ಶ್ರೀಸಾಮಾನ್ಯನಿಗೂ ಇದೆ ಕೊಲ್ಲುವ ಹಕ್ಕು!
ಚಂಡಿಗಡ, ಮೇ 27: ಮಹಿಳೆಯರ ಮೇಲೆ ಅತ್ಯಾಚಾರವೆಸಗುವ, ಆ್ಯಸಿಡ್ ದಾಳಿ ಹಾಗೂ ಕೊಲೆಕೃತ್ಯವನ್ನು ಎಸಗುವ ಯಾವುದೇ ವ್ಯಕ್ತಿಯು ಸಿಕ್ಕಿಬಿದ್ದಲ್ಲಿ ಆತನನ್ನು ಹತ್ಯೆಗೈಯುವ ಹಕ್ಕು ಶ್ರೀಸಾಮಾನ್ಯನಿಗಿದೆಯೆಂದು ಹರ್ಯಾಣ ಪೊಲೀಸ್ ಮಹಾನಿರ್ದೇಶಕ ಕೆ.ಪಿ.ಸಿಂಗ್ ಅವರ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಇಂತಹ ಹೇಳಿಕೆಗಳು ಸಮಾಜದಲ್ಲಿ ನೈತಿಕ ಪೊಲೀಸ್ಗಿರಿಗೆ ಕುಮ್ಮಕ್ಕು ನೀಡುತ್ತಿವೆಯೆಂದು ಅಸಮಾಧಾನ ವ್ಯಕ್ತವಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಜಾಟ್ ಪ್ರತಿಭಟನೆಯ ವೇಳೆ ಭಾರೀ ಹಿಂಸಾಚಾರ ಭುಗಿಲೆದ್ದುದನ್ನು ಪ್ರಸ್ತಾಪಿಸಿದ ಸಂದರ್ಭದಲ್ಲಿ ಡಿಜಿಪಿ ಕೆ.ಪಿ.ಸಿಂಗ್ ಹೀಗೆ ಹೇಳಿದ್ದರು.
ಜಿಂದ್ನಲ್ಲಿ ಗುರುವಾರ ‘ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಪೊಲೀಸರ ಪಾತ್ರ’ ಎಂಬ ವಿಚಾರಸಂಕಿರಣದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರು ಈ ವಿವಾದಿತ ಹೇಳಿಕೆ ನೀಡಿದ್ದರು. ‘‘ಒಂದು ವೇಳೆ ಯಾರಾದರೂ ನಿಮ್ಮ ಮನೆಯನ್ನು ನಾಶಪಡಿಸಲೆತ್ನಿಸಿದಲ್ಲಿ ಅಥವಾ ಇನ್ನೊಬ್ಬರ ಜೀವವನ್ನು ತೆಗೆಯಲು ಯತ್ನಿಸಿದಲ್ಲಿ ಆತನನ್ನು ಕೊಲ್ಲಲು ಕಾನೂನು ಶ್ರೀಸಾಮಾನ್ಯನಿಗೆ ಅವಕಾಶ ನೀಡುತ್ತದೆ. ಈ ವಿಚಾರವು ಶ್ರೀಸಾಮಾನ್ಯರಿಗೆ ತಿಳಿದೇ ಇಲ್ಲ. ಯಾರಾದರೂ ಮಹಿಳೆಯರಿಗೆ ಅಪಮಾನ ಮಾಡಿದಲ್ಲಿ ಅಥವಾ ವ್ಯಕ್ತಿಯನ್ನು ಕೊಲ್ಲಲು ಬಯಸಿದಲ್ಲಿ, ಶ್ರೀಸಾಮಾನ್ಯನಿಗೆ ಕ್ರಿಮಿನಲ್ನ ಜೀವ ತೆಗೆಯುವ ಹಕ್ಕಿದೆ’’ ಎಂದು ಸಿಂಗ್ ಹೇಳಿದ್ದರು.