ವರದಕ್ಷಿಣೆಗಾಗಿ ಸೊಸೆಯ ತಲೆ ಬೋಳಿಸಿ ಮನೆಯಿಂದ ಹೊರಹಾಕಿದ ಅತ್ತೆ ಮನೆಯವರು!

Update: 2016-06-01 05:31 GMT

ಗಾಝಿಪುರ, ಜೂನ್1: ವರದಕ್ಷಿಣೆಗಾಗಿ ಅತ್ತೆ ಮನೆಯವರು ಸೊಸೆಗೆ ಕಿರುಕುಳ ನೀಡಿ ನಂತರ ಸೊಸೆಯ ತಲೆ ಮುಂಡನ ನಡೆಸಿ ಮನೆಯಿಂದ ಹೊರ ಹಾಕಿದ ಘಟನೆ ಉತ್ತರ ಪ್ರದೇಶದ ಗಾಝಿಪುರದಿಂದ ವರದಿಯಾಗಿದೆ. ಮಾತ್ರವಲ್ಲ ಅವರು ಮಹಿಳೆಯನ್ನು ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದಾರೆ. ಈ ಘಟನೆ ಗಾಝಿಪುರ ಕರೀಮುದ್ದೀನ್ ಠಾಣಾವ್ಯಾಪ್ತಿಯಲ್ಲಿ ನಡೆದಿದೆ. ದೌರ್ಜನ್ಯಕ್ಕೊಳಗಾದ ಮಹಿಳೆ ಮೇ 6 ರಂದು ಪೊಲೀಸ್‌ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಯಾವುದೇ ಕ್ರಮಕೈಗೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳವಾರ ಮಹಿಳೆ ಎಸ್ಪಿಯವರನ್ನು ಭೇಟಿಯಾಗಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಕರೀಮುದ್ದೀನ್ ನಗರದ ಮಹಿಳಾ ಠಾಣೆಗೆ ದೂರು ಸ್ವೀಕರಿಸಿ ತನಿಖೆ ನಡೆಸಲು ಆದೇಶಿಸಿದ್ದಾರೆ.

ನಗರದ ಡಿಂಗುರ್‌ಪಟ್ಟಿ ಮೊಹಲ್ಲಾನಿವಾಸಿ ನೀಲಮ್ ದೇವಿ ವರದಕ್ಷಿಣೆ ಕಿರುಕುಳಕ್ಕೊಳಗಾದ ಮಹಿಳೆಯಾಗಿದ್ದು ಅವರ ವಿವಾಹವು 2005ರಲ್ಲಿ ರಾಮಬಚನ್ ಕುಶ್ವಾಹಾರ ಮಗ ಶೀನಿವಾಸ ಕುಶ್ವಾಹಾರೊಂದಿಗೆ ಹಿಂದೂ ಪದ್ಧತಿಯಂತೆ ವಿವಾಹವಾಗಿತ್ತು ಎಂದು ತನ್ನ ದೂರಿನಲ್ಲಿ ಎಸ್ಪಿಗೆ ತಿಳಿಸಿದ್ದಾರೆ. ಮದುವೆಯಾದ ಮೊದಲಲ್ಲಿ ಎಲ್ಲವೂ ಸರಿಯಾಗಿತ್ತು. ಕ್ರಮೇಣ ಪತಿಮನೆಯವರು ವರದಕ್ಷಿಣೆ ಬೇಡಿಕೆ ಮುಂದಿಟ್ಟು ತಲೆಬೋಳಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ತನ್ನ ಮಗುವನ್ನು ಕರೆದುಕೊಂಡು ನೀಲಂ ದೇವಿ ತವರು ಮನೆಗೆ ಹೋಗಿದ್ದರು. ನಂತರ ಕರೀಮುದ್ದೀನ್‌ಪುರ ನಗರ ಠಾಣೆಯಲ್ಲಿ ದೂರು ನೀಡಿದ್ದರು.ಆದರೆ ಪೊಲೀಸರು ಕೇಸು ದಾಖಲಿಸಿಲ್ಲಹಾಗೂ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಅಸಹಾಯಕಳಾದ ಮಹಿಳೆ ಎಸ್ಪಿಗೆ ದೂರು ನೀಡಿದ್ದಾರೆ. ಎಸ್ಪಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲು ಪೊಲೀಸರಿಗೆ ಆದೇಶಿಸಿದ್ದಾರೆ. ಆರೋಪಿಗಳ ವಿರುದ್ಧ ಶೀಘ್ರ ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News