ಎಸೆಸೆಲ್ಸಿ ಅನುತ್ತೀರ್ಣ: ಮಂಡ್ಯದ ಬಾಲಕಿ ಆತ್ಮಹತ್ಯೆ, ಮತ್ತೊಬ್ಬಳು ಗಂಭೀರ
ಮಂಡ್ಯ, ಮೇ 16: ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿನಿಯರಿಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಆ ಪೈಕಿ ಒಬ್ಬಳು ಸಾವನ್ನಪ್ಪಿ, ಮತ್ತೊಬ್ಬಳು ತೀವ್ರ ಅಸ್ವಸ್ಥಗೊಂಡಿರುವ ಘಟನೆ ಸೋಮವಾರ ಜಿಲ್ಲೆಯಲ್ಲಿ ನಡೆದಿದೆ.
ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದ ಜಾಹ್ನವಿ ಹಾಗೂ ಮದ್ದೂರು ತಾಲೂಕಿನ ಚಿನ್ನನದೊಡ್ಡಿ ಗ್ರಾಮದ ಪಾವನ ಆತ್ಮಹತ್ಯೆಗೆ ಪ್ರಯತ್ನಿಸಿದವರಾಗಿದ್ದು, ಜಾಹ್ನವಿ ಸಾವನ್ನಪ್ಪಿದ್ದಾರೆ. ಪಾವನ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಜಾಹ್ನವಿ ಕೀಲಾರ ಗ್ರಾಮದ ವಿಶ್ವೇಶ್ವರಯ್ಯ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು, ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿಷಯ ತಿಳಿಯುತ್ತಿದ್ದಂತೆ ಆತ್ಮಹತ್ಯೆ ಮಾಡಿಕೊಂಡಳೆಂದು ತಿಳಿದು ಬಂದಿದೆ.
ಅಂತೆಯೇ ಚಿನ್ನನದೊಡ್ಡಿಯ ಪಾವನ ಕೂಡ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದರಿಂದ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ತಕ್ಷಣ ಆಕೆಯನ್ನು ಜಿಲ್ಲಾಸ್ಪತ್ರೆಗೆ ತರಲಾಯಿತು. ಅಲ್ಲಿ ವೆಂಟಿಲೇಟರ್ ಇಲ್ಲವೆಂದು ಪೋಷಕರು ವೈದ್ಯರ ಜತೆ ವಾಗ್ವಾದ ನಡೆಸಿದರು.
ನಂತರ, ಪೋಷಕರು ಬಾಲಕಿಯನ್ನು ಮಂಡ್ಯ ನಗರದ ಹೊರವಲಯದ ಸ್ಯಾಂಜೋ ಆಸ್ಪತ್ರೆಗೆ ಸೇರಿಸಿದ್ದು, ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.