ಮಾತಾ ವೈಷ್ಣೋದೇವಿ ಮಂದಿರ ಸಮೀಪ ಕಾಡ್ಗ್ಗಿಚ್ಚು
ಜಮ್ಮು, ಮೇ 18: ಹಿಂದೂಗಳ ಪವಿತ್ರ ಯಾತ್ರಾಸ್ಥಳವಾದ ಮಾತಾ ವೈಷ್ಣೋದೇವಿ ಮಂದಿರ ಬಳಿಕ ಕಟ್ರಾದಲ್ಲಿ ಭೀಕರ ಕಾಡ್ಗಿಚ್ಚು ವ್ಯಾಪಿಸಿದ್ದು, ಬೆಂಕಿ ನಂದಿಸಲು ಸೇನೆಯ ಹೆಲಿಕಾಪ್ಟರ್ಗಳನ್ನು ಬಳಸಿಕೊಳ್ಳಲಾಗಿದೆ.
ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟ ಪ್ರದೇಶದಲ್ಲಿ ನಿನ್ನೆ ರಾತ್ರಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪವಿತ್ರ ಮಂದಿರಕ್ಕೆ ಯಾತ್ರಾರ್ಥಿಗಳು ತೆರಳಲು ಇದ್ದ ಹೆಲಿಕಾಪ್ಟರ್ ಯಾನ ಸೇವೆಯನ್ನು ಮುಂಜಾಗ್ರತಾ ಕ್ರಮವಾಗಿ ಇಂದು ಮುಂಜಾನೆ ಸ್ಥಗಿತಗೊಳಿಸಲಾಗಿದೆ. ಎಲ್ಲ ಹೆಲಿಕಾಪ್ಟರ್ಗಳನ್ನು ಕಟ್ರಾದಿಂದ ಮಾತಾ ವೈಷ್ಣೋದೇವಿ ವಿಶ್ವವಿದ್ಯಾನಿಲಯದ ಆವರಣಕ್ಕೆ ಸ್ಥಳಾಂತರಿಸಲಾಗಿದೆ. ವಿವಿ ಕ್ಯಾಂಪಸ್ ಕಾಡಿನಿಂದ ದೂರ ಇರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಅರಣ್ಯ ಹಾಗೂ ಅಗ್ನಿಶಾಮಕ ಇಲಾಖೆಯ ತಂಡಗಳು, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಯೋಧರು ಹಾಗೂ ಮಾತಾ ವೈಷ್ಣೋದೇವಿ ಮಂದಿರ ಟ್ರಸ್ಟ್ನಅಧಿಕಾರಿಗಳು, ಪೊಲೀಸರು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದು, ಭೀಕರ ಕಾಡ್ಗಿಚ್ಚು ತಡೆಯಲು ಅಹರ್ನಿಶಿ ಶ್ರಮಿಸುತ್ತಿದ್ದಾರೆ.
ಮುಂದಿನ ಕೆಲಗಂಟೆಗಳಲ್ಲಿ ಬೆಂಕಿಯನ್ನು ನಿಯಂತ್ರಿಸುವ ವಿಶ್ವಾಸವನ್ನು ಹಿರಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.