ತಪ್ಪು ಮಾಹಿತಿಯ ಜಾಹೀರಾತು: ರಾಮ್ ದೇವ್ ಕಂಪನಿಗೆ ಛೀಮಾರಿ
ಹೊಸದಿಲ್ಲಿ, ಮೇ 27: ಹೇರ್ ಆಯಿಲ್ ಹಾಗೂ ವಾಷಿಂಗ್ ಪೌಡರ್ ಬಗ್ಗೆ ಸುಳ್ಳು ಹಾಗೂ ದಿಕ್ಕು ತಪ್ಪಿಸುವ ಜಾಹೀರಾತುಗಳನ್ನು ನೀಡುವ ಕಾರಣಕ್ಕಾಗಿ ಬಾಬಾ ರಾಮ್ದೇವ್ ಅವರ ಪತಂಜಲಿ ಆಯುರ್ವೇದ ಕಂಪೆನಿಗೆ ಭಾರತದ ಜಾಹೀರಾತು ಗುಣಮಟ್ಟ ಮಂಡಳಿ (ಎಎಸ್ಸಿಐ) ಛೀಮಾರಿ ಹಾಕಿದೆ. ಪತಂಜಲಿ ಜಾಹೀರಾತುಗಳು ಮಾರುಕಟ್ಟೆಯಲ್ಲಿರುವ ಇತರ ಉತ್ಪನ್ನಗಳನ್ನು ನಿಂದಿಸುತ್ತಿವೆ ಎಂದು ಎಎಸ್ಸಿಐ ಆಕ್ಷೇಪಿಸಿದೆ.
ಜಾನ್ಸನ್ ಅಂಡ್ ಜಾನ್ಸನ್, ಅಮೆಝಾನ್ ಹಾಗೂ ಐಟಿಸಿ ಜಾಹೀರಾತುಗಳಲ್ಲಿ ಕೂಡಾ ದೋಷವಿರುವುದನ್ನು ಎಎಸ್ಸಿಐನ ಗ್ರಾಹಕ ದೂರು ಮಂಡಳಿ ಎತ್ತಿಹಿಡಿದಿದೆ. ಕಳೆದ ಮಾರ್ಚ್ನಲ್ಲಿ ಮಂಡಳಿ 155 ದೂರುಗಳನ್ನು ಸ್ವೀಕರಿಸಿದ್ದು, 90ನ್ನು ಎತ್ತಿಹಿಡಿದು, ಸುಳ್ಳು ಹಾಗೂ ದಾರಿ ತಪ್ಪಿಸುವಂಥ ಜಾಹೀರಾತುಗಳು ಎಂದು ಪರಿಗಣಿಸಿದೆ.
ಪತಂಜಲಿ ಕೇಶ ಕಾಂತಿ ನ್ಯಾಚುರಲ್ ಹೇರ್ ಕ್ಲೀನರ್ ಮತ್ತು ಎಣ್ಣೆ ಜಾಹೀರಾತಿನಲ್ಲಿ, "ಖನಿಜಯುಕ್ತ ಎಣ್ಣೆಗಳು ಕ್ಯಾನ್ಸರ್ಕಾರಕ ಅಂಶಗಳನ್ನು ಒಳಗೊಂಡಿದ್ದು, ಇದು ಕ್ಯಾನ್ಸರ್ಗೆ ಕಾರಣವಾಗಬಹುದು" ಎಂದು ಹೇಳಿರುವುದು ಸುಳ್ಳು, ದಿಕ್ಕುತಪ್ಪಿಸುವಂಥದ್ದು ಮತ್ತು ಅತಿರಂಜಿತಗೊಳಿಸುವ ಮೂಲಕ ಗೊಂದಲ ಮೂಡಿಸುವಂಥದ್ದು ಎಂದು ಮಂಡಳಿ ಅಭಿಪ್ರಾಯಪಟ್ಟಿದೆ. ಪತಂಜಲಿಯ ಕಾಚಿ ಗಣಿ ಸಾಸಿವೆ ಎಣ್ಣೆ ಜಾಹೀರಾತಿನ ವಿರುದ್ಧದ ಆರೋಪವನ್ನು ಕೂಡಾ ಮಂಡಳಿ ಎತ್ತಿಹಿಡಿದಿದೆ.