ಸ್ವರ್ಣಮಂದಿರದಲ್ಲಿ ಯಾತ್ರಿಕರ ಮೇಲೆ ರಾಡ್ ದಾಳಿ; ಇಬ್ಬರು ಆರೋಪಿಗಳ ಬಂಧನ
File Photo | new indian express
ಹೊಸದಿಲ್ಲಿ: ಅಮೃತಸರದ ಸ್ವರ್ಣ ಮಂದಿರ ಸಂಕೀರ್ಣದಲ್ಲಿ ಶುಕ್ರವಾರ ದುಷ್ಕರ್ಮಿಯೊಬ್ಬ ಕಬ್ಬಿಣದ ರಾಡ್ ನಿಂದ ಯಾತ್ರಿಕರ ಮೇಲೆ ಮನಬಂದಂತೆ ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಠ ಐವರು ಗಾಯಗೊಂಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಸ್ವರ್ಣ ಮಂದಿರದ ಸಾಮುದಾಯಿಕ ಪಾಕಶಾಲೆ ಗುರುರಾಮ್ ದಾಸ್ ಲಂಗರ್ ಸಮೀಪ ಉಪಸ್ಥಿತರಿದ್ದ ಯಾತ್ರಿಕರು ಹಾಗೂ ಸ್ಥಳೀಯರ ಮೇಲೆ ಆರೋಪಿಯು ದಾಳಿ ನಡೆಸಿದ್ದಾನೆ. ಘಟನೆಯ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನೆಲೆಸಿತ್ತು.
ದಾಳಿಯಲ್ಲಿ ಗಾಯಗೊಂಡವರಲ್ಲಿ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್ಜಿಪಿಸಿ)ಯ ಇಬ್ಬರು ಸೇವಾದಾರರು ಕೂಡಾ ಸೇರಿದ್ದಾರೆ. ಓರ್ವ ಗಾಯಾಳುವಿನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಅಮೃತಸರದ ಶ್ರೀ ಗುರುರಾಮದಾಸ್ ವೈದ್ಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಘಟನೆಯ ಬಳಿಕ ದಾಳಿಕೋರನನ್ನು ಹಾಗೂ ಆತನ ಸಹಚರನನ್ನು ಸ್ಥಳದಲ್ಲಿದ್ದವರು ಹಿಡಿದಿದ್ದು,ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ದಾಳಿಗೆ ಮುನ್ನ ಆರೋಪಿಗಳು ಸ್ಥಳ ಪರಿಶೀಲನೆ ನಡೆಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಆನಂತರ ಮುಖ್ಯ ಆರೋಪಿಯು ಹೊರಕ್ಕೆ ತೆರಳಿ, ಕಬ್ಬಿಣದ ರಾಡ್ನೊಂದಿಗೆ ಹಿಂತಿರುಗಿದ್ದ. ಆನಂತರ ಆದ ಎಸ್ಜಿಪಿ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ್ದ. ಆತನನ್ನು ತಡೆಯು ಯತ್ನಿಸಿದ ಭಕ್ತಾದಿಗಳ ಮೇಲೂ ದಾಳಿ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಝುಲ್ಪಾನ್ ಎಂದು ಗುರುತಿಸಲಾಗಿದ್ದು, ಆತ ಹರ್ಯಾಣದ ನಿವಾಸಿಯೆಂದು ತಿಳಿದುಬಂದಿದೆ. ಆತನಿಗೂ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.
ಈ ದಾಳಿಯ ಹಿಂದಿರುವ ಉದ್ದೇಶವನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದ್ದು, ಭಯಭೀತರಾಗದಂತೆ ಜನತೆಗೆ ಮನವಿ ಮಾಡಿದ್ದಾರೆ.
ಈ ಘಟನೆಯು ಸ್ವರ್ಣ ಮಂದಿರದಲ್ಲಿ ಭಕ್ತಾದಿಗಳ ಸುರಕ್ಷತೆಯ ಬಗ್ಗೆ ಕಳವಳವನ್ನು ಸೃಷ್ಟಿಸಿದೆ.
ಕಳೆದ ವರ್ಷದ ಡಿಸೆಂಬರ್ನಲ್ಲಿ ಶಿರೋಮಣಿ ಅಕಾಲಿದಳದ ನಾಯಕರ ಹಾಗೂ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ಸಿಂಗ್ ಬಾದಲ್ ಅವರ ಮೇಲೆ ಕಳೆದ ವರ್ಷ ಸ್ವರ್ಣ ಮಂದಿರದ ಪ್ರವೇಶದ್ವಾರದಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿ, ಹತ್ಯೆಗೆ ಯತ್ನಿಸಿದ್ದ. ಆರೋಪಿಯನ್ನು ನಾರಾಯಣ್ ಸಿಂಗ್ ಚಾವುರಾ ಎಂದು ಗುರುತಿಸಲಾಗಿದ್ದು, ಬಾದಲ್ ಅವರ ಆಂಗರಕ್ಷಕ ಆತನ ಮೇಲೆ ಮುಗಿಬಿದ್ದು, ಸೆರೆಹಿಡಿದಿದ್ದರು.