ರಾಜ್ಯಸಭಾ ಚುನಾವಣೆ:ಝೀ ಗ್ರೂಪ್ ಅಧ್ಯಕ್ಷ ಸುಭಾಶ್ಚಂದ್ರಗೆ ಬಿಜೆಪಿ ಬೆಂಬಲ?
ಹೊಸದಿಲ್ಲಿ, ಮೇ 31: ಜೂನ್ ಹನ್ನೊಂದರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಸೋಮವಾರ ಬಿಜೆಪಿ ಇನ್ನೂ ಆರು ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ. ಎರಡನೆ ಪಟ್ಟಿಯನ್ನು ಪ್ರಧಾನಿ ಮೋದಿ ಮತ್ತು ಪಕ್ಷಾಧ್ಯಕ್ಷ ಅಮಿತ್ ಶಾ ಜೊತೆಗೂಡಿ ಸೊಮವಾರ ಅಂತಿಮ ಗೊಳಿಸಿದ್ದಾರೆ. ಇದರಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು, ಪಕ್ಷದ ವಕ್ತಾರ ಎಂಜೆ ಅಕ್ಬರ್ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ವಿನಯ ಸಹಸ್ರಬುದ್ಧೆ ಒಳಗೊಂಡಿದ್ದು ಮೂಲಗಳ ಪ್ರಕಾರ ಬಿಜೆಪಿ ಝೀ ಗ್ರೂಪ್ನ ಮಾಲಕ ಸುಭಾಶ್ಚಂದ್ರರನ್ನು ಬೆಂಬಲಿಸಲಿದೆ. ಸುಭಾಸ್ ಚಂದ್ರ ಈಗಾಗಲೇ ಹರಿಯಾಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಪಕ್ಷ ಕೇಂದ್ರ ಸಚಿವ ಬೀರೇಂದ್ರ ಸಿಂಗ್ರನ್ನು ಹರಿಯಾಣದಿಂದ ಮೊದಲು ನಾಮನಿರ್ದೇಶನ ಮಾಡಿದೆ. ಈಗಲೂ ಹರಿಯಾಣದಿಂದ ಎರಡು ಸೀಟುಗಳು ಖಾಲಿಯಿವೆ.
ಸುರೇಶ್ಪ್ರಭು ಆಂಧ್ರ ಪ್ರದೇಶದಿಂದ ಮತ್ತು ಎಂಜೆ ಅಕ್ಬರ್ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಹೋಗಲಿದ್ದಾರೆ. ಸಹಸ್ರಬುದ್ಧೆ ಮತ್ತು ವಿಕಾಸ್ ಮಾಹಾತೆ ಮಹಾರಾಷ್ಟ್ರದಿಂದ ನಾಮನಿರ್ದೇಶಿಸಲ್ಪಟ್ಟಿದ್ದಾರೆ. ಉತ್ತರಪ್ರದೇಶದಿಂದ ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷ ಶಿವ ಪ್ರತಾಪ್ ಶುಕ್ಲರನ್ನು ರಾಜ್ಯಸಭೆಗೆ ಕಳುಹಿಸಲಾಗುವುದು. ಶುಕ್ಲಾ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿಯ ಸ್ಥಾನವನ್ನು ಪಡೆಯಲಿದ್ದಾರೆ. ಅವರು ಈಸಲ ಜಾರ್ಖಂಡ್ನಿಂದ ಸ್ಪರ್ಧಿಸುತ್ತಿದ್ದಾರೆ.
ಮಹೇಶ್ಪೊದ್ದಾರ್ ಜಾರ್ಖಂಡ್ನಿಂದ ಬಿಜೆಪಿಯ ಇನ್ನೊಬ್ಬ ಅಭ್ಯರ್ಥಿಯಾಗಿದ್ದಾರೆ. ಬಜೆಪಿಗೆ ಜಾರ್ಖಂಡ್ನಲ್ಲಿ 47 ಮತಗಳಿವೆ. ಆದ್ದರಿಂದ ಇನ್ನೊಬ್ಬ ಅಭ್ಯರ್ಥಿಗೆ 19 ಮತಗಳು ಉಳಿಯುತ್ತದೆ. ಪಕ್ಷದ ಮೂಲಗಳು ಇಲ್ಲಿ ಎರಡನೆ ಅಭ್ಯರ್ಥಿಯನ್ನು ಗೆಲುವಿನ ಭರವಸೆಯಲ್ಲಿ ನಿಲ್ಲಿಸಲಾಗಿದೆ ಎಂದು ತಿಳಿಸಿವೆ. ಮಹಾರಾಷ್ಟ್ರದಲ್ಲಿ ಬಿಜೆಪಿ ವಿಕಾಸ್ ಮಾಹಾತೆಯನ್ನು ನಾಮನಿರ್ದೇಶನ ಮಾಡಿದೆ.ಮುಖ್ಯಮಂತ್ರಿ ಫಡ್ನವೀಸ್ ಮಾಹಾತೆ ನಾಮನಿರ್ದೇಶನಕ್ಕೆ ಸಲಹೆ ನೀಡಿದ್ದರು ಎನ್ನಲಾಗಿದೆ.