ಪಶ್ಚಿಮಬಂಗಾಳ: ಪ್ರವಾಹ ಪರಿಶೀಲನೆ ವೇಳೆ ಟಿಎಂಸಿ ಸಂಸದರು, ಶಾಸಕರಿದ್ದ ದೋಣಿ ಪಲ್ಟಿ

Update: 2024-09-19 05:28 GMT

Photo credit: indiatoday.in

ಪಶ್ಚಿಮಬಂಗಾಳ: ಬಿರ್ಭೂಮ್‌ನ ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಶೀಲನೆ ವೇಳೆ ಟಿಎಂಸಿ ಸಂಸದರು, ಶಾಸಕರು ಮತ್ತು ಸರಕಾರದ ಹಿರಿಯ ಅಧಿಕಾರಿಗಳಿದ್ದ ದೋಣಿ ಪಲ್ಟಿಯಾಗಿದ್ದು, ಎಲ್ಲರೂ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.

ಲಾಬ್‌ಪುರ್‌ನ ಟಿಎಂಸಿ ಶಾಸಕ ಅಭಿಜಿತ್ ಸಿಂಗ್, ಸಂಸದರಾದ ಅಸಿತ್ ಮಲ್ ಮತ್ತು ಶಮೀರುಲ್ ಇಸ್ಲಾಂ, ಬಿರ್‌ಭೂಮ್‌ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿಧನ್ ರಾಯ್ ಮತ್ತು ಇತರ ಅಧಿಕಾರಿಗಳು ಬೋಟ್‌ನಲ್ಲಿ ಬೀರ್‌ಭಮ್‌ನ ಬಲರಾಮ್‌ಪುರ ಮತ್ತು ಲ್ಯಾಬ್‌ಪುರದ ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಶೀಲನೆಗೆ ದೋಣಿಯಲ್ಲಿ ತೆರಳಿದ್ದರು. ಈ ವೇಳೆ ದೋಣಿ ಪಲ್ಟಿಯಾಗಿದೆ.

ಘಟನೆ ನಡೆದ ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಸಂಸದರು, ಶಾಸಕರು ಮತ್ತು ಅಧಿಕಾರಿಗಳನ್ನು ರಕ್ಷಿಸಿದ್ದಾರೆ.

ಭಾರೀ ಮಳೆ ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಿಸಿದ್ದು, ಈವರೆಗೆ ಇಬ್ಬರು ಮೃತಪಟ್ಟಿದ್ದಾರೆ. ಬಿರ್ಭುಮ್, ಬಂಕುರಾ, ಹೌರಾ, ಹೂಗ್ಲಿ, ಪುರ್ಬಾ ಮತ್ತು ಪಶ್ಚಿಮ ಮೇದಿನಿಪುರ್, ಪಶ್ಚಿಮ ಬರ್ಧಮಾನ್ ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಅವರ ಸಲಹೆಗಾರ ಅಲಾಪನ್ ಬಂದೋಪಾಧ್ಯಾಯ ಹೇಳಿದ್ದಾರೆ.

ಭಾರೀ ಮಳೆಯಿಂದಾಗಿ ಕಳೆದ 24 ಗಂಟೆಗಳಲ್ಲಿ ದುರ್ಗಾಪುರ ಅಣೆಕಟ್ಟಿನಿಂದ 1,33,750 ಕ್ಯೂಸೆಕ್, ಕಂಗಸಾಬತಿ ಅಣೆಕಟ್ಟಿನಿಂದ 40,000 ಕ್ಯೂಸೆಕ್, ಮೈಥಾನ್ ಅಣೆಕಟ್ಟಿನಿಂದ 2,00,000 ಕ್ಯೂಸೆಕ್ ಮತ್ತು ಪಂಚೇಟ್ ಅಣೆಕಟ್ಟಿನಿಂದ 50,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಇದರಿಂದ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News