ತಮಿಳುನಾಡು | ದಲಿತರಿಂದ ಉತ್ಸವ ಆಚರಣೆ; ಆಕ್ರೋಶಿತ ಪ್ರಬಲ ಜಾತಿಗಳಿಂದ ದೇವಾಲಯ ಧ್ವಂಸ

Update: 2024-08-18 16:16 GMT

Photo credit: thehindu.com

ವೆಲ್ಲೂರು : ದಲಿತರು ಉತ್ಸವದಲ್ಲಿ ಪಾಲ್ಗೊಂಡಿರುವುದರಿಂದ ಆಕ್ರೋಶಿತರಾದ ಪ್ರಬಲ ಜಾತಿಯ ಜನರು ದೇವಾಲಯವನ್ನೇ ಧ್ವಂಸಗೊಳಿಸಿರುವ ಘಟನೆ ಕೆ.ವಿ. ಕುಪ್ಪಂ ತಾಲೂಕಿನ ಗೆಮ್ಮನಕುಪ್ಪಂ ಗ್ರಾಮದಲ್ಲಿ ನಡೆದಿದೆ.

ಗೆಮ್ಮನಕುಪ್ಪಂ ಗ್ರಾಮದಲ್ಲಿರುವ ಕಾಳಿಯಮ್ಮನ್ ದೇವಾಲಯದ ಆದಿ ತಿಂಗಳ ಉತ್ಸವದಲ್ಲಿ ಪರಿಶಿಷ್ಟ ಜಾತಿಯ ಜನರು ಪಾಲ್ಗೊಳ್ಳಬಾರದು ಎಂದು ಪ್ರಬಲ ಜಾತಿಯ ಜನರು ತೀರ್ಮಾನ ತೆಗೆದುಕೊಂಡಿದ್ದರು. ಆದರೆ, ಅದನ್ನು ಧಿಕ್ಕರಿಸಿ ದಲಿತರು ದೇವಾಲಯದ ಉತ್ಸವದಲ್ಲಿ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.

ದೇವಾಲಯ ಧ್ವಂಸದ ಕುರಿತಂತೆ ಒಂದು ವಾರಗಳ ಬಳಿಕ ದಲಿತರು ನೀಡಿದ ದೂರಿನ ಆಧಾರದಲ್ಲಿ ಕೆ.ಪಿ. ಕುಪ್ಪಂ ಪೊಲೀಸರು ಪ್ರಬಲ ಜಾತಿಗೆ ಸೇರಿದ ವ್ಯಕ್ತಿಯೋರ್ವರ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಕಾನೂನು ಹಾಗೂ ಸುವ್ಯವಸ್ಥೆ ಸಭೆಯ ಸಂದರ್ಭ ಈ ವಿಷಯದ ಕುರಿತು ವಿಸ್ತೃತವಾಗಿ ಚರ್ಚಿಸಿದ ಬಳಿಕ ಆಗಸ್ಟ್ 14ರಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನಮ್ಮ ಸಮುದಾಯ ಹಲವು ವರ್ಷಗಳಿಂದ ಕಾಳಿಯಮ್ಮನನ್ನು ಆರಾಧಿಸಿಕೊಂಡು ಬರುತ್ತಿದೆ. ಕಾಲಕ್ರಮೇಣ ಇತರ ಜಾತಿಗಳ ಜನರು ಈ ದೇವಾಲಯದಲ್ಲಿ ಆರಾಧನೆಯಲ್ಲಿ ತೊಡಗಿದರು. ಆದರೆ, ಇತ್ತೀಚೆಗೆ ಪ್ರಬಲ ಜಾತಿಗಳು ದಲಿತರನ್ನು ತಾರತಮ್ಯದಿಂದ ನೋಡುತ್ತಿದ್ದಾರೆ ಎಂದು ದಲಿತ ಸಮುದಾಯದ ಎಸ್. ನವೀನ್ ಕುಮಾರ್ ಹೇಳಿದ್ದಾರೆ.

ತಮಿಳು ತಿಂಗಳು ಆದಿಯ ಮೂರನೇ ಶುಕ್ರವಾರವಾದ ಆಗಸ್ಟ್ 2ರಂದು ನಡೆಯುವ ಆದಿ ತಿಂಗಳ ಉತ್ಸವದಲ್ಲಿ ಪಾಲ್ಗೊಳ್ಳದಂತೆ ನಮಗೆ ಸೂಚಿಸಲಾಗಿತ್ತು. ಇದಕ್ಕೆ ಪ್ರಬಲ ಜಾತಿಗಳು ಬೆಂಬಲ ವ್ಯಕ್ತಪಡಿಸಿದ್ದರು ಎಂದು ನವೀನ್ ತಿಳಿಸಿದ್ದಾರೆ.

ಪ್ರಬಲ ಜಾತಿಗಳು ದಲಿತರನ್ನು ಹೊರಗಿಡುವ ನಿರ್ಧಾರ ತೆಗೆದುಕೊಂಡ ಬಳಿಕ ದಲಿತ ಸಮುದಾಯದ ಸದಸ್ಯರು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೆ.ವಿ. ಕುಪ್ಪಂ ಪೊಲೀಸರು ತನಿಖೆ ನಡೆಸಿದ್ದಾರೆ. ಅನಂತರ ಆಗಸ್ಟ್ 2ರಂದು ದಲಿತರು ಪ್ರಬಲ ಜಾತಿಗಳ ನಿರ್ಧಾರವನ್ನು ಧಿಕ್ಕರಿಸಿ ಕಾಳಿಯಮ್ಮನ್ ದೇವಾಲಯದಲ್ಲಿ ಪೊಂಗಲ್ ಅಡುಗೆ ಮಾಡಲು ಹಾಗೂ ಉತ್ಸವ ನಡೆಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಬಲ ಜಾತಿಯ ಜನರು ದೇವಾಲಯವನ್ನು ಬುಲ್ಡೋಜರ್ ಬಳಿಸಿ ಧ್ವಂಸಗೊಳಿಸಿದ್ದಾರೆ ಹಾಗೂ ಮೂರ್ತಿಯನ್ನು ಕೊಂಡೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News