ಜಾತಿ ಬಗ್ಗೆ ಮಾತಾಡುವವರನ್ನು ಬಲವಾಗಿ ಥಳಿಸುತ್ತೇನೆ: ನಿತಿನ್ ಗಡ್ಕರಿ ಎಚ್ಚರಿಕೆ

ನಿತಿನ್ ಗಡ್ಕರಿ | PC : PTI
ಮುಂಬೈ: “ಜಾತಿ ಬಗ್ಗೆ ಮಾತಾಡುವವರನ್ನು ಬಲವಾಗಿ ಥಳಿಸುತ್ತೇನೆ” ಎಂದು ಜಾತಿ ರಾಜಕಾರಣದಲ್ಲಿ ಮುಳುಗಿರುವ ರಾಜಕಾರಣಗಳಿಗೆ ರವಿವಾರ ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಎಚ್ಚರಿಸಿದ್ದಾರೆ.
ಸೆಂಟ್ರಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ನಿತಿನ್ ಗಡ್ಕರಿ, “ಜಾತಿ ಬಗ್ಗೆ ಮಾತನಾಡುವವರನ್ನು ನಾನು ಬಲವಾಗಿ ಥಳಿಸುತ್ತೇನೆ. ಜಾತಿ, ಧರ್ಮ, ಭಾಷೆ ಅಥವಾ ಲಿಂಗದ ಆಧಾರದಲ್ಲಿ ಯಾರಿಗೂ ತಾರತಮ್ಯವೆಸಗಬಾರದು” ಎಂದು ಎಚ್ಚರಿಕೆ ನೀಡಿದರು.
“ಯಾರು ಜಾತಿ ಬಗ್ಗೆ ಮಾತಾಡುತ್ತಾರೊ, ಅಂಥವರನ್ನು ಬಲವಾಗಿ ಥಳಿಸುತ್ತೇನೆ ಎಂದು 50,000 ಮಂದಿ ನೆರೆದಿದ್ದ ಸಭೆಯನ್ನುದ್ದೇಶಿಸಿ ಹೇಳಿದ್ದೆ. ಈ ಮಾತನ್ನು ಕೇಳಿದ ನನ್ನ ಸ್ನೇಹಿತ, ಈ ಮಾತಿನಿಂದ ನಿನಗೆ ಸ್ವಯಂ ಹಾನಿಯಾಗಬಹುದು ಎಂದು ಎಚ್ಚರಿಸಿದ. ಆದರೆ, ನನಗೆ ಅದರ ಬಗ್ಗೆ ಯಾವುದೇ ಚಿಂತೆಯಿಲ್ಲ. ಯಾರಾದರೂ ಚುನಾವಣೆಗಳಲ್ಲಿ ಪರಾಭವಗೊಂಡ ಕೂಡಲೇ ಅವರ ಜೀವನ ಅಂತ್ಯಗೊಳ್ಳುವುದಿಲ್ಲ. ನಾನು ನನ್ನ ಸಿದ್ಧಾಂತಗಳಿಗೆ ಬದ್ಧನಾಗಿದ್ದೇನೆ” ಎಂದು ಅವರು ಘೋಷಿಸಿದರು.
“ಯಾವುದೇ ವ್ಯಕ್ತಿ ತನ್ನ ಜಾತಿ, ವರ್ಗ, ಧರ್ಮ, ಭಾಷೆ ಅಥವಾ ಲಿಂಗದಿಂದ ಗುರುತಿಸಲ್ಪಡುವುದಿಲ್ಲ. ಬದಲಿಗೆ, ತನ್ನ ಗುಣದಿಂದ ಮಾತ್ರ ಗುರುತಿಸಲ್ಪಡುತ್ತಾನೆ. ಇದೇ ಕಾರಣಕ್ಕೆ ನಾವು ಈ ಸಂಗತಿಗಳನ್ನು ಆಧರಿಸಿ ಯಾರಿಗೂ ತಾರತಮ್ಯವೆಸಗುವುದಿಲ್ಲ” ಎಂದೂ ಅವರು ಸ್ಪಷ್ಟಪಡಿಸಿದರು.