ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಹಿರಿಯ ಬಿಜೆಡಿ ನಾಯಕ ಪ್ರಸನ್ನ ಆಚಾರ್ಯ

Update: 2024-03-15 10:16 GMT

ಪ್ರಸನ್ನ ಆಚಾರ್ಯ | Credit: X/@prasana_acharya

ಸಂಬಾಲ್ಪುರ್: ಹಿರಿಯ ಬಿಜೆಡಿ ನಾಯಕ ಹಾಗೂ ಮಾಜಿ ಸಚಿವ ಪ್ರಸನ್ನ ಆಚಾರ್ಯ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಬಾಲ್ಪುರ್ ನಲ್ಲಿನ ರೈರಾಖೋಲ್ ನಿಂದ ಕೇವಲ ಐದು ಕಿ.ಮೀ. ದೂರವಿರುವ ಬೆಲ್ದೀಹಿ ಬಳಿ ನಡೆದಿದೆ. ಅವರ ಕಾರು ಅನಿಲ ಟ್ಯಾಂಕರ್ ಗೆ ಢಿಕ್ಕಿ ಹೊಡೆದಿದ್ದರಿಂದ ಗುರುವಾರ ಮಧ್ಯರಾತ್ರಿ ಈ ಅಪಘಾತ ಸಂಭವಿಸಿದೆ.

ಅಪಘಾತ ಸಂಭವಿಸಿದಾಗ ಆಚಾರ್ಯ ತಮ್ಮ ಖಾಸಗಿ ಭದ್ರತಾಧಿಕಾರಿ ಹಾಗೂ ಚಾಲಕನೊಂದಿಗೆ ಬಾರ್ಗಢ್ ನತ್ತ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ ಸುಮಾರು 12.30ರ ವೇಳೆಗೆ ಎದುರಿನಿಂದ ಬರುತ್ತಿದ್ದ ಟ್ಯಾಂಕರ್ ಅವರ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದಿದ್ದರಿಂದ ಆಚಾರ್ಯ ಹಾಗೂ ಅವರ ಖಾಸಗಿ ಭದ್ರತಾಧಿಕಾರಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್, ಕಾರಿನಲ್ಲಿ ಏರ್ ಬ್ಯಾಗ್ ಗಳು ಇದ್ದಿದ್ದರಿಂದ ಕಾರಿನ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಜೀವಾಪಾಯದಿಂದ ಪಾರಾಗಿದ್ದಾನೆ.

ಮಾಜಿ ರಾಜ್ಯಸಭಾ ಸದಸ್ಯರಾದ ಪ್ರಸನ್ನ ಆಚಾರ್ಯರನ್ನು ಮೊದಲಿಗೆ ರೈರಾಖೋಲ್ ಉಪವಿಭಾಗ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಸಂಬಾಲ್ಪುರ್ ನಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ಅವರನ್ನು ದಾಖಲಾಗಿಸಲಾಗಿದೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಟ್ಯಾಂಕರ್ ಚಾಲಕನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರೈರಾಖೋಲ್ ವಿಧಾನಸಭಾ ಕ್ಷೇತ್ರದಿಂದ ಬಿಜೆಡಿ ಅಭ್ಯರ್ಥಿಯಾಗಲು ಪ್ರಸನ್ನ ಆಚಾರ್ಯ ಮುಂಚೂಣಿಯಲ್ಲಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News