ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳದಿರುವುದು ಅಸ್ಸಾಂ ಸೋಲಿಗೆ ಕಾರಣ: ನಿತೀಶ್
ಹೊಸದಿಲ್ಲಿ, ಮೇ 19: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದಿರುವ ಕಾಂಗ್ರೆಸ್ನ ನಿರ್ಧಾರವೇ ಬಿಜೆಪಿಯ ಚೊಚ್ಚಲ ಗೆಲುವಿಗೆ ಕಾರಣವೆಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ಆರೋಪಿಸಿದ್ದಾರೆ.
ಅಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷವು ಎಐಯುಡಿಎಫ್ ಹಾಗೂ ಆರ್ಜೆಡಿಗಳ ಜೊತೆ ಮೈತ್ರಿ ಮಾಡಿಕೊಳ್ಳಬೇಕೆಂದು ಜೆಡಿಯು ಬಯಸಿತ್ತು. ಬಿಜೆಪಿ ಮೈತ್ರಿಕೂಟ ರಚಿಸಲು ಯಶಸ್ವಿಯಾದುದೇ ಅವರ ಅಭೂತಪೂರ್ವ ವಿಜಯಕ್ಕೆ ಕಾರಣವೆಂದು ನಿತೀಶ್ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಗಳ ಫಲಿತಾಂಶಗಳಲ್ಲಿ ಆಶ್ಚರ್ಯಗೊಳ್ಳುವಂತಹದು ಏನೂ ಇಲ್ಲ. ಅದು ಸಂಪೂರ್ಣ ನಿರೀಕ್ಷೆಯಂತೆಯೇ ಬಂದಿದೆಯೆಂದು ಅವರು ಅಭಿಪ್ರಾಯಿಸಿದ್ದಾರೆ.
ಚುನಾವಣೆಗಳಲ್ಲಿ ಗೆದ್ದವರಿಗೆ ಅಭಿನಂದನೆ ಸಲ್ಲಿಸಿರುವ ನಿತೀಶ್, ಫಲಿತಾಂಶ ಅನಿರೀಕ್ಷಿತವೇನಲ್ಲ. ಚುನಾವಣಾ ಪ್ರಚಾರದ ವೇಳೆ ಏನು ಕಂಡುಬಂದಿತ್ತೋ ಅದೇ ಆಗಿದೆ. ತಾವು ಕೆಲವು ಬಾರಿ ಕೇರಳಕ್ಕೆ ಹೋಗಿದ್ದೆವೆಂದು ನೀತೀಶ್ ತಿಳಿಸಿದ್ದಾರೆ.
ಬಂಗಾಳ ಬಿಹಾರಕ್ಕೆ ಹತ್ತಿರವಾದ ರಾಜ್ಯ. ಅಲ್ಲಿಂದ ಜನರು ಬಂದು ಹೋಗುತ್ತಿರುತ್ತಾರೆ. ಅವರಿಂದ ಪಶ್ಚಿಮ ಬಂಗಾಳದ ವಿದ್ಯಮಾನ ತಮಗೆ ತಿಳಿಯುತ್ತಿತ್ತು ಎಂದ ಅವರು, ಟಿಎಂಸಿಯ ವಿಜಯಕ್ಕಾಗಿ ಮಮತಾ ಬ್ಯಾನರ್ಜಿಯವರನ್ನು ಅಭಿನಂದಿಸಿದ್ದಾರೆ.