ಹಿಮಾಚಲ ಪ್ರದೇಶ ಪ್ರವಾಸಿ ತಾಣಗಳಲ್ಲಿ ತ್ಯಾಜ್ಯ ವಿಸರ್ಜನೆ ; ಪ್ರವಾಸಿಗರ ವರ್ತನೆಯ ಕುರಿತ ಹೆಚ್ಚಿದ ಕಳವಳ

Update: 2023-12-31 14:26 GMT

Photo : ndtv

ಶಿಮ್ಲಾ: ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಗಿರಿ ನಾಡಾದ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ, ಹಲವಾರು ಪ್ರವಾಸಿ ತಾಣಗಳಲ್ಲಿ ಎಸೆದಿರುವ ತ್ಯಾಜ್ಯಗಳ ಚಿತ್ರಗಳು ಪರಿಸರದ ಮೇಲಾಗುವ ದುಷ್ಪರಿಣಾಮ ಹಾಗೂ ಪ್ರವಾಸಿಗರ ವರ್ತನೆಯ ಕುರಿತು ಕಳವಳಕ್ಕೆ ಕಾರಣವಾಗಿದೆ. ಹಲವಾರು ಪ್ರವಾಸಿ ತಾಣಗಳಲ್ಲಿ ತ್ಯಾಜ್ಯ ಎಸೆದಿರುವುದು ಕಂಡು ಬಂದಿದ್ದು, ಇದರಿಂದ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

ಅಟಲ್ ಸುರಂಗದ ಬಳಿಯಲ್ಲಿನ ಸಿಸ್ಸು ಗ್ರಾಮದಲ್ಲಿ ತ್ಯಾಜ್ಯಗಳನ್ನು ಎಸೆದಿರುವ ಚಿತ್ರವನ್ನು ಹಂಚಿಕೊಂಡಿರುವ ಕಸ್ವಾನ್, ಪ್ರವಾಸಿ ತಾಣಗಳಲ್ಲಿನ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಅವರು ಪೋಸ್ಟ್ ‍ಪ್ರವಾಸಿಗರ ಜವಾಬ್ದಾರಿಯ ಕುರಿತು ಪ್ರಶ‍್ನಿಸಿದ್ದು, “ಅಟಲ್ ಸುರಂಗವನ್ನು ಹಾದು ಹೋದ ನಂತರ ಸಿಗುವ ಸಿಸ್ಸು ಗ್ರಾಮ ಇದಾಗಿದೆ. ಮೊದಲ ಎರಡು ಗ್ರಾಮಗಳು ಸಿಸ್ಸು ಹಾಗೂ ಖೋಕ್ಸರ್. ಈಗ, ಅಟಲ್ ಸುರಂಗದ ಮೂಲಕ ಪ್ರತಿ ನಿತ್ಯ ಸಾವಿರಾರು ವಾಹನಗಳು ಪ್ರವೇಶಿಸುತ್ತಿದ್ದು, ಜನರು ತಮ್ಮ ತ್ಯಾಜ್ಯವನ್ನು ಮರಳಿ ತೆಗೆದುಕೊಂಡು ಹೋಗುವರೆ?” ಎಂದು ಪ್ರಶ್ನಿಸಿದ್ದಾರೆ.

ಈ ಪೋಸ್ಟಿಗೆ ಪ್ರತಿಕ್ರಿಯಿಸಿರುವ ನಿವೃತ್ತ ನೌಕಾಪಡೆಯ ಅಧಿಕಾರಿಯೊಬ್ಬರು, “ಇದು ಭಯಾನಕವಾಗಿದೆ. ನಾವೆಲ್ಲರೂ ಕೊಂಚ ನಾಗರಿಕ ಪ್ರಜ್ಞೆಯನ್ನು ಪ್ರದರ್ಶಿಸಬೇಕಿದೆ” ಎಂದು ಹೇಳಿದ್ದಾರೆ.

“ನಾನು ಪ್ರತಿ ಬಾರಿ ಕಣಿವೆ ಪ್ರದೇಶಗಳಲ್ಲಿ ಚಾರಣಕ್ಕೆ ಹೋದಾಗಲೂ ಪ್ರತಿ ಪ್ಲಾಸ್ಟಿಕ್ ಹಾಗೂ ಜೈವಿಕವಾಗಿ ಜೀರ್ಣವಾಗದ ತ್ಯಾಜ್ಯಗಳನ್ನು ಸಮತಟ್ಟಾದ ಪ್ರದೇಶಕ್ಕೆ ತರುವುದನ್ನು ಖಾತ್ರಿ ಪಡಿಸುತ್ತೇನೆ. ನನ್ನ ಗೆಳೆಯರೂ ಇದನ್ನು ಮಾಡುವುದನ್ನು ನಾನು ಖಾತ್ರಿಪಡಿಸುತ್ತೇನೆ. ಯಾವುದೇ ಬೆಲೆ ತೆತ್ತಾದರೂ, ನಾವು ಸುಂದರ ಹಿಮಾಲಯದ ಪರಿಸರ ವ್ಯವಸ್ಥೆಗೆ ಹಾನಿ ಮಾಡಕೂಡದು” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ನೆಲಮಟ್ಟದಿಂದ 3,100 ಮೀಟರ್ ಎತ್ತರದಲ್ಲಿರುವ ಅಟಲ್ ಸುರಂಗವು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಬದಲಾಗಿದ್ದು, ಸುರಂಗ ಮಾರ್ಗವಾಗಿ ಸಾಗುವ ದಾರಿಯಲ್ಲಿ ಗಮನಾರ್ಹ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಪೊಲೀಸರ ದತ್ತಾಂಶದ ಪ್ರಕಾರ, ಡಿಸೆಂಬರ್ 25ರಂದು 24 ಗಂಟೆಗಳ ಅವಧಿಯಲ್ಲಿ 9.02 ಕಿಮೀ ದೂರದ ಸುರಂಗವನ್ನು ದಾಖಲೆಯ 28,210 ವಾಹನಗಳು ಹಾದು ಹೋಗಿದ್ದವು. ಈ ಪೈಕಿ 14,000 ವಾಹನಗಳು ಹಿಮಾಚಲ ಪ್ರದೇಶಕ್ಕೆ ಸೇರಿದ್ದರೆ, ಉಳಿದ 13,000 ವಾಹನಗಳು ರಾಜ್ಯದ ಹೊರಗಿನಿಂದ ಬಂದಿದ್ದವು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News