನಾಡಿದ ಸಂಸದೆ ಪ್ರಿಯಾಂಕಾ ಗಾಂಧಿ, ಇಂದು ನಾವು ನಡೆಸುತ್ತಿರುವ ಹೋರಾಟ ರಾಜಕೀಯ ಮತ್ತು ಸಿದ್ಧಾಂತಕ್ಕಾಗಿ ಮಾತ್ರ ಇರುವ ಹೋರಾಟವಲ್ಲ, ಬದಲಾಗಿ ಭಾರತದ ಮೂಲಸತ್ವವನ್ನು ರಕ್ಷಿಸಲು, ನಮ್ಮ ರಾಷ್ಟ್ರವನ್ನು ರಕ್ಷಿಸುವ ಹೋರಾಟವಾಗಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ವಯನಾಡು ಭೂಕುಸಿತದ ಸಂತ್ರಸ್ತರು ವಸತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಇನ್ನು ಕೂಡ ಪರಿಹಾರ ಸಿಕ್ಕಿಲ್ಲ. ವಯನಾಡಿನಲ್ಲಿ ಮಾನವ-ಪ್ರಾಣಿ ಸಂಘರ್ಷದ ಹಿನ್ನೆಲೆ ಪರಿಣಾಮಕಾರಿ ರಕ್ಷಣಾ ಕ್ರಮಗಳಿಗೆ ಸಾಕಷ್ಟು ಹಣಕಾಸು ಅತ್ಯಗತ್ಯವಾಗಿರುವುದರಿಂದ ಹೆಚ್ಚಿನ ಹಣವನ್ನು ಮಂಜೂರು ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದರು.
ಮಾನವ-ಪ್ರಾಣಿ ಸಂಘರ್ಷದ ಬಗ್ಗೆ ಈಗಾಗಲೇ ಪ್ರಸ್ತಾಪಿಸಿದ್ದೇನೆ. ಮುಂದೆಯೂ ಇದನ್ನು ಮುಂದುವರಿಸುತ್ತೇನೆ. ಇದು ನಾವು ಪರಿಶೀಲಿಸಬೇಕಾದ ವಿಷಯ, ಇದು ಸಂಕೀರ್ಣವಾದ ಸಮಸ್ಯೆಯಾಗಿದೆ. ಅರಣ್ಯ ಸಿಬ್ಬಂದಿಗಳಿಗೂ ಹೆಚ್ಚಿನ ಭದ್ರತೆ ನೀಡುವಂತೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.