ಅವರು ತನಿಖೆ ನಡೆಸಲಿ ಸತ್ಯ ಏನೆಂದು ಗೊತ್ತಾಗಲಿ: ಸೋನಿಯಾ ಗಾಂಧಿ ಸವಾಲು
ರಾಯಬರೇಲಿ, ಮೇ31: ತನ್ನ ಅಳಿಯ ರಾಬರ್ಟ್ವಾದ್ರಾರ ಹೆಸರು ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ ಭಂಡಾರಿಯೊಂದಿಗೆ ತಳಕು ಹಾಕಿಕೊಂಡಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒಂದು ವೇಳೆ ಇದು ನಿಜವೇ ಆಗಿದ್ದರೆ ಯಾವುದೇ ಮುಲಾಜಿಲ್ಲದೆ ತನಿಖೆ ನಡೆಸಲಿ, ಸತ್ಯಾಂಶ ಗೊತ್ತಾಗಲಿ ಎಂದು ಸೋನಿಯಾ ಗಾಂಧಿ ಮೋದಿ ಸರಕಾರಕ್ಕೆ ಸವಾಲು ಹಾಕಿದ್ದಾರೆ.
"ನಾನು ಇಂತಹದ್ದನ್ನೆಲ್ಲ ಇದೇ ಮೊದಲು ನೋಡಿದಲ್ಲ. ಮೋದೀಜಿ ಪ್ರಧಾನಿಯಾಗಿದ್ದಾರೆ, ದೊರೆ ಅಲ್ಲ. ನಮ್ಮ ದೇಶದಲ್ಲಿ ಬರ ಮತ್ತು ಬಡತನದಿಂದ ಜನರು ನರಳುತ್ತಿದ್ದಾರೆ. ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಇಂತಹ ವರ್ಷಾಚರಣೆ ಶೋಭೆಯಲ್ಲ"ಎಂದು ಸೋನಿಯಾ ಟೀಕಿಸಿದ್ದಾರೆ. ನ್ಯೂಸ್ ಚ್ಯಾನೆಲೊಂದು ಸಂಜಯ ಭಂಡಾರಿಯ ನೆಲೆಗಳಿಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದಾಗ ಅಲ್ಲಿ ಭಂಡಾರಿ ಮತ್ತು ವಾದ್ರಾರ ನಡುವೆ ಇರುವ ಸಂಬಂಧ ಬೆಳಕಿಗೆ ಬಂದಿದೆ ಎಂದು ವರದಿ ಮಾಡಿತ್ತು. ಜೊತೆಗೆ ಲಂಡನ್ನಲ್ಲಿ ವಾದ್ರಾ ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಅದು ಹೇಳಿ ಈ ವರದಿಯನ್ನು ವಾದ್ರಾ ಮತ್ತು ಅವರ ನಿಕಟವರ್ತಿ ಮನೋಜ್ ಅರೋರಾ ಕಳಿಸಿದ್ದ ಇಮೇಲ್ ಆಧಾರದಲ್ಲಿ ಪ್ರಸಾರ ಮಾಡಲಾಗಿತ್ತು . ಆದರೆ ಅದೇ ಚ್ಯಾನೆಲ್ ಇಮೇಲ್ನ ಪ್ರಾಮಾಣಿಕತೆಯನ್ನು ದೃಢೀಕರಿಸಲು ಸಾಧ್ಯವಾಗಿಲ್ಲ ಎಂದು ಹೇಳಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ " ಈ ಆರೋಪ ಸರಿಯಲ್ಲ. ಇಡಿ ಅಥವಾ ಐಟಿಯಿಂದ ಅವರಿಗೆ ಯಾವುದೇ ನೋಟಿಸ್ ಸಿಕ್ಕಿಲ್ಲ. ಚ್ಯಾನೆಲ್ ವರದಿ ತಪ್ಪಾಗಿದೆ" ಎಂದು ಹೇಳಿದ್ದಾರೆ.