ಸಿಪಿಎಂ ಗೆ ಮತ ನೀಡಿದ ಬಿಜೆಪಿ ಶಾಸಕ !
Update: 2016-06-03 18:30 GMT
ತಿರುವನಂತಪುರ, ಜೂ.3: ಕೇರಳ ವಿಧಾನಸಭಾಧ್ಯಕ್ಷರಾಗಿ ಸಿಪಿಎಂನ ಪಿ. ಶ್ರೀರಾಮಕೃಷ್ಣನ್ ಆಯ್ಕೆಯಾಗಿದ್ದಾರೆ. ಏಕೈಕ ಬಿಜೆಪಿ ಶಾಸಕ ಒ. ರಾಜಗೋಪಾಲ್ ಸಿಪಿಎಂ ಅಭ್ಯರ್ಥಿಗೆ ಮತ ನೀಡಿದ್ದಾರೆ.
ಇದೊಂದು ನಿರೀಕ್ಷಿತ ಆಯ್ಕೆಯೇ ಆಗಿದ್ದರೂ, ಇಂದು ಮುಂಜಾನೆ ನಡೆದ ಮತದಾನದಲ್ಲಿ ಶ್ರೀರಾಮಕೃಷ್ಣನ್, ಸಾಮಾನ್ಯ ನಿರೀಕ್ಷೆಗಿಂತ 2 ಮತಗಳನ್ನು ಹೆಚ್ಚು ಗಳಿಸಿದ್ದಾರೆ.
ಅವರು ಯುಡಿಎಫ್ನ ಕಾಂಗ್ರೆಸ್ ಪ್ರತಿಸ್ಪರ್ಧಿ ವಿ.ಪಿ. ಸಜೀಂದ್ರನ್ರನ್ನು 92-46 ಮತಗಳಿಂದ ಸೋಲಿಸಿದ್ದಾರೆ. ಸಜೀಂದ್ರನ್ರಿಗೆ ಯುಡಿಎಫ್ನ ಬಲಕ್ಕಿಂತ ಒಂದು ಮತ ಕಡಿಮೆ ದೊರೆತಿದೆ.
ಹಂಗಾಮಿ ಸ್ಪೀಕರ್ ಸಿಪಿಎಂನ ಎಸ್. ಸರ್ಮಾ ಮತ ಚಲಾಯಿಸಿಲ್ಲ. ಸ್ವತಂತ್ರ ಶಾಸಕ ಪಿ.ಸಿ. ಜಾರ್ಜ್, ಯಾರಿಗೂ ಮುದ್ರೆಯೊತ್ತದೆ ಮತಪತ್ರವನ್ನು ಮಡಚಿ ಪೆಟ್ಟಿಗೆಗೆ ಹಾಕಿದ ಕಾರಣ ಅವರ ಮತ ತಿರಸ್ಕೃತವಾಯಿತು.