ಜಾತಿ ಗಣತಿಯನ್ನು ಜನಗಣತಿಯೊಂದಿಗೆ ಸಂಯೋಜಿಸಿ: ಪ್ರಧಾನಿಗೆ ಸಿಎಂ ಸ್ಟಾಲಿನ್ ಮನವಿ

Update: 2023-10-21 15:58 GMT

Photo- PTI

ಚೆನೈ: ಮುಂಬರುವ ಜನಗಣತಿಯೊಂದಿಗೆ ಜಾತಿ ಗಣತಿಯನ್ನು ಸಂಯೋಜಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.

ಈ ನಿರ್ಣಾಯಕ ಜಾತಿ ಗಣತಿಯ ಫಲಿತಾಂಶ ದೇಶದ ಕೋಟ್ಯಂತರ ಅರ್ಹ ಜನರ ಬದುಕಿಗೆ ನೆರವಾಗಲಿದೆ. ಇದು ಇನ್ನಷ್ಟು ವಿಳಂಬ ಆಗಬಾರದು ಎಂದು ಅವರು ಹೇಳಿದ್ದಾರೆ.

ಅಕ್ಟೋಬರ್ 20ರಂದು ಪ್ರಧಾನಿ ಅವರಿಗೆ ಬರೆದಿರುವ ಪತ್ರದಲ್ಲಿ ಸ್ಟಾಲಿನ್, ‘‘ಈ ಜಾತಿ ಗಣತಿಯು ಅಭಿವೃದ್ಧಿಯ ಲಾಭವನ್ನು ಅತ್ಯಂತ ದುರ್ಬಲ ವರ್ಗಗಳಿಗೆ ತಲುಪಿಸುವಲ್ಲಿ ಹಾಗೂ ಹೆಚ್ಚು ಬಲಿಷ್ಠ, ಎಲ್ಲರನ್ನೂ ಒಳಗೊಂಡ ಭಾರತವನ್ನು ನಿರ್ಮಾಣ ಮಾಡುವಲ್ಲಿ ಸ್ಮರಣೀಯ ಹೆಜ್ಜೆಯಾಗಬಹುದು ಎಂಬುದರಲ್ಲಿ ನನಗೆ ಯಾವುದೇ ಸಂದೇಹ ಇಲ್ಲ’’ ಎಂದಿದ್ದಾರೆ.

ಬಿಹಾರದಂತಹ ಕೆಲವು ರಾಜ್ಯಗಳಲ್ಲಿ ಸರಕಾರಗಳು ಜಾತಿ ಜನಗಣತಿ ನಡೆಸಿವೆ. ಇನ್ನು ಕೆಲವು ರಾಜ್ಯಗಳು ಜಾತಿಗಣತಿ ನಡೆಸುವುದಾಗಿ ಘೋಷಿಸಿವೆ. ಈ ನಿರ್ದಿಷ್ಟ ರಾಜ್ಯಗಳ ಜಾತಿಗಣತಿ, ಅದರ ದತ್ತಾಂಶದ ಫಲಿತಾಂಶಗಳು ಸಮಾಜ ಹಾಗೂ ಅದರ ಅಗತ್ಯತೆಗಳನ್ನು ಪೂರೈಸುವಲ್ಲಿ ತುಂಬಾ ಉಪಯುಕ್ತ ಒಳನೋಟಗಳನ್ನು ನೀಡಲಿದೆ. ಆದರೆ ಇದು ರಾಷ್ಟ್ರ ವ್ಯಾಪಿ ದತ್ತಾಂಶದ ತುಲನೆ ಹಾಗೂ ಪರಿಷ್ಕರಣೆಯಲ್ಲಿ ಕೊರತೆಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತಾವಿತ ಜನಗಣತಿಯೊಂದಿಗೆ ಜಾತಿ ಗಣತಿಯನ್ನು ಸಂಯೋಜಿಸಿದರೆ ಮಾತ್ರವೇ ಸಮಾಜದ ಜಾತಿ ಸಂಯೋಜನೆ ಹಾಗೂ ಸಾಮಾಜಿಕ-ಆರ್ಥಿಕತೆಯ ಸೂಚಕದ ಮೇಲೆ ಅದರ ಪ್ರತಿಫಲನದ ಬಗ್ಗೆ ಸಮಗ್ರ ಹಾಗೂ ವಿಶ್ವಾಸಾರ್ಹ ದತ್ತಾಂಶವನ್ನು ಸಂಗ್ರಹಿಸಬಹುದು ಎಂದು ಅವರು ಹೇಳಿದರು.

ಕಳೆದ 90 ವರ್ಷಗಳಲ್ಲಿ ದೇಶದ ಜನಸಂಖ್ಯೆ ಹಾಗೂ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಅನೇಕ ಬದಲಾವಣೆಗೆ ಒಳಗಾಗಿವೆ. ಆದರೆ, ಹಲವು ನೀತಿಗಳ ಹೊರತಾಗಿಯು ಸಮಾಜದ ದುರ್ಬಲ ವರ್ಗ ಈಗಲೂ ಹಿಂದುಳಿದಿದೆ ಎಂದು ಸ್ಟಾಲಿನ್ ಅವರು ಪತ್ರದಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News