ಮಹಾರಾಷ್ಟ್ರದಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಚಿಂತಾಜನಕ: ಶರದ್ ಪವಾರ್

ಶರದ್ ಪವಾರ್ | PC : PTI
ಬಾರಾಮತಿ: ಮರಾಠಾವಾಡ ಹಾಗೂ ವಿದರ್ಭ ವಲಯದಲ್ಲಿ ರೈತರ ಆತ್ಮಹತ್ಯೆ ಕುರಿತು ಶನಿವಾರ ಕಳವಳ ವ್ಯಕ್ತಪಡಿಸಿರುವ ಎನ್ಸಿಪಿ (ಎಸ್ಪಿ) ಅಧ್ಯಕ್ಷ ಶರದ್ ಪವಾರ್, ಕೇಂದ್ರ ಸರಕಾರ ರೈತರಿಗೆ ಅನುಕೂಲವಾಗುವ ನೀತಿಯನ್ನು ರೂಪಿಸುವಂತೆ ಆಗ್ರಹಿಸಿದ್ದಾರೆ.
ರಾಜ್ಯ ಪರಿಹಾರ ಹಾಗೂ ಪುನರ್ವಸತಿ ಇಲಾಖೆ ಬಿಡುಗಡೆ ಮಾಡಿದ ದತ್ತಾಂಶ ಮಹಾರಾಷ್ಟ್ರದಲ್ಲಿ 2024ರಲ್ಲಿ 2,635 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಬಹಿರಂಗಗೊಳಿಸಿದ ಹಿನ್ನೆಲೆಯಲ್ಲಿ ಶರದ್ ಪವಾರ್ ಅವರು ಈ ಹೇಳಿಕೆ ನೀಡಿದ್ದಾರೆ.
‘‘ಮರಾಠಾವಾಡ ಹಾಗೂ ವಿದರ್ಭದಿಂದ ಬಂದಿರುವ ಮಾಹಿತಿ ಚಿಂತಾಜನಕವಾಗಿದೆ. ನಾವು ವಿವಿಧ ಸ್ಥಳಗಳಿಂದ ನಿಖರ ದತ್ತಾಂಶವನ್ನು ಸಂಗ್ರಹಿಸುತ್ತಿದ್ದೇವೆ. ರೈತರಿಗೆ ನೆರವಾಗಲು ಕೇಂದ್ರ ಸರಕಾರ ನೀತಿ ರೂಪಿಸಬೇಕು’’ ಎಂದು ಅವರು ಬಾರಾಮತಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಎನ್ಸಿಪಿ (ಎಸ್ಪಿ) ನಾಯಕ ಜಯಂತ್ ಪಾಟಿಲ್ ಅವರು ಅಜಿತ್ ಪವಾರ್ ನೇತೃತ್ವದ ಬಣಕ್ಕೆ ಸೇರುವ ಸಂಭಾವ್ಯತೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಾಟೀಲ್ ಅವರ ಈ ಹಿಂದಿನ ಮಾಧ್ಯಮ ಹೇಳಿಕೆಯನ್ನು ಉಲ್ಲೇಖಿಸಿದರು.
ಎನ್ಸಿಪಿ (ಎಸ್ಪಿ)ಯ ರಾಜ್ಯಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸುತ್ತಿರುವ ಪಾಟಿಲ್ ಅವರು ತನ್ನ ಭವಿಷ್ಯದ ಕುರಿತು ನೀಡಿದ ಹೇಳಿಕೆ ಅವರು ಪಕ್ಷ ತೊರೆಯುತ್ತಾರೆ ಎಂಬ ವದಂತಿಗೆ ಕಾರಣವಾಗಿತ್ತು.
ಭಾರಾಮತಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪಾಟೀಲ್ ಅವರು ಶರದ್ ಪವಾರ್ ಅವರನ್ನು ಭೇಟಿಯಾಗಿದ್ದಾರೆ. ಅಲ್ಲದೆ, ತಾನು ಅತೃಪ್ತನಲ್ಲ. ತನ್ನ ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಎಂದು ತಿಳಿಸಿದ್ದಾರೆ.