ಕುವೈತ್ ಅಗ್ನಿದುರಂತ‌ದ ಸಂತ್ರಸ್ತರನ್ನು ಭೇಟಿಯಾಗಲು ಕೇರಳ ಆರೋಗ್ಯ ಸಚಿವೆಗೆ ಅನುಮತಿ ನಿರಾಕರಣೆ; ಪ್ರಧಾನಿ ಮೋದಿಗೆ ಪಿಣರಾಯಿ ಪತ್ರ

Update: 2024-06-19 08:26 GMT

Photo: PTI

ತಿರುವನಂತಪುರಂ: ಸಹಕಾರ ಒಕ್ಕೂಟದ ತತ್ವವನ್ನು ಎತ್ತಿಹಿಡಿಯುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.

ಕುವೈತ್ ನಲ್ಲಿ ಸಂಭವಿಸಿದ ಅಗ್ನಿದುರಂತದ ಸಂದರ್ಭದಲ್ಲಿ ಸಂತ್ರಸ್ತರನ್ನು ಭೇಟಿ ಮಾಡಲು ಆ ದೇಶಕ್ಕೆ ತೆರಳಲು ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರಿಗೆ ಕೇಂದ್ರ ಸರ್ಕಾರ ರಾಜಕೀಯ ಅನುಮೋದನೆ ನೀಡದೇ ಇರುವ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ, ಪ್ರಧಾನಿಗೆ ಬರೆದ ಪತ್ರದಲ್ಲಿ ವಿಜಯನ್ ಈ ಅಂಶವನ್ನು ಸ್ಪಷ್ಟಪಡಿಸಿದ್ದಾರೆ.

ಯಾವುದೇ ಪಕ್ಷಪಾತದ ಧೋರಣೆ ಅನುಸರಿಸದೇ ಕೇಂದ್ರ ಸರ್ಕಾರ ರಾಜಕೀಯ ಅನುಮೋದನೆ ನೀಡಬೇಕಿತ್ತು. ರಾಜ್ಯದ ಆರೋಗ್ಯ ಸಚಿವೆ ಅಲ್ಲಿನ ಅಧಿಕಾರಿಗಳ ಜತೆಗೆ ಅಗತ್ಯ ಮಧ್ಯಸ್ಥಿಕೆ ಮಾತುಕತೆಯನ್ನು ನಡೆಸಬಹುದಿತ್ತು ಮತ್ತು ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಬಹುದಿತ್ತು ಎಂದು ವಿಜಯನ್ ಅಭಿಪ್ರಾಯಪಟ್ಟಿದ್ದಾರೆ.

ಈ ಘಟನೆ ದುರದೃಷ್ಟಕರ ಎಂದು ಬಣ್ಣಿಸಿರುವ ಅವರು, ಇಂಥ ಸಂಕಷ್ಟದ ಸಂದರ್ಭದಲ್ಲಿ ಅನಗತ್ಯ ವಿವಾದ ಸೃಷ್ಟಿಸದೇ ಈ ವಿಷಯನ್ನು ಈಗ ಪ್ರಸ್ತಾಪಿಸಲಾಗುತ್ತಿದೆ ಎಂದು ಹೇಳಿದ್ದಾರೆ. ರಾಜ್ಯ ಸಂಪುಟದ ಒಕ್ಕೊರಲ ನಿರ್ಧಾರಕ್ಕೆ ಅಗೌರವ ತೋರಲಾಗಿದೆ. ಸಹಕಾರ ಒಕ್ಕೂಟ ವ್ಯವಸ್ಥೆಯ ಚೌಕಟ್ಟಿನಲ್ಲಿ ಇದನ್ನು ಪರಿಗಣಿಸುವುದು ಅಗತ್ಯವಾಗಿತ್ತು. ಇದರ ಅನ್ವಯ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಭಿವೃದ್ಧಿ ಮತ್ತು ವಿಪತ್ತು ಸ್ಪಂದನೆ ಪ್ರಯತ್ನದಲ್ಲಿ ಸಹಭಾಗಿತ್ವವನ್ನು ಸಮಾನವಾಗಿ ವಹಿಸಬೇಕು ಎಂದು ಪ್ರತಿಪಾದಿಸಿದ್ದಾರೆ.

ತೀವ್ರತರ ಪರಿಸ್ಥಿತಿಗಳಲ್ಲಿ ರಾಜಕೀಯ ಅನುಮೋದನೆ ನೀಡಲು ರಾಜಕೀಯ ಅಥವಾ ಇತರ ಬಾಹ್ಯ ಅಂಶಗಳು ತಡೆಯಾಗಬಾರದು. ಸಂಪುಟ ಕಾರ್ಯಾಲಯದ ಮಾರ್ಗಸೂಚಿಯಂತೆ ಮನವಿ ಮಾಡಿಕೊಳ್ಳಲಾಗಿತ್ತು ಎಂದು ವಿವರಿಸಿದ್ದಾರೆ. ಈ ದುರಂತದಲ್ಲಿ ಮಡಿದ 49 ಮಂದಿಯ ಪೈಕಿ 24 ಮಂದಿ ಕೇರಳದವರು. ಈ ಹಿನ್ನೆಲೆಯಲ್ಲಿ ವಿಶೇಷ ಸಂಪುಟ ಸಭೆ ನಡೆಸಿ, ಪರಿಹಾರ ಕಾರ್ಯಗಳಿಗಾಗಿ ವೀಣಾ ಜಾರ್ಜ್ ಅವರನ್ನು ಕಳುಹಿಸಿಕೊಡಲು ನಿರ್ಧರಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News